ಮತ್ತೆ ಡೆಂಗ್ಯೂ ದಾಂಗುಡಿಯಿಟ್ಟಿದೆ, ಎಚ್ಚರವಿರಲಿ

ಡೆಂಗ್ಯೂ ಜ್ವರದಿಂದ ಬಲಿಯಾದವರ ಮತ್ತು ಬಳಲುತ್ತಿರುವವರ ಅಂಕಿಸಂಖ್ಯೆಗಳನ್ನು ನೀಡಿರುವ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರು, ಡೆಂಗ್ಯೂ ಜ್ವರ ಹರಡದಂತೆ, ಜನರಲ್ಲಿ ತಿಳಿವಳಿಕೆ ನೀಡುವಂತೆ, ಬಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಕ್ರಮ ತೆಗೆದುಕೊಳ್ಳಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶನಿವಾರ ಹೇಳಿದರು.
ರಾಜ್ಯಾದ್ಯಂತ ಒಟ್ಟು 260 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 134 ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಡೆಂಗ್ಯೂ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿ ಆರಂಭಿಸಿದ್ದು, ಅದರ ಸಂಖ್ಯೆ ಹೀಗಿದೆ : 080-22660000.
ಶುಕ್ರವಾರದವರೆಗೆ ಬೆಂಗಳೂರಿನಲ್ಲಿ 8 ಜನರು ಅಸುನೀಗಿದ್ದರು. ಶನಿವಾರ ದೇವನಹಳ್ಳಿಯಲ್ಲಿ ಓರ್ವ ವ್ಯಕ್ತಿ ಈ ಜ್ವರಕ್ಕೆ ಬಲಿಯಾಗಿದ್ದಾರೆ. ಶುಕ್ರವಾರ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಹಂಸ ಕುಮಾರಿ ಎಂಬ ಯುವತಿ ಡೆಂಗ್ಯೂಗೆ ಆಹುತಿಯಾಗಿದ್ದಾರೆ. ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೆಚ್ಚಾಗಿ, ಬೆಂಗಳೂರು, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಹೆಚ್ಚಿನ ಜನರು ಸೋಂಕಿತರಾಗುತ್ತಿದ್ದಾರೆ.
ಬರಗಾಲದಿಂದಾಗಿ ಕುಡಿಯುವ ನೀರಿನ ಕೊರತೆಯಿಂದಾಗಿ ಕಂಗೆಟ್ಟಿರುವ ರಾಜ್ಯದ ಜನತೆಗೆ ಡೆಂಗ್ಯೂ ಜ್ವರ ಬರಸಿಡಿಲಿನಂತೆ ಬಂದೆರಗಿದೆ. ಸೊಳ್ಳೆಯಿಂದ ಬರುವ ಈ ಜ್ವರ ಬರದಂತೆ ಮತ್ತು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಜ್ವರದ ಬಗ್ಗೆ ತಿಳಿವಳಿಕೆಯ ಕೊರತೆಯಿಂದಾಗಿ ಹಚ್ಚಿನ ಸಾವುಗಳು ಸಂಭವಿಸುತ್ತಿವೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.
ಜ್ವರದ ಲಕ್ಷಣ
* ಡೆಂಗ್ಯೂ ಜ್ವರ ಬಂದರೆ ವಿಪರೀತ ಜ್ವರ ಏರುತ್ತದೆ
* ಮೈಕೈ ನೋವು, ಕಣ್ಣಿನ ಹಿಂಭಾಗದಲ್ಲಿ ನೋವು
* ಸುಸ್ತಾಗುವುದು, ತಲೆ ಸುತ್ತುವುದು, ವಾಂತಿ ಬೇಧಿಯಾಗುವುದು
* ಮೈಮೇಲೆ ಕೆಂಪು ಗುಳ್ಳೆ ಬರುವುದು
* ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು
ತಡೆಯುವುದು ಹೇಗೆ?
* ತೆಂಗಿನ ಚಿಪ್ಪುಗಳಲ್ಲಿ, ಹೂಕುಂಡಗಳಲ್ಲಿ, ತಗಡಿನ ಡಬ್ಬಗಳಲ್ಲಿ ನೀರು ನಿಲ್ಲದಂತೆ, ಮನೆ ಸುತ್ತ ಚರಂಡಿಗಳಲ್ಲಿ ನೀರು ಕಟ್ಟಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.
* ಸೊಳ್ಳೆಗಳು ಕಚ್ಚದಂತೆ ಸೊಳ್ಳೆಪರದೆ ಅಥವಾ ಕಾಯಿಲ್ ಅಥವಾ ಕ್ರೀಂಗಳನ್ನು ಬಳಸಬೇಕು. ಮುಸ್ಸಂಜೆಯ ಹೊತ್ತು ಬಾಗಿಲು ಕಿಟಕಿಗಳನ್ನು ಮುಚ್ಚಿಡಬೇಕು.
* ನೀರು ಕಾಯಿಸಿಯೇ ಕುಡಿಯಬೇಕು. ಇಲ್ಲದಿದ್ದರೆ ಅಕ್ವಾಗಾರ್ಡ್ ನಂತಹ ಸಾಧನಗಳಿಂದ ಫಿಲ್ಟರ್ ಮಾಡಿದ ನೀರನ್ನೇ ಕುಡಿಯಬೇಕು.
* ಯಾರಿಗೂದರೂ ಜ್ವರದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಅವರಿಂದ ಇತರರಿಗೆ ಹರಡದಂತೆ ಎಚ್ಚರಿಕೆವಹಿಸಬೇಕು.












Click it and Unblock the Notifications