ಸಾಯಿ ಬಾಬಾ ಮಂದಿರ ಕೋಟ್ಯಂತರ ವಂಚನೆ ಎಸಿಬಿ ತನಿಖೆಗೆ?

ಸೋಮವಾರ(ಆ.13) ಸಾಯಿಮಂದಿರದಲ್ಲಿ ಟ್ರಸ್ಟಿಗಳ ನಡುವೆ ಭೀಕರ ಕಾದಾಟ ನಡೆದಿದೆ. ಇದರಿಂದ ಭಕ್ತಾದಿಗಳು ಭಯಭೀತರಾಗಿದ್ದು, ಪರಿಸ್ಥಿತಿ ಈಗ ಶಾಂತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶ್ರೀಶಿರಡಿ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ನ ಮಾಜಿ ಮುಖ್ಯಸ್ಥ ಜಯಸ್ವಾಮಿ ಅವರ ಮೇಲೆ ಅಕ್ರಮವಾಗಿ ಟ್ರಸ್ಟ್ ಹಣ ಬಳಕೆ ಮಾಡಿಕೊಂಡಿರುವ ಆರೋಪವಿದೆ. ಸುಮಾರು 10 ಕೋಟಿ ರು ಅಕ್ರಮ ಎಸೆಗಿರುವ ಆರೋಪ ಇವರ ಮೇಲಿದೆ.
ಈ ಬಗ್ಗೆ ಮುಜರಾಯಿ ಇಲಾಖೆ ಉಪಾಯುಕ್ತ ರಾಮಮೂರ್ತಿ ಅವರು ತನಿಖೆ ನಡೆಸುತ್ತಿದ್ದಾರೆ. ಸೋಮವಾರ ರಾಮಮೂರ್ತಿ ಅವರು ಟ್ರಸ್ಟ್ ಅವ್ಯವಹಾರದ ಬಗ್ಗೆ ತನಿಖೆ ನಡೆಸುವ ಸಂದರ್ಭದಲ್ಲಿ ಜಯಸ್ವಾಮಿ ಅವರು ತಮ್ಮ ಬೆಂಬಲಿಗರೊಂದಿಗೆ ದೇಗುಲ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ, ಹಾಲಿ ಟ್ರಸ್ಟಿ ಗಳು ಅವರನ್ನು ಬಾಗಿಲಲ್ಲೇ ತಡೆದು ನಿಲ್ಲಿಸಿದ್ದಾರೆ.
ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಟ್ರಸ್ಟಿಗಳ ಕಾದಾಟ ನೋಡಿ ಕಂಗೆಟ್ಟ ಭಕ್ತರು ಚೆಲ್ಲಾಪಿಲ್ಲಿಯಾಗಿ ದಿಕ್ಕೆಟ್ಟು ಓಡಿದ್ದಾರೆ. ತನಿಖಾಧಿಕಾರಿ ಕೂಡಾ ದಿಕ್ಕುತೋಚದೆ ದೇಗುಲದಿಂದ ಹೊರ ಹೋಗಿದ್ದಾರೆ. ಈ ನಡುವೆ ಮುಜರಾಯಿ ಖಾತೆ ಸಚಿವ ಸಿ ರಾಮಚಂದ್ರಯ್ಯ ಅವರು ತನಿಖೆಯನ್ನು 6 ವಾರಗಳ ಕಾಲ ಮುಂದೂಡುವಂತೆ ಆದೇಶಿಸಿದ್ದಾರೆ.
1986ರಿಂದ ಟ್ರಸ್ಟಿಯಾಗಿದ್ದ ಜಯಸ್ವಾಮಿ ಅವರು ಸುಮಾರು 10 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾರ್ಯದರ್ಶಿ ಎ ನರಸಿಂಹ ರಾವ್ ಅವರು ಸರೂರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಭಕ್ತಾದಿಗಳು ನೀಡುವ ದಾನ ದತ್ತಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. 1984ರಲ್ಲಿ ಶಿರಡಿ ಭಕ್ತ ಮಂಡಲಿಯಿಂದ ಸ್ಥಾಪಿತವಾದ ಈ ದೇಗುಲ ಸುಮಾರು 500 ಚದರ ಯಾರ್ಡ್ ಸರ್ಕಾರಿ ಭೂಮಿ ಹೊಂದಿದೆ. ಟ್ರಸ್ಟ್ ಹೆಸರನ್ನು ನಾಲ್ಕು ಬಾರಿ ಬದಲಾಯಿಸಲಾಗಿತ್ತು. ಸದ್ಯಕ್ಕೆ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಎಂಬ ಹೆಸರು ಉಳಿದಿದೆ.
ಟ್ರಸ್ಟ್ ವತಿಯಿಂದ 18 ಲಕ್ಷ ವೆಚ್ಚದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. 1.50 ರಿಂದ 2 ಕೋಟಿ ರು ಧರ್ಮಶಾಲೆ ಕಟ್ಟಿಸಲು ಬಳಸಲಾಗಿದೆ. ಆದರೆ, ಹುಂಡಿ ಕಾಸು ಕೂಡಾ ಬಿಡದಂತೆ ಜಯರಾಮ್ ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಮುಜರಾಯಿ ಇಲಾಖೆ ತನಿಖೆಗಿಂತ ಎಸಿಬಿ ತನಿಖೆ ಸೂಕ್ತ ಎಂದು ಸುಮಾರು 40ಕ್ಕೂ ಅಧಿಕ ಟ್ರಸ್ಟಿಗಳು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications