ಜಾಮೀನು ಷರತ್ತು ಸಡಿಲ: ಬಿಎಸ್ವೈಗೆ ಸಿಕ್ತು ಸ್ವಾತಂತ್ರ್ಯ
ಹೌದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುವಾಗಿ ನಿರೀಕ್ಷಿಸುತ್ತಿದ್ದ ವೈಯಕ್ತಿಕ ಸ್ವಾತಂತ್ರ್ಯವು ರಾಷ್ಟ್ರದ 65ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಿಕ್ಕಿದ್ದು, ಅವರನ್ನು ಮತ್ತಷ್ಟು ಉಲ್ಲಸಿತರನ್ನಾಗಿಸಿದೆ. ಇದರಿಂದ ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಇಂದೇ ಸ್ವಾತಂತ್ರ್ಯ ಲಭಿಸಿದಂತಾಗಿದೆ.
ಗಣಿ ದೇಣಿಗೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು ಮಂಗಳವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನನ್ನು ಸಡಿಲಿಸಿದ್ದು, ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುವುದಕ್ಕೆ ನ್ಯಾಯಧೀಶ ಸುಭಾಷ್ ಬಶೆಟ್ಟಿ ಆದಿ ಅವರ ಏಕಸದಸ್ಯ ಪೀಠವು ಅನುಮತಿ ನೀಡಿದೆ.
ಇದರಿಂದಾಗಿ ಯಡಿಯೂರಪ್ಪನವರು ಭಾರತದಲ್ಲಿ ಎಲ್ಲಿ ಬೇಕಾದರೂ ಸಂಚರಿಸಬಹುದು. ಆದರೆ ದೇಶ ಬಿಟ್ಟು ಹೋಗುವಂತಿಲ್ಲ. ಇದರಿಂದ ಯಡಿಯೂರಪ್ಪಗೆ ಜಾಮೀನು ನೀಡುವುದೇ ಬೇಡ ಎಂದು ಕೊಂಚ ತಡವಾಗಿ ಪ್ರತಿವಾದ ಮಂಡಿಸಿದ್ದ ಸಿಬಿಐಗೆ ಕೊಂಚ ಮಟ್ಟಿಗೆ ಮುಖಭಂಗವಾಗಿದೆ.
ಗಣಿ ದೇಣಿಗೆ ಪ್ರಕರಣದಲ್ಲಿ ಈ ಹಿಂದೆ ಜಾಮೀನು ನೀಡುವಾಗ 'ಬೆಂಗಳೂರು ಬಿಟ್ಟು ಹೊರ ಹೋಗಬಾರದು' ಎಂದು ನ್ಯಾ. ಸುಭಾಷ್ ಬಶೆಟ್ಟಿ ಆದಿ ಅವರು ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿದ್ದರು. ಆದರೆ 'ತಾನು ಬರ ಪ್ರವಾಸ ಮಾಡಬೇಕಾಗಿದೆ. ಹಾಗಾಗಿ ಷರತ್ತು ಸಡಿಲಿಸಿ' ಎಂದು ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು.
ಇದನ್ನು ವಿರೋಧಿಸಿ 'ಯಡಿಯೂರಪ್ಪನವರು ಷರತ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಾಕ್ಷ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಜಾಮೀನು ಸಡಿಲಿಕೆ, ರಿಯಾಯಿತಿ ಬೇಡ' ಎಂದು ಕೋರ್ಟಿಗೆ ಸಿಬಿಐ ಸೋಮವಾರ ಮೊರೆಯಿಟ್ಟಿತ್ತು.
ಅದನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯ ಹೆಸರಿನಲ್ಲಿ ಜಾಮೀನುದಾರರಿಗೆ ಅನಗತ್ಯವಾಗಿ ಕಿರುಕುಳ ನೀಡುವಂತಿಲ್ಲ. ಆದರೆ ಸಿಬಿಐ ಸೂಚಿಸಿದಾಗ ವಿಚಾರಣೆಗೆ ಹಾಜರಾಗುವುದಾಗಿ ಯಡಿಯೂರಪ್ಪ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹಾಗಾಗಿ, ಪ್ರವಾಸಕ್ಕೆ ಅನುಮತಿ ನೀಡಿ, ಷರತ್ತನ್ನು ಸಡಿಲಿಸುತ್ತಿರುವುದಾಗಿ ಕೋರ್ಟ್ ಇಂದು ಹೇಳಿತು.
ಇನ್ನೂ ಅರ್ಜಿ ಸಲ್ಲಿಸದ ಸಿಬಿಐ: ಈ ಮಧ್ಯೆ, ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಆ ವಿಚಾರವನ್ನು ಹೈಕೋರ್ಟಿನಲ್ಲೇ ಇತ್ಯರ್ಥಪಡಿಸಿಕೊಳ್ಳಿ ಎಂದು ಸೂಚಿಸಿತ್ತು. ಆದರೆ ಸಿಬಿಐ ಈ ಸಂಬಂಧ ಹೈಕೋರ್ಟಿನಲ್ಲಿ ಮರು ಅರ್ಜಿ ಸಲ್ಲಿಸುವ ಗೋಜಿಗೇ ಹೋಗಿಲ್ಲ.