ಮಂಗಳೂರು : ಮಾಧ್ಯಮಗಳನ್ನು ದೂರಿಲ್ಲ: ಎಸ್ಕೆ ಸಿಂಗ್
ಯುವಕ-ಯುವತಿಯರು ಹುಟ್ಟುಹಬ್ಬ ಆಚರಿಸುತ್ತಿದ್ದ ವೇಳೆ ಅವರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ತಡೆಗಟ್ಟಲು ಕಸ್ತೂರಿ ನ್ಯೂಸ್ 24 ಹಾಗೂ ಮತ್ತೊಂದು ವಾಹಿನಿಯ ವರದಿಗಾರರು ಮುಂಚಿತವಾಗಿ ಪೊಲೀಸರಿಗೆ ತಿಳಿಸಿದ್ದೆವು. ಆದರೆ, ಸ್ಥಳೀಯ ಇನ್ಸ್ ಪೆಕ್ಟರ್ ಆಗಲಿ, ಠಾಣಾಧಿಕಾರಿಗಳಾಗಲಿ ಕರೆಯನ್ನು ಸ್ವೀಕರಿಸಲಿಲ್ಲ. ಹೀಗಾಗಿ ನಾವು ನಮ್ಮ ಕರ್ತವ್ಯ ನಿಭಾಯಿಸಲು ಹೋಂಸ್ಟೇ ಕಡೆ ಧಾವಿಸಿದೆವು ಎಂದು ಮಾಧ್ಯಮ ಮಿತ್ರರು ಹೇಳಿದ್ದಾರೆ.
ದೌರ್ಜನ್ಯ ತಡೆಯಲು ಪ್ರಯತ್ನ ಮಾಡಬೇಕಿತ್ತು. ಅದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಪೊಲೀಸರಿಗೆ, ಮಾಧ್ಯಮದವರಿಗೆ ಎಲ್ಲರಿಗೂ ಆ ಹೊಣೆಗಾರಿಕೆ ಇದೆ ಎನ್ನುವ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೆ. ಆದರೆ, ಘಟನೆ ಸಂದರ್ಭದಲ್ಲಿ ಕರ್ತವ್ಯ ಲೋಪ ಎಸೆಗಿದವರ ಮೇಲೆ ಕ್ರಮ ಜರುಗಿಸುವುದಾಗಿ ನಂತರ ಸುದ್ದಿಗೋಷ್ಠಿಯಲ್ಲಿ ಬಿಪಿನ್ ಗೋಪಾಲಕೃಷ್ಣ ಘೋಷಿಸಿದ್ದರು. ಹೀಗಾಗಿ ಮಾಧ್ಯಮಗಳು ನಮ್ಮನ್ನು ದೂರುವುದು ಬೇಡ ಎಂದು ಎಸ್ಕೆ ಸಿಂಗ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಸೂಚನೆ : ಘಟನೆಗೆ ಕಾರಣರಾದ ದುಷ್ಕರ್ಮಿಗಳ ದೃಶ್ಯಗಳಿಗಿಂತ ಹೆಚ್ಚಾಗಿ ಪಾರ್ಟಿಗೆ ಬಂದ ಯುವತಿಯರನ್ನೇ ಕೇಂದ್ರೀಕರಿಸಿ, ಹಲ್ಲೆಕೋರರು ಯುವತಿಯರ ಮೈ ಕೈ ಮುಟ್ಟುವ, ಹೊಡೆಯುವ ದೃಶ್ಯಗಳನ್ನು ಮಾಧ್ಯಮಗಳು ಹೆಚ್ಚೆಚ್ಚು ಪ್ರಸಾರ ಮಾಡುತ್ತಿರುವುದರ ಬಗ್ಗೆ ಆಯುಕ್ತ ಸಿಂಗ್ ತಮ್ಮ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲಿ ದಾಂಧಲೆ ನಡೆದಿದೆ ಎನ್ನುವುದು ಸರಿಯಲ್ಲ. ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸರು ದೌರ್ಜನ್ಯ ನಡೆಸುತ್ತಿರುವವರನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿ, ದಾಂಧಲೆಗೆ ಗುರಿಯಾದವರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ನೊಂದ ವಿದ್ಯಾರ್ಥಿ ಅಳಲು: ಹುಟ್ಟುಹಬ್ಬದ ದಿನ ಧರ್ಮದೇಟು ತಿಂದ ನೊಂದ ವಿದ್ಯಾರ್ಥಿ ವಿಜಯ್ ಮಾಧ್ಯಮದ ಮುಂದೆ ಜನನ ಪ್ರಮಾಣ ಪತ್ರವನ್ನು ತೋರಿಸಿದ್ದಾರೆ. ಇಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆದಿಲ್ಲ. ಗಾಂಜಾ ಅಥವಾ ಇನ್ನಿತರ ಯಾವುದೇ ವಸ್ತುಗಳು ಇಲ್ಲಿರಲ್ಲಿಲ್ಲ ಎಂದು ಅವರು ಸ್ವಷ್ಟಪಡಿಸಿದ್ದಾರೆ.
ನಾವು ಯಾವುದೇ ರೇವ್ ಪಾರ್ಟಿಯನ್ನು ಆಚರಿಸಿಕೊಂಡಿಲ್ಲ. ಕೇವಲ ಕೇಕ್ ಕಟ್ ಮಾಡುವುದರ ಮೂಲಕ ಬರ್ತಡೇ ಪಾರ್ಟಿಯನ್ನು ಆಚರಿಸಿಕೊಳ್ಳುತ್ತಿದ್ದೆವು ಅಷ್ಟೆ. ಮ್ಯೂಸಿಕ್, ಡ್ಯಾನ್ಸ್ ಯಾವುದೂ ಇಲ್ಲವಾಗಿತ್ತು. ಆದರೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ದಿಢೀರ್ ಆಗಮಿಸಿ ವಿಷಯದ ಬಗ್ಗೆ ಎನೂ ತಿಳಿಯದೆ ಏಕಾಏಕಿ ದಾಳಿ ನಡೆಸಿದ್ದರು ಎಂದು ನೊಂದ ವಿದ್ಯಾರ್ಥಿ ಹೇಳಿದ್ದಾರೆ.