'ನನ್ನ ಜೀವನ ಹಾಳು ಮಾಡಿದ್ಲು, ಅದ್ಕೆ ಸಾಯ್ಸಿಬಿಟ್ಟೆ'
ಪೂನಾದ ಬಿಟೆಕ್ ವಿದ್ಯಾರ್ಥಿ 21 ವರ್ಷದ ಚೇತನ್ ಶೆರೋನ್ ಈ ಕುಕೃತ್ಯವೆಸಗಿದ ಆರೋಪಿ. 18ರ ವರ್ಷಾ ಯಾದವ್ ಮೃತ ದುರ್ದೈವಿ. ರಜೆ ಕಾಲ ಬಂದಿದ್ದರಿಂದ ಮನೆಗೆ ತೆರಳಲು ಗುರು ಜಾಂಬೇಶ್ವರ ವಿಜ್ಞಾನ ವಿಶ್ವವಿದ್ಯಾಲಯದ (GJUST) ಹಾಸ್ಟೆಲಿನಿಂದ ವರ್ಷಾ ಹೊರಬಂದಾಗ ಚೇತನ್ ಆಕೆಯ ಮೇಲೆ ಮುಗಿಬಿದ್ದಿದ್ದಾನೆ. ವರ್ಷಾ ಇನ್ನೇನು ಆಟೋ ರಿಕ್ಷಾ ಹತ್ತಬೇಕು ಅನ್ನುವಾಗ ಚೇತನ್ ಚಾಕುವಿನಿಂದ ಆಕೆಯ ಕತ್ತನ್ನು ಸೀಳಿ ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿನಿಯ ಚೀರಾಟವನ್ನು ಕೇಳಿದ ವಿವಿ ಭದ್ರತಾ ಸಿಬ್ಬಂದಿ ಜಾಗೃತರಾಗಿದ್ದಾರೆ. ತಕ್ಷಣ ಆರೋಪಿ ಚೇತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು GJUST ವೈಸ್ ಛಾನ್ಸಲರ್ ಎಂಎಲ್ ರಂಗಾ ತಿಳಿಸಿದ್ದಾರೆ.
ಅವಳು ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟಳು. ಅದಕ್ಕೆ ಅವಳನ್ನು ಸಾಯಿಸಿಬಿಟ್ಟೆ' ಎಂದು ಚೇತನ್ ಪೊಲೀಸರಿಗೆ ತಿಳಿಸಿದ್ದಾನೆ. ಅಂದಹಾಗೆ, ಚೇತನ್ ರೋಹ್ಟಕ್ ನ ಪ್ರೇಮ್ ನಗರದ ನಿವಾಸಿ. ಮಾಜಿ ಸೇನಾಧಿಕಾರಿಯ ಮಗ.
ಚೇತನದು ಏಕಮುಖ ಪ್ರೇಮವಾಗಿತ್ತು, ಸುಮಾರು ಕಾಲದಿಂದ ವರ್ಷಾಳ ಹಿಂದೆ ಬಿದ್ದಿದ್ದ. ಕೊನೆಗೆ ತನ್ನ ಪ್ರೇಮ ಭಗ್ನವಾಗುತ್ತಿದೆ ಎಂಬುದನ್ನು ಅರಿತು ಆಕೆಯನ್ನು ಇರಿದು ಸಾಯಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಸತೀಶ್ ಹೇಳಿದ್ದಾರೆ. ಕಳೇದ ವರ್ಷ ಕೋಟಾದಲ್ಲಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಇವರಿಬ್ಬರೂ ಪರಸ್ಪರ ಪರಿಚಿತರಾಗಿದ್ದರು.
ಆರಂಭದಿಂದಲೇ ಚೇತನ್ ಗೆ ವರ್ಷಾಳತ್ತ ಪ್ರೇಮಾಂಕುರವಾಗಿದೆ. ಆದರೆ ಅದಕ್ಕೆ ವರ್ಷಾ ಸೊಪ್ಪು ಹಾಕಿಲ್ಲ. ಇದರಿಂದ ಬೇಸತ್ತು ಚೇತನ್ ಪ್ರೇಮಪೀಡನೆಯಲ್ಲಿ ತೊಡಗಿದ್ದ. ಕೊನೆಗೆ ಸಾಯಿಸಿಯೂ ಬಿಟ್ಟ ಎಂದು ಪೊಲೀಸರು ಹೇಳಿದ್ದಾರೆ. ವರ್ಷಾಳ ಅಪ್ಪ-ಅಮ್ಮ GJUST ಕ್ಯಾಂಪಸ್ಸಿನಿಂದ 10 ಕಿ.ಮೀ. ಸಮೀಪದಲ್ಲಿರುವ ಬಿಎಸ್ಎಫ್ ಕಾಲೊನಿಯಲ್ಲಿ ವಾಸವಾಗಿದ್ದಾರೆ.