ಮೆಡಿಕಲ್ ಟೆಸ್ಟ್: ನಿತ್ಯಾನಂದಗೆ ತಾತ್ಕಾಲಿಕ ಜಯ
ನಿತ್ಯಾನಂದ ಸ್ವಾಮಿ ಪರ ಖ್ಯಾತ ವಕೀಲ ಸಿವಿ ನಾಗೇಶ್ ಅವರು ಮಂಡಿಸಿರುವ ವಾದ ಸರಣಿಗೆ ಬೆಚ್ಚಿಬಿದ್ದಿರುವ ಸಿಐಡಿ ಪೊಲೀಸರು ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಒಂದು ವಾರದ ಕಾಲಾವಕಾಶ ಕೋರಿದೆ. ಹಾಗಾಗಿ, ಇನ್ನೊಂದು ವಾರದಲ್ಲಿ ಸಿಐಡಿ ಪೊಲೀಸರು ನಿತ್ಯಾನಂದ ಮೇಲ್ಮನವಿಗೆ ಉತ್ತರ ನೀಡಬೇಕಾಗಿದೆ. ಆ ಬಳಿಕ, ಆಗಸ್ಟ್ 22ರಂದು ಕೋರ್ಟ್ ಎರಡೂ ಕಡೆಯ ವಾದವನ್ನು ಪರಿಶೀಲಿಸಿ, ತನ್ನ ತೀರ್ಪನ್ನು ಹೊರಡಿಸಲಿದೆ. ಅಲ್ಲಿವರೆಗೂ ನಿತ್ಯಾನಂದ ಸ್ವಾಮಿಗೆ ಬ್ರೇಕ್.
ಬೆಳಗಿನ ಸುದ್ದಿ: ಸಿಐಡಿ ಪೊಲೀಸರು ತನ್ನ ಪುರುಷತ್ವ ಪರೀಕ್ಷೆಗೆ ಆದೇಶಿಸಿರುವುದಕ್ಕೆ ತಕರಾರು ಎತ್ತಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಅಸಲಿಗೆ ಪೊಲೀಸರಿಗೆ ಆ ಅಧಿಕಾರವೇ ಇಲ್ಲ ಎಂದು ಭರ್ಜರಿ ಸವಾಲ್ ಹಾಕಿದ್ದಾರೆ.
ಈ ಸಂಬಂಧ ಖ್ಯಾತ ವಕೀಲ ಸಿವಿ ನಾಗೇಶ್ ಅವರು ನಿತ್ಯಾನಂದ ಸ್ವಾಮಿ ಪರ ನ್ಯಾಯಸಮ್ಮತ ವಾದ ಮಂಡಿಸಿದ್ದಾರೆ. ಇದರಿಂದ ಬಿಡದಿ ಸ್ವಾಮಿಗೆ ಇಂದು ಜಯ ಸಿಕ್ಕಿದರೆ ಆಶ್ಚರ್ಯವೇನೂ ಇಲ್ಲ.
ನಟಿ ರಂಜಿತಾ ರಾಸಲೀಲೆ ಪ್ರಕರಣದಲ್ಲಿ ತನ್ನ ಕಕ್ಷಿದಾರರನ್ನು ತಪ್ಪಿತಸ್ಥ ಎಂಬಂತೆ ಬಿಂಬಿಸಿರುವ ತನಿಖಾಧಿಕಾರಿಗೆ ಈ ಪ್ರಕರಣದ ತನಿಖೆ ನಡೆಸುವ ಅಧಿಕಾರವೇ ಇಲ್ಲ ಎಂದು ನಾಗೇಶ್ ಆರಂಭದಲ್ಲೇ ಬಾಂಬ್ ಹಾಕಿದ್ದಾರೆ. ಸಿಐಡಿ ಡಿವೈಎಸ್ಪಿ ಎಂ.ಎನ್. ರಾಮಲಿಂಗಪ್ಪ ಅವರು ಪ್ರಕರಣದ ತನಿಖೆಯನ್ನು ನಡೆಸಿ, ಇದೇ 2 ರಂದು ನಿತ್ಯಾನಂದ ಸ್ವಾಮಿ ವಿರುದ್ಧ ವರದಿ ನೀಡಿದ್ದಾರೆ.
ಆದರೆ, ಕಳೆದ ನವೆಂಬರ್ 8ರಂದು ಈ ಪ್ರಕರಣ ಸೇರಿದಂತೆ ರಾಮನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಐಡಿ ಡಿವೈಎಸ್ಪಿ ಬಿಎನ್ ಅಂಬಿಗೇರ್ ಅವರಿಗೆ ವಹಿಸಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ರಾಮಲಿಂಗಪ್ಪನವರು ತನಿಖಾಧಿಕಾರಿಯೇ ಅಲ್ಲ. ಅವರು ನೀಡಿರುವ ವರದಿ ಕಾನೂನುಬಾಹಿರ.
ಆದ್ದರಿಂದ ಈ ವರದಿ ಆಧಾರದ ಮೇಲೆ, ಸ್ವಾಮೀಜಿಯನ್ನು ಪುರುಷತ್ವ ಪರೀಕ್ಷೆ, ಧ್ವನಿ ಪರೀಕ್ಷೆ ಸೇರಿದಂತೆ ನಾನಾ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲು ರಾಮನಗರದ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ಅನುಮತಿಯನ್ನು ರದ್ದುಮಾಡಬೇಕು ಎಂದು ಕೋರಿದ್ದಾರೆ.
ನಿತ್ಯಾನಂದ ಪರ ನ್ಯಾಯವಾದಿ ಸಿವಿ ನಾಗೇಶ್ ಅವರು ಇನ್ನೂ ಹಲವಾರು ಕುತೂಹಲಕಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯವಾಗಿ, ಸಿಐಡಿ ತನಿಖೆಯಲ್ಲಿ ನಿತ್ಯಾನಂದ ಸ್ವಾಮಿ ಅವರು ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿರುವುದು ದೃಢಪಟ್ಟಿಲ್ಲ. 2005-07 ರಲ್ಲಿ ಮಹಿಳೆಯೊಬ್ಬರ ಮೇಲೆ (ಅನಿತಾ ರಾವ್) ಅತ್ಯಾಚಾರ ಎಸಗಿರುವ ಆರೋಪ ನನ್ನ ಕಕ್ಷಿದಾರರ ಮೇಲಿದೆ.
ಒಂದು ವೇಳೆ ನಿತ್ಯಾನಂದ ಸ್ವಾಮಿ ಅತ್ಯಾಚಾರ ಮಾಡಿದ್ದೇ ನಿಜವಾಗಿದ್ದಲ್ಲಿ, ಘಟನೆ ನಡೆದ ಸಂದರ್ಭದಲ್ಲಿಯೇ ಅವರು ದೂರು ದಾಖಲು ಮಾಡಬೇಕಿತ್ತು. ಮೂರು ವರ್ಷಗಳ ಕಾಲ ಸುಮ್ಮನಿದ್ದ ಆ ಮಹಿಳೆ, 2010ರಲ್ಲಿ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. 2012ರಲ್ಲಿ ದೂರು ದಾಖಲು ಮಾಡಿದ್ದಾರೆ. ಆದ್ದರಿಂದ ನಿತ್ಯಾನಂದ ಸ್ವಾಮಿ ಮೇಲೆ ವೃಥಾ ಆರೋಪ ಮಾಡಲಾಗಿದೆ ಎನ್ನುವುದಕ್ಕೆ ಈ ವಿಳಂಬವೇ ಸಾಕ್ಷಿ.
ಪ್ರಕರಣ ದಾಖಲಾಗಿ ಏಳು ವರ್ಷಗಳ ನಂತರ ಇದೀಗ, ಪುರುಷತ್ವ ಪರೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ. ಇದು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಬೇಕಾಗಿರುವುದು ಬಾಧಿತಳನ್ನು. ಆದರೆ ಈ ಪ್ರಕರಣದಲ್ಲಿ ಕೇವಲ ನಿತ್ಯಾನಂದ ಸ್ವಾಮಿಯನ್ನೇ ಪರೀಕ್ಷೆಗೊಳಪಡಿಸಲು ತಾಕೀತು ಮಾಡುತ್ತಿರುವುದೇಕೆ?
ಹಾಗೆಯೇ, ಒಂದು ವೇಳೆ ನಿತ್ಯಾನಂದ ಸ್ವಾಮಿ ನಪುಂಸಕ ಎಂದು ವರದಿ ಹೇಳಿದರೆ, ಅವರ ವಿರುದ್ಧ ಗಂಭೀರ ಆರೋಪ ಮಾಡಿರುವ ತನಿಖಾಧಿಕಾರಿಯ ಗತಿಯೇನು? ಅಷ್ಟಕ್ಕೂ ಪುರುಷತ್ವ ಹೊಂದಿದ್ದರೆ ಅತ್ಯಾಚಾರ ಮಾಡಲಾಗಿದೆ ಎಂದು ಅರ್ಥವೇ? ಎಂದು ಸಿಐಡಿ ಪೊಲೀಸರ ಬುಡಕ್ಕೇ ನಾಗೇಶ್ ನೀರು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಹೈಕೋರ್ಟಿನಲ್ಲಿ ಇಂದು ಸಿಐಡಿ ಪೊಲೀಸರು ಈ ಪ್ರಶ್ನೆಗಳಿಗೆಲ್ಲ ಏನೆಂತ ಉತ್ತರ ಕೊಡುತ್ತಾರೆ? ಮತ್ತರು ಹೈಕೋರ್ಟ್ ಏನು ಆದೇಶ ಹೊರಡಿಸುತ್ತದೆ ಎಂಬುದು ನಿಜಕ್ಕೂ ಕುತೂಹಲ ಕೆರಳಿಸಿದೆ.
ಹೈಕೋರ್ಟ್ನಲ್ಲಿ ನಿತ್ಯಾನಂದ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಂದಿಗೆ (ಬುಧವಾರ) ಮುಂದೂಡಿರುವ ನ್ಯಾಯಮೂರ್ತಿ ವಿ. ಜಗನ್ನಾಥನ್ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಐಡಿ ಪೊಲೀಸರಿಗೆ ಸೂಚಿಸಿದ್ದಾರೆ.