ಟೀಂ ಅಣ್ಣಾ ರಾಜಕೀಯ ವೇಷಕ್ಕೆ ಹೆಗ್ಡೆ ವಿರೋಧ
ಇದೀಗ ಬಂದ ಸುದ್ದಿ: ಟೀಂ ಅಣ್ಣಾ ರಾಜಕೀಯ ಪ್ರವೇಶವನ್ನು ಸದಸ್ಯ ಅರವಿಂದ್ ಕೇಜ್ರಿವಾಲ್ ಖಚಿತಪಡಿಸಿದ್ದಾರೆ. ಪಕ್ಷದ ಹೆಸರು ಹಾಗೂ ಪ್ರಣಾಳಿಕೆಯನ್ನು ಜನರೇ ನಿರ್ಧರಿಸಲಿ. ಪಕ್ಷಕ್ಕೆ ಕೊಡುವ ಪ್ರತಿ ಪೈಸೆ ದೇಣಿಗೆಯನ್ನು ವೆಬ್ ಸೈಟ್ ನಲ್ಲ್ ಪ್ರಕಟಿಸಲಾಗುವುದು ಎಂದು ಶುಕ್ರವಾರ ಸಂಜೆ 6.10ರ ಸುಮಾರಿಗೆ ಜಂತರ್ ಮಂತರ್ ಬಳಿ ಪ್ರತಿಭಟನೆ ನಿರತ ಅರವಿಂದ್ ಕೇಜ್ರಿವಾಲ್ ಹೇಳಿದರು.
"ನಾನು ಅಣ್ಣಾ ಹಜಾರೆ ಹಾಗೂ ಅವರ ತಂಡವನ್ನು ಬೆಂಬಲಿಸುತ್ತೇನೆ. ಆದರೆ, ಟಿವಿ ಮಾಧ್ಯಮಗಳ ಮುಂದೆ ಅಣ್ಣಾ ಅವರು ಮಾತನಾಡಿದ್ದನ್ನು ಕೇಳಿದ್ದೇನೆ. ಅವರ ಮಾತಿನ ಪ್ರಕಾರ ಅವರು ಹೊಸ ಪಕ್ಷ ಕಟ್ಟುತ್ತಿಲ್ಲ. ಅಥವಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ.
ಭ್ರಷ್ಟಾಚಾರದ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುತ್ತಿರುವ ಹಾಗೂ ನಡೆಸಬಲ್ಲ ಅಭ್ಯರ್ಥಿಗೆ ಟೀಂ ಅಣ್ಣಾ ಬೆಂಬಲ ನೀಡುತ್ತದೆ ಅಷ್ಟೇ. ಇದರಿಂದ ರಾಜಕೀಯ ಬದಲಾವಣೆ, ಸಮಾಜ ಸುಧಾರಣೆ ಸಾಧ್ಯ ಎಂದು ನಂಬಲಾಗಿದೆ. ಆದರೆ, ಟೀಂ ನೇರವಾಗಿ ರಾಜಕೀಯ ದಿರಿಸಿನಲ್ಲಿ ಕಣಕ್ಕಿಳಿದರೆ ನಾನು ಬೆಂಬಲಿಸಲು ಸಾಧ್ಯವಿಲ್ಲ" ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.
'ನನಗೆ ಅರಿವಿರುವಂತೆ ಟೀಂ ಅಣ್ಣಾದ ಗುರಿ ಸಾಮಾಜಿಕ ಬದಲಾವಣೆ, ಭ್ರಷ್ಟಾಚಾರ ಮುಕ್ತ ಸಮಾಜವೇ ಹೊರತು ರಾಜಕೀಯ ಪ್ರವೇಶವಲ್ಲ. ಅಣ್ಣಾ ಹಜಾರೆ ಅವರು ಈಗ ನಡೆಸುತ್ತಿರುವ ಚಳವಳಿಯನ್ನು ಮುಂದುವರೆಸಿಕೊಂಡು ಹೋಗಬೇಕು. ಒತ್ತಡಕ್ಕೆ ಮಣಿದು ರಾಜಕೀಯ ಪಕ್ಷ ಸ್ಥಾಪಿಸುವುದರಲ್ಲಿ ಅರ್ಥವಿಲ್ಲ' ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಭ್ರಷ್ಟರ ಬೆಂಬಲ ಬೇಕಿಲ್ಲ: ಆದರೆ, ಜನಾಭಿಪ್ರಾಯಕ್ಕೆ ಮಣಿದು ಟೀಂ ಅಣ್ಣಾ ಚುನಾವಣೆ ಸ್ಪರ್ಧಿಸಲು ಬಯಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ, ಭ್ರಷ್ಟಾಚಾರದಿಂದ ತುಂಬಿರುವ ರಾಜಕೀಯ ಪಕ್ಷಗಳ ಸಹಾಯ ಪಡೆಯದಿದ್ದರೆ ಸಾಕು.
ಕಣಕ್ಕಿಳಿಯುವ ಪ್ರತಿ ಅಭ್ಯರ್ಥಿಯ ಪೂರ್ವಪರ ತಿಳಿದು ಭ್ರಷ್ಟಾಚಾರ ಮುಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ, ಕ್ಲೀನ್ ಇಮೇಜ್ ಇಲ್ಲದ ಭ್ರಷ್ಟರನ್ನು ಕಣಕ್ಕಿಳಿಸುವುದೂ ಒಂದೇ, ಭ್ರಷ್ಟ ಪಕ್ಷಗಳ ಸಹಾಯ ಪಡೆದು ಒಳ್ಳೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೂ ಒಂದೇ ಎಂದು ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಬದಲಾವಣೆಯಾಗದ ಹೊರತು ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಶಾಸಕರ ಬಗ್ಗೆ ಜನರ ಅಭಿಪ್ರಾಯ ಬದಲಾಗಬೇಕು. ಒಳ್ಳೆ ವ್ಯವಸ್ಥೆ ಬೇಕು ಎಂದು ಬಯಸಿದರೆ, ಒಳ್ಳೆ ಜನರ ರಾಜಕೀಯ ಪ್ರವೇಶ ಅಗತ್ಯ ಎಂದು ಹೇಳಿದರು.
ಉಪವಾಸ ಇಲ್ಲದೆ ಸತ್ಯಾಗ್ರಹ ಧರಣಿ ಸಾಧ್ಯವಿದೆ. ಅಣ್ಣಾ ಹಜಾರೆ ಅವರು ತಮ್ಮಪ್ರಾಣವನ್ನು ಪಣಕ್ಕಿಡುವುದು ಬೇಡ. ಅವರ ನೇತೃತ್ವದಲ್ಲಿ ದೇಶದ ವಿವಿಧೆಡೆ ಸಣ್ಣ ಪುಟ್ಟ ಚಳವಳಿ ಆರಂಭವಾದರೂ ಸಾಕು.
ಗ್ರಾಮೀಣ ಭಾಗದ ಜನರಿಗೆ ಸೂಕ್ತ ಅರಿವು ಮೂಡಿಸಿದರೆ ಸಮಸ್ಯೆಗಳು ತಾನಾಗೇ ಸರಿ ಹೋಗುತ್ತೆ. ಮುಂದಿನ ಚುನಾವಣೆಯಲ್ಲಿ ಜಾತಿ, ಮತ ಪಂಥಗಳಿಗಿಂತ ಭ್ರಷ್ಟಾಚಾರವೇ ಬಹುಮುಖ್ಯ ವಿಷಯವಾಗಲಿದೆ ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.