ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದೂರು: ಯುವತಿ ರೇಪ್ ಯತ್ನ, ರೈಲಿನಿಂದ ಹೊರಕ್ಕೆ

By Srinath
|
Google Oneindia Kannada News

ಮದ್ದೂರು, ಜುಲೈ 25: ತನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ದುರುಳರ ಗುಂಪಿಗೆ ಪ್ರತಿರೋಧವೊಡ್ಡಿದ್ದಕ್ಕಾಗಿ ಆ 19 ವರ್ಷದ ಯುವತಿಯನ್ನು ದುರುಳರು ಚಲಿಸುತ್ತಿದ್ದ ಟ್ರೈನಿನಿಂದ ಕೆಳಕ್ಕೆ ತಳ್ಳಿದ್ದಾರೆ. ಆಕೆ ಸೀದಾ 25 ಅಡಿ ಕೆಳಗಿನ ನದಿ ದಂಡೆಯ ಮೇಲೆ ಬಿದ್ದಿದ್ದಾಳೆ. ಅದೃಷ್ಟವಷಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ತೀವ್ರ ಗಾಯಗಳಾಗಿವೆ.

garments-factory-girl-molested-yeshwantpur-mysore-train

ಯಶವಂತಪುರ- ಮೈಸೂರು ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಮಂಗಳವಾರ ಮಧ್ಯಾಹ್ನ ಶಿಂಷಾ ನದಿ ಮೇಲಿನ ಕೊಳ್ಳಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದೆ. ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ತಳ್ಳಿದ್ದನ್ನು ಕಣ್ಣಾರೆ ಕಂಡ ಪ್ರಯಾಣಿಕರೊಬ್ಬರು ವಿಷಯವನ್ನು ಮದ್ದೂರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಕೆಯನ್ನು ಮಂಡ್ಯ ವೈದ್ಯಕೀಯ ಮಹಾಕಾಲೇಜಿಗೆ ಸೇರಿಸಿದ್ದಾರೆ. ಯುವತಿಯ ತಲೆ, ಬೆನ್ನುಮೂಳೆ ಮತ್ತು ಕಾಲುಗಳಿಗೆ ತೀವ್ರ ಪೆಟ್ಟಾಗಿದೆ.

ಯುವತಿಯ ಮೇಲೆ ದುರುಳರು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಮೊದಮೊದಲು ಮೌನ ಪ್ರೇಕ್ಷಕರಾಗಿದ್ದ ಪ್ರಯಾಣಿಕರು ನಂತರ ಧೈರ್ಯ ತಂದುಕೊಂಡು ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಂಡ್ಯ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇವರಿಗೆ ಸಹಕರಿಸಿದ ಆರೋಪದ ಮೇಲೆ ಮತ್ತಿಬ್ಬರನ್ನು ಪಾಂಡವಪುರ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಆರೋಪಿಗಳನ್ನು ಮೈಸೂರಿನ ಕಲ್ಯಾಣಿನಗರದ ಅಕ್ಬರ್ (24), ಇಮ್ರಾನ್ (21), ಸುಬಾನ್ ಮತ್ತು ಅಹಮದ್ ಎಂದು ಗುರುತಿಸಲಾಗಿದೆ.

'ಯಶವಂತಪುರ- ಮೈಸೂರು ಎಕ್ಸ್ ಪ್ರೆಸ್ ಟ್ರೈನು ಮದ್ದೂರು ಸಮೀಪಿಸುತ್ತಿದ್ದಾಗ ನಾಲ್ವರು ಯುವಕರು ನನ್ನನ್ನು ಚುಡಾಯಿಸಲು ಆರಂಭಿಸಿದರು. ನಂತರ ಲೈಂಗಿಕ ಕಿರುಕುಳ ನೀಡತೊಡಗಿದರು. ಆಶ್ಲೀಲವಾಗಿ ಮಾತನಾಡುತ್ತಾ, ಅತ್ಯಾಚಾರವೆಸಗಲು ಮುಂದಾದರು. ಧೈರ್ಯ ತಂದುಕೊಂಡು ಪೊಲೀಸರಿಗೆ ಹೇಳುತ್ತೇನೆ ಹುಷಾರು' ಎಂದಾಗ ತಕ್ಷಣ ಅವರು ನನ್ನನ್ನು ರೈಲಿನಿಂದ ಕೆಳಕ್ಕೆ ತಳ್ಳಿಬಿಟ್ಟರು' ಎಂದು ಬಾಧಿತ ಯುವತಿ ಶ್ರೀಕಲಾ (ಹೆಸರು ಬದಲಿಸಲಾಗಿದೆ) ಆಸ್ಪತ್ರೆಯಲ್ಲಿ ಹೇಳಿದ್ದಾರೆ.

ಬಾಧಿತ ಯುವತಿ ಬೆಂಗಳೂರಿನ ಹಿಂದೂಜಾ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಸದರಿ ಯುವತಿಯು ಕೆಲಸಕ್ಕೆ ರಜೆ ಹಾಕಿ ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅನಾಥೆಯಾದ ಯುವತಿ ತನ್ನ ಅಜ್ಜಿಯೊಂದಿಗೆ ವಾಸವಾಗಿದ್ದಾರೆ.

ಶ್ರೀಕಲಾ ಅವರು ಕೆಂಗೇರಿಯಲ್ಲಿ ಜನರಲ್ ಕಂಪಾರ್ಟ್ ಮೆಂಟಿಗೆ ಹತ್ತಿದ್ದಾರೆ. ಆರೋಪಿ ಯುವಕರು ಬಹುಶಃ ರಾಮನಗರದಲ್ಲಿ ರೈಲಿನೊಳಕ್ಕೆ ಪ್ರವೇಶಿಸಿದ್ದು, ಅಲ್ಲಿಂದ ಹುಡುಗಿಯ ಮೇಲೆ ಕಣ್ಣು ಹಾಕಿದ್ದಾರೆ ಎನ್ನಲಾಗಿದೆ.

ಘಟನೆಯ ವೇಳೆ ಟ್ರೈನು ಅದಾಗತಾನೇ ಮದ್ದೂರು ನಿಲ್ದಾಣವನ್ನು ಬಿಟ್ಟಿದ್ದರಿಂದ ನಿಧಾನವಾಗಿ ಚಲಿಸುತ್ತಿತ್ತು. ಯುವತಿಯು ಕೆಳಗೆ ಕಲ್ಲಿನ ಮೇಲೆ ಬಿದ್ದಿದ್ದರೆ ಬಹುಶಃ ದೊಡ್ಡ ಪ್ರಮಾದವೇ ಆಗುತ್ತಿತ್ತು ಎಂದು ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಆರೋಪಿ ಯುವಕರು ಸದರಿ ಯುವತಿಯನ್ನು ಅಕ್ಷರಶಃ ಕಾಲಿನಿಂದ ಒದ್ದು, ರೈಲಿನಿಂದ ಹೊರಕ್ಕೆ ಹಾಕಿದರೆಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಇದೇನು, ನಮ್ಮ ರಾಜ್ಯವು ಅತ್ಯಾಚಾರ/ ಅಪರಾಧಗಳ ತವರೂರಾದ ಉತ್ತರ ಪ್ರದೇಶ ಮತ್ತು ಬಿಹಾರದ ಹಾದಿಯಲ್ಲಿ ಸಾಗುತ್ತಿದೆಯೇ?

English summary
A 19-year-old Garments factory girl who resisted a molestation attempt by a group of youths was kicked out of a moving Yeshwantpur-Mysore Express train near Maddur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X