ನಿತ್ಯಾನಂದ ಪ್ರಭುಗೆ ಜು 30 ವಿಕ್ಟೋರಿಯಾದಲ್ಲಿ ಟೆಸ್ಟ್
ತನ್ನ ಷಂಡತನವನ್ನು ಬಹಿರಂಗವಾಗಿ ಒಪ್ಪಿಕೊಂಡ ನಿತ್ಯಾನಂದ ಮಹಾಸ್ವಾಮಿಗಳಿಗೆ ಸಿಐಡಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಗಾಗು ಎಂದು ತಾಕೀತು ಮಾಡುತ್ತಲೇ ಇದ್ದರು. ಆದರೆ ಅವಯ್ಯ ಅದೆಲ್ಲ ಆಗಾಕ್ಕಿಲ್ಲ ಎಂದು ಕೈಯೆತ್ತುತ್ತಿದ್ದ.
ಇತ್ತೀಚೆಗೆ ನಿತ್ಯಾನಂದ ಮಹಾಪ್ರಭುವಿನ ನಸೀಬ್ ಕೆಟ್ಟು ಒಂದಾದ ಮೇಲೊಂದರಂತೆ ವಿವಾದಗಳನ್ನು ಮೈಮೇಲೆ ಹಾಕಿಕೊಂಡಾಗ, ಎಚ್ಚೆತ್ತ ಪೊಲೀಸರು ನೋಡಿ ನಿತ್ಯಾನಂದ ಟೆಸ್ಟ್ ಗೆ ಬರೋಲ್ಲ ಅಂತಿದ್ದಾನೆ ಎಂದು ಹೈಕೋರ್ಟ್ ಮೊರೆಹೋಗಿದ್ದರು. ಇದನ್ನು ಆಲಿಸಿದ ಹೈಕೋರ್ಟ್ 'ಮೊದಲು ಕರಕೊಂಡು ಹೋಗಿ ಟೆಸ್ಟ್ ಮಾಡಿಸಿ' ಎಂದು ಝಾಡಿಸಿತು. ಹಾಗಾಗಿ ಸ್ವಾಮಿಗಳಿಗೆ ಸಿಐಡಿ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸ್ತಾರಂತೆ.
ಪ್ರಧಾನವಾಗಿ ತನಗೆ ಸಂಭೋಗದಲ್ಲಿ ತೊಡಗಲು ಆಗದು ಎಂಬುದು ನಿತ್ಯಾನಂದನ ಅಳಲು. ಮೊದಲು ಅದನ್ನೇ ಟೆಸ್ಟ್ ಮಾಡಲಾಗುವುದು. ಕುತೂಹಲದ ಸಂಗತಿಯೆಂದರೆ ವೈದ್ಯರು ಇಲ್ಲಿ ಸರ್ವಸ್ವತಂತ್ರರು. ನಿತ್ಯಾನಂದನ ಮೇಲೆ ಯಾವ ಟೆಸ್ಟ್ ಬೇಕಾದರೂ ಮಾಡಬಹುದು. ಗಮನಾರ್ಹವೆಂದರೆ ಪರೀಕ್ಷೆಗಳು ಸೂಕ್ಷ್ಮವಾಗಿರುವುದರಿಂದ ವೈದ್ಯರ ತಂಡದಲ್ಲಿ ಯಾವೆಲ್ಲ ವೈದ್ಯರಿದ್ದಾರೆ ಎಂಬುದನ್ನು ಸಿಐಡಿ ಬಹಿರಂಗಪಡಿಸಿಲ್ಲ.
ಟೆಸ್ಟ್ ಸಂಬಂಧ ಈಗಾಗಲೇ ಬಿಡದಿ ಆಶ್ರಮಕ್ಕೆ ನೋಟಿಸ್ ತಲುಪಿದೆ. 'ಜುಲೈ 30ರಂದು ಸಿಐಡಿ ಮುಖ್ಯಕಚೇರಿಗೆ ಬಂದುಬಿಡು. ಅಲ್ಲಿಂದ ಹತ್ತಿರದಲ್ಲೇ ಇರುವ ವಿಕ್ಟೋರಿಯಾ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ನಾವೇ ಕರೆದುಕೊಂಡು ಹೋಗುತ್ತೇವೆ' ಎಂದು ಸಿಐಡಿ ಅಧಿಕಾರಿಗಳು ನಿತ್ಯಾನಂದನಿಗೆ ಸೂಚಿಸಿದ್ದಾರೆ. ಮಹಾಸ್ವಾಮಿಗೆ ಅನ್ಯ ಮಾರ್ಗವಿಲ್ಲ. ಅಂದು ರಾಯನ್ ಸರ್ಕಲ್ಲಿನಲ್ಲಿರುವ ಸಿಐಡಿ ಮುಖ್ಯ ಕಚೇರಿಯತ್ತ ಬರಲೇಬೇಕು.