ತಮ್ಮದೇ ಪಕ್ಷದ ಸಚಿವರ ಮೇಲೆ ಬಿಎಸ್ವೈ ರೌದ್ರಾವತಾರ
ಸದನದ ಪ್ರಶ್ತ್ನೋತ್ತರ ವೇಳೆಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಗೆ ಸಂಬಂಧಿಸಿದಂತೆ ಸಚಿವರು ಉತ್ತರ ನೀಡುತ್ತಿದ್ದರು. ಸಚಿವರ ಉತ್ತರ ಸಮರ್ಪಕವಾಗಿಲ್ಲ, ಬಾಂಡ್ ಗಳನ್ನು ಯಾವಾಗ ವಿತರಿಸಲಾಗುತ್ತದೆ ಎಂದು ಮೊದಲು ಸ್ಪಷ್ಟ ಪಡಿಸಿ ಎಂದು ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ವಿರೋಧಪಕ್ಷದವರು ಸಚಿವರನ್ನು ಒತ್ತಾಯಿಸಿದರು.
ಆಗ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎದ್ದು ನಿಂತು, 'ಸ್ವಾಮಿ ಯಡಿಯೂರಪ್ಪನವರೇ, ನೀವು ಮಾಡಿದ ಒಂದು ಒಳ್ಳೆಯ ಯೋಜನೆಯನ್ನು ನಿಮ್ಮದೇ ಪಕ್ಷದ ಸಚಿವರು ಹಾಳು ಮಾಡುತ್ತಿದ್ದಾರೆ. ಇದು ನಿಮಗೆ ಸಮಾಧಾನ ತಂದಿದೆಯೋ' ಎಂದು ಕಿಚಾಯಿಸಿದರು.
ಈ ಹಂತದಲ್ಲಿ ಮಾತಿಗೆ ಇಳಿದ ಯಡಿಯೂರಪ್ಪ, ಭಾಗ್ಯಲಕ್ಷ್ಮಿ ಒಂದು ಒಳ್ಳೆಯ ಯೋಜನೆ. ಬೇರೆ ರಾಜ್ಯದವರೂ ಇದನ್ನು ಅನುಸರಿಸುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿರಲಿ ಸಿದ್ದರಾಮಯ್ಯನವರೇ. ಸರಕಾರ ಬಾಂಡ್ ವಿತರಣೆ ವಿಳಂಬ ಮಾಡುವುದು ಸರಿಯಲ್ಲ.
ಬಾಂಡ್ ವಿತರಣೆ ವಿಳಂಬವಾದರೆ ಮಗುವಿಗೆ 18 ವರ್ಷವಾದಾಗ ಸಿಗುವ ಒಂದು ಲಕ್ಷ ರೂಪಾಯಿ ಕಡಿಮೆಯಾಗುತ್ತದೆ. ನಮ್ಮ ಸಚಿವ ಕಳಕಪ್ಪ ಬಂಡಿ ಎಡಬಿಡಂಗಿ ಉತ್ತರ ನೀಡಿದ್ದಾರೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದರು.
ಯಡಿಯೂರಪ್ಪ ನಮ್ಮ ನಾಯಕ. ಅವರಿಗೆ ರೈತರ ಬಗ್ಗೆ ಬಹಳ ಕಾಳಜಿ. ಆದರೆ ಅವರ ಎಡಬಿಡಂಗಿ ಪದ ಬಳಸಿದ್ದು ಮನಸಿಗೆ ನೋವು ತಂದಿದೆ ಎಂದು ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.
ಆಗ ಅಕ್ಷರಸಃ ಸಿಟ್ಟಿಗೇರಿದ ಯಡಿಯೂರಪ್ಪ, ಆಯ್ತು ಬಿಡಪ್ಪಾ, ನೀನು ದೊಡ್ಡ ಮನುಷ್ಯ ಆಗಿದ್ದೀಯಾ. ನನ್ನಿಂದ ನಿನ್ನ ಮನಸಿಗೆ ನೋವಾದರೆ ನನ್ನನ್ನು ಕ್ಷಮಿಸಪ್ಪಾ. ನಾನು ಬಡವರ ಪರವಾಗಿ ಮಾತನಾಡಿದ್ದು. ಯೋಜನೆಗೆ ದುಡ್ಡು ಕೊಡಲಾಗದಿದ್ದರೆ ಭಾಗ್ಯಲಕ್ಷ್ಮಿ ಯೋಜನೆಯನ್ನೇ ಹಿಂದಕ್ಕೆ ತೆಗೆದುಕೋ ಎಂದು ಅಬ್ಬರಿಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಧ್ಯಪ್ರವೇಶಿಸಿ ಈ ಕೂಡಲೇ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಅವರನ್ನು ಸಮಾಧಾನಗೊಳಿಸಿದರು.