ಸಿಬಿಐಗೆ ಮುಖಭಂಗ: ಯಡಿಯೂರಪ್ಪ ಲೆಕ್ಕಾಚಾರವೇನು?

ಪ್ರಕರಣದಲ್ಲಿ ಯಡಿಯೂರಪ್ಪಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕು ಎಂಬ ಸಿಬಿಐ ಮೇಲ್ಮನವಿಯನ್ನು ಇಂದು ಸುಪ್ರೀಂಕೋರ್ಟ್ ತಿರಸ್ಕರಿಸುತ್ತಿದ್ದಂತೆ ಯಡಿಯೂರಪ್ಪ ಭಾರಿ ಸಂತಸ ವ್ಯಕ್ತಪಡಿಸಿದರು. ಸುಪ್ರೀಂ ಆದೇಶದಿಂದ ಉತ್ತೇಜಿತರಾದ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದ್ದನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಾನು ಮತ್ತು ನನ್ನ ಕುಟುಂಬಸ್ಥರು ಸಿಬಿಐ ವಿಚಾರಣೆಗೆ ಇದುವರೆಗೂ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಸಿಬಿಐ ಅಧಿಕಾರಿಗಳು ಹೇಳಿದ ಸಮಯಕ್ಕಿಂತ 20 ನಿಮಿಷ ಮುಂಚಿತವಾಗಿ ವಿಚಾರಣೆಗೆ ಹಾಜರಾಗುತ್ತಿದ್ದೇವೆ. ಅಂಥದ್ದರಲ್ಲಿ ಇವರದೇನು ರಗಳೆ? ಜಾಮೀನು ರದ್ದು ಮಾಡಿ ಎಂದು ಸುಪ್ರೀಂಕೋರ್ಟ್ ಬಾಗಿಲು ಬಡಿದಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಗರಂ ಆದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಇಂದಲ್ಲ ನಾಳೆ ನನಗೆ ನ್ಯಾಯ ಸಿಗುತ್ತದೆ. ರಾಜ್ಯದ ಜನತೆಗೆ ಯಡಿಯೂರಪ್ಪ ಏನು ಎಂಬುದರ ಸತ್ಯ ಅರಿವಾಗಲಿದೆ ಎಂದು ಅವರು ಅತೀವ ವಿಶ್ವಾಸದಿಂದ ಹೇಳಿದರು.
ಇತ್ತೀಚೆಗೆ ನಾನು ಸಿಬಿಐನ ಗೃಹ ಬಂಧನದಲ್ಲಿದ್ದೇನೆ. ನಾನು ಮಾಜಿ ಮುಖ್ಯಮಂತ್ರಿ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯ. ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಬೇಕಾದ ಸಂದರ್ಭವಿರುತ್ತದೆ. ಹಾಗೆಯೇ, ರಾಜ್ಯದ ಬಹುಪಾಲು ಪ್ರದೇಶ ಬರದಿಂದ ಆವರಿಸಿದೆ. ಅಲ್ಲಿಗೆಲ್ಲ ನಾನು ಭೇಟಿ ನೀಡಬೇಕಾಗುತ್ತದೆ. ಬಿಜಾಪುರ, ಬಾಗಲಕೋಟ, ಕೊಪ್ಪಳ, ಗುಲ್ಬರ್ಗಾ, ರಾಯಚೂರು, ಚಾಮರಾಜನಗರ, ಕೋಲಾರ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗುತ್ತದೆ.
'ಹೀಗಾಗಿ ಬೆಂಗಳೂರಿನಿಂದ ಹೊರಹೋಗಲು ನನಗೆ ಅವಕಾಶ ಕಲ್ಪಿಸಬೇಕು. ಸುಪ್ರೀಂಕೋರ್ಟ್ ಇಂದು ನೀಡಿರುವ ಆದೇಶದಿಂದ ಹೊಸ ಹುಮ್ಮಸ್ಸು ಬಂದಿದೆ. ಹಾಗಾಗಿ, ರಾಜ್ಯ ಪ್ರವಾಸಕ್ಕೆ ಅನುಮತಿ ಕೋರಿ ಇನ್ನೆರೆಡು ದಿನದಲ್ಲಿ ಹೈಕೋರ್ಟಿಗೆ ಮೊರೆ ಹೋಗುವೆ' ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
ಕೇಸು ಗೆದ್ದಷ್ಟೇ ಸಂಭ್ರಮ: ಒಂದು ವೇಳೆ, ಸಿಬಿಐ ಮತ್ತೆ ಹೈಕೋರ್ಟಿಗೆ ವಾಪಸಾಗಿ ಯಡಿಯೂರಪ್ಪನವರ ಜಾಮೀನನ್ನು ವಜಾಗೊಳಿಸಬೇಕು ಎಂದು ಮತ್ತೆ ಅಲವತ್ತುಕೊಂಡಾಗ ಅದು ತಿರಸ್ಕೃತವಾದರೆ ಅನುಮಾನವೇ ಬೇಡ ಯಡಿಯೂರಪ್ಪನವರು ಕೇಸು ಗೆದ್ದಷ್ಟೇ ಸಂಭ್ರಮಿಸಲಿದ್ದಾರೆ.
ಇದರ ಸುಳಿವರಿತು ಮುಂದಾಲೋಚನೆಯಿಂದ ಇಂದೇ ಯಡಿಯೂರಪ್ಪನವರು ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡಿ, ಕೋರ್ಟ್ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗೆಳ ನಡುವೆ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ, ರಾಜ್ಯ ಬಿಜೆಪಿಯಲ್ಲಿ ತಾನೇ ಪರಮೋಚ್ಚ ನಾಯಕ ಎಂಬುದನ್ನು ಸಾಬೀತುಪಡಿಸಲು ಅಂತಿಮ ಹೋರಾಟಕ್ಕೆ ಅಣಿಗೊಳ್ಳುತ್ತಿದ್ದಾರೆ ಎಂಬುದು ಗುಟ್ಟೇನೂ ಅಲ್ಲ.












Click it and Unblock the Notifications