ಟೆಕ್ಸಾಸ್ : ವಿದ್ಯಾರ್ಥಿ ಹರಿ ಸಾವಿನ ಕಾರಣ ಇನ್ನೂ ನಿಗೂಢ

ಇತ್ತ ಹರಿನಾಥ್ ಅವರ ಸ್ವಂತ ಊರು ಆದಿಲಾಬಾದ್ ಜಿಲ್ಲೆಯ ಬೆಲ್ಲಂಪಲ್ಲಿಯಲ್ಲಿ ಹರಿನಾಥ್ ಅವರ ಕುಟುಂಬದವರ ರೋದನ ಮುಗಿಲು ಮುಟ್ಟಿದೆ. ಹರಿನಾಥ್ ಅವರ ಮೃತ ದೇಹವನ್ನು ಅಮೆರಿಕದಿಂದ ಭಾರತಕ್ಕೆ ಕಳಿಸಲು ಬೇಕಾದ ವ್ಯವಸ್ಥೆ ಮಾಡುವ ಭರವಸೆಯನ್ನು ಅಮೆರಿಕದ ತೆಲುಗು ಸಂಘ(ATA) ನೀಡಿದೆ.
ಆದರೆ, ಹರಿನಾಥ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. 31 ವರ್ಷದ ಸಂಶೋಧನಾ ವಿದ್ಯಾರ್ಥಿ ಹರಿನಾಥ್ 2009ರ ಆಗಸ್ಟ್ ನಲ್ಲಿ ಅಮೆರಿಕದ ಪ್ರತಿಷ್ಠಿತ ಟೆಕ್ಸಾಸ್ ವಿಶ್ವವಿದ್ಯಾಲಯದ ಹೆಲ್ತ್ ಸೈನ್ಸ್ ಸೆಂಟರ್ ಪ್ರವೇಶಿಸಿದರು.
ಕ್ಯಾನ್ಸರ್ ನಿರೋಧಕ ಔಷಧಿ ಬಗ್ಗೆ ಸಂಶೋಧನೆ ನಿರತರಾಗಿದ್ದ ಹರಿನಾಥ್ ಅವರನ್ನು ಕೊಲ್ಲಲು ಕಾರಣಗಳಿರಲಿಲ್ಲ. ಹಣದಾಸೆಗೆ ದುಷ್ಕರ್ಮಿಗಳು ಹರಿನಾಥ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲದಿರುವುದು ಆತಂಕ ಹೆಚ್ಚಿಸಿದೆ.
ಹರಿನಾಥ್ ಅವರನ್ನು ಕೊಲ್ಲುವ ಮುನ್ನ ದುಷ್ಕರ್ಮಿಗಳ ಗುಂಪು ಅವರನ್ನು ಹಣಕ್ಕಾಗಿ ಪೀಡಿಸಿದ್ದಾರೆ, ಹರಿನಾಥ್ ನಿರಾಕರಿಸಿದ್ದಾಗ ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಎಲ್ಲೆಡೆ ವರದಿಯಾಗಿದೆ.
ಆದಿಲಾಬಾದ್ ನಲ್ಲಿ ಹರಿನಾಥ್ ಅವರ ತಂದೆ ರಮೇಶ್ ಸಣ್ಣ ಪಾನ್ ಶಾಪ್ ನಡೆಸುತ್ತಾರೆ. ಸಣ್ಣ ಕುಟುಂಬಕ್ಕೆ ಹರಿನಾಥ್ ಆಸರೆಯಾಗಿದ್ದರು. ಈಗ ಸಾವಿನ ಸುದ್ದಿ ಕೇಳಿ ತಕ್ಷಣ ಆದಿಲಾಬಾದಿನ ಹೌಸಿಂಗ್ ಬೋರ್ಡ್ ಕಾಲೋನಿಯಿಂದ ಹೈದರಾಬಾದಿನ ಯುಸ್ ರಾಯಭಾರಿ ಕಚೇರಿ ಕಡೆಗೆ ಕುಟುಂಬದವರು ಧಾವಿಸಿದ್ದಾರೆ.
ಮಗನ ಸಾವಿನ ಸುದ್ದಿ ಕೇಳಿದ ತಾಯಿ ಪದ್ಮಾ ಕುಸಿದು ಬಿದ್ದಿದ್ದು ಸೂಕ್ತ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.
ಕ್ಯಾನ್ಸರ್ ಗೆಡ್ಡೆಯಿಂದ ಬಳಲುವವರಿಗೆ ಮುಕ್ತಿ ಕೊಡಿಸಲು ಹೊಸ ವಿಧಾನವನ್ನು ಸಂಶೋಧನೆ ಮಾಡುತ್ತಿದ್ದ ಹರಿನಾಥ್ ಅವರ ಸಾವಿನ ಬಗ್ಗೆ ಅವರ ಗೈಡ್ ಡಾ ಕಾಲ್ಕುಂಟೆ ಶ್ರೀವೇಣುಗೋಪಾಲ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ವಾರಂಗಲ್ ನ ಕಾಕಾತಿಯಾ ವಿಶ್ವವಿದ್ಯಾಲಯದಲ್ಲಿ ಫಾರ್ಮಸಿಯಲ್ಲಿ ಪದವಿ ಪಡೆದಿದ್ದ ಹರಿನಾಥ್, 2007 ಅದೇ ವಿವಿಯಿಂದ ಮಾಸ್ಟರ್ ಡಿಗ್ರಿ ಪಡೆದಿದ್ದರು. ಹರಿನಾಥ್ ಅವರಿಗೆ ಒಬ್ಬ ತಮ್ಮ ಹಾಗೂ ತಂಗಿ ಇದ್ದಾರೆ. ಹರಿನಾಥ್ ಅವರ ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರು ಕಾಯುತ್ತಿದ್ದು, ಅಮೆರಿಕದ ತೆಲುಗು ಸಂಘದೊಡನೆ ನಿರಂತರ ಸಂಪರ್ಕದಲ್ಲಿದ್ದಾರೆ.












Click it and Unblock the Notifications