ಕುಂದಾಪುರದ ವಾಜಪೇಯಿ ಕೊನೆಗೂ ರಾಜೀನಾಮೆ

ರಾಜೀನಾಮೆ ಅಂಗೀಕೃತ: ಪಕ್ಷದ ಸದಸ್ಯತ್ವಕ್ಕೂ ಶ್ರೀನಿವಾಸ ಶೆಟ್ಟಿ ರಾಜೀನಾಮೆ ಸಲ್ಲಿಸಿದ್ದಾರಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲವಾದರೂ ಮುಂದಿನ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಶೆಟ್ಟರ ಆಪ್ತ ಮೂಲಗಳು ತಿಳಿಸಿವೆ. ಈ ಮಧ್ಯೆ, ಶ್ರೀನಿವಾಸ ಶೆಟ್ಟರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪೀಕರ್ ಬೋಪಯ್ಯ ಪ್ರಕಟಿಸಿದ್ದಾರೆ.
ಕುಂದಾಪುರದಿಂದ ಮೂರು ಬಾರಿ ಶಾಸಕರಾಗಿರುವ, ಬಂಟ ಸಮುದಾಯದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿ ಪಕ್ಷದ ವತಿಯಿಂದ ತಿಳಿಸಲಾಗಿತ್ತು.
ಅದರಂತೆ ಪ್ರಮಾಣ ವಚನ ಸ್ವೀಕಾರಕ್ಕೆ ಶೆಟ್ಟರೂ ರಾಜಭನವಕ್ಕೆ ಆಗಮಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರ ಹೆಸರನ್ನು ಸಚಿವರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಪಕ್ಷ ತೋರಿದ ಈ ಅಗೌರವದಿಂದ ಶೆಟ್ಟರು ಅಪಾರವಾಗಿ ನೊಂದಿದ್ದರು. ಅತ್ತ ಕುಂದಾಪುರ, ಕರಾವಳಿಯಾದ್ಯಂತ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ಬೆಂಬಲಿಸಿ, ಬಿಜೆಪಿ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ನಾನೂ ರಾಜೀನಾಮೆ ನೀಡಬೇಕು ಅಂದ್ಕೊಂಡಿದ್ದೆ... ಶ್ರೀನಿವಾಸ್ ಶೆಟ್ಟರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್ ಅವರು 'ವೈಯಕ್ತಿಕವಾಗಿ ಶೆಟ್ಟರ ರಾಜೀನಾಮೆಯಿಂದ ನನಗೆ ಅತೀವ ಬೇಸರವಾಗಿದೆ. ಇನ್ನು ಪಕ್ಷಕ್ಕಂತೂ ಇದರಿಂದ ಭಾರಿ ಹೊಡೆತ ಬೀಳಲಿದೆ. ನಾನೂ ರಾಜೀನಾಮೆ ನೀಡಬೇಕು ಅಂದ್ಕೊಂಡಿದ್ದೆ...ಆದರೆ ಹಿರಿಯ ನಾಯಕರು ತಡೆದರು' ಎಂದರು.












Click it and Unblock the Notifications