ಫೇಸ್ ಬುಕ್ ಕಾಮೆಂಟ್ ಗೆ ನೊಂದು ಸೂಸೈಡ್

ಜಲಂಧರ್ ನ ಎಂಸಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಶರ್ಮ ತನ್ನ ಕಾಲೇಜಿನ ಹಾಸ್ಟೆಲ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.ತನ್ನ ಆತ್ಮಹತ್ಯೆಗೆ ಫೇಸ್ ಬುಕ್ ನಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಾಡಿದ ಕಾಮೆಂಟ್ ಕಾರಣ ಎಂದು 20 ವರ್ಷದ ವಿದ್ಯಾರ್ಥಿನಿ ಸೂಸೈಡ್ ನೋಟ್ ನಲ್ಲಿ ಹೇಳಿದ್ದಾಳೆ.
ಡೆತ್ ನೋಟ್ ನಲ್ಲಿ ಹೆಸರಿಸಲಾದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇಬ್ಬರು ವಿದ್ಯಾರ್ಥಿಗಳು ತಾವು ಏನು ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
SOS ಗ್ರಾಮ ಸರ್ಕಾರೇತರ ಸಂಸ್ಥೆ ನಡೆಸುವ ಅನಾಥಾಶ್ರಮದಲ್ಲಿ ರಕ್ಷಾ ಶರ್ಮ ನೆಲೆಸಿದ್ದರು. 1997ರಲ್ಲಿ ಉಗ್ರರ ದಾಳಿ ರಕ್ಷಾ ಶರ್ಮ ಅವರ ಪೋಷಕರು ಬಲಿಯಾದ ಮೇಲೆ ರಕ್ಷಾ ಹಾಗೂ ಆಕೆ ಅಕ್ಕ ಅನಾಥರಾಗಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಒಬ್ಬನಾದ ಲವಪ್ರೀತ್ ಸಿಂಗ್ (21) ಈ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ರಕ್ಷಾ ನನ್ನನ್ನು ಅಣ್ಣನಂತೆ ಕಾಣುತ್ತಿದ್ದಳು. ಸುಮಾರು ಮುರ್ನಾಲ್ಕು ತಿಂಗಳಿನಿಂದ ಆಕೆ ಜೊತೆ ಮಾತನಾಡಿಲ್ಲ. ನಾನು ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನಾನಂತೂ ಆಕೆ ಆತ್ಮಹತ್ಯೆಗೆ ಕಾರಣನಲ್ಲ ಎಂದಿದ್ದಾನೆ.
ಮತ್ತೊಬ್ಬ ಆರೋಪಿ ದೀಪಕ್ ಸೈನಿ(21) ತಾನು ರಕ್ಷಾ ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ .ಆದರೆ, ನನ್ನ ಕಾಮೆಂಟ್ ಗೆ ರಕ್ಷಾ ಪ್ರತಿಕ್ರಿಯೆ ನೀಡಿದ್ದಳು ಹಾಗೂ ಆಕೆ ಅದರಿಂದ ಮನಸ್ಸು ಕೆಡಿಸಿಕೊಂಡಿರಲಿಲ್ಲ ಎಂದಿದ್ದಾನೆ.
ರಕ್ಷಾ ಹಾಸ್ಟೆಲ್ ಕೋಣೆಯಲ್ಲಿ ಕಂಪ್ಯೂಟರ್ ಇಲ್ಲವಾದ್ದರಿಂದ ರಕ್ಷಾ ಫೇಸ್ ಬುಕ್ ಖಾತೆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ವಿಚಾರಣೆ ಕೈಗೊಳ್ಳುವುದಾಗಿ ಜಲಂಧರ್ ನ ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 306ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರ ಫೇಸ್ ಬುಕ್ ಖಾತೆ ಪರಿಶೀಲನೆ ನಡೆಸಲಾಗುತ್ತಿದೆ. ರಕ್ಷಾ ಜೊತೆಗೆ ಲವ್ ಪ್ರೀತ್ ಸಿಂಗ್ ನಡೆಸಿರುವ ಸಂಭಾಷಣೆ ಹಾಗೂ ಕಳಿಸಿರುವ ಎಸ್ ಎಂಎಸ್ ಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಜಲಂಧರ್ ನ ಡಿಎಸ್ ಪಿ ಬಾಲ್ಕರ್ ಸಿಂಗ್ ಹೇಳಿದ್ದಾರೆ.












Click it and Unblock the Notifications