ಹೆಣ್ಣು ಶಿಶು ಹತ್ಯೆಗೆ ತಡೆ: ಕೋಟಿ ರು ಬಹುಮಾನ
ಆದರೆ ಪರಿಸ್ಥಿತಿ ಅಷ್ಟೊಂದು ಕುಲಗೆಟ್ಟು ಹೋಗಿದೆ. ಹೆಣ್ಣು ಶಿಶುವಿನ ಹತ್ಯೆ, ರಸ್ತೆ ಬದಿ ಕಸದ ತೊಟ್ಟಿಯಲ್ಲಿ ಹೆಣ್ಣು ಮಗು/ ಭ್ರೂಣ ಪತ್ತೆ, ಹೆಣ್ಣೂ ಹೆತ್ತ ಮಹಾತಾಯಿ ಮೇಲೆ ದೌರ್ಜನ್ಯ ಎಂಬಂತಹ ವರದಿಗಳು ದಿನಾ ಬೆಳಗಾದರೆ ಕೇಳಿ ಕೇಳಿ ರೋಸಿ ಹೋಗಿರುವ ಸರಕಾರ ಈ ಹೀನ ಕೃತ್ಯಕ್ಕೆ ಕಡಿವಾಣ ಹಾಕಲು ವಿಭಿನ್ನವಾದ ದಾರಿ ಕಂಡುಕೊಂಡಿದೆ.
ಏನಪಾ ಅಂದರೆ ಹರಿಯಾಣಾದ ಮುಖ್ಯಮಂತ್ರಿ ಭುಪಿಂಧರ್ ಸಿಂಗ್ ಹೂಡಾ ಇದಾರಲ್ಲ. ಅವರು ಜಿಂದ್ ಜಿಲ್ಲೆಯ ಬೀವೀಪುರ ಗ್ರಾಮದ ಅಭಿವೃದ್ಧಿಗಾಗಿ 1 ಕೋಟಿ ರು. ವಿತರಿಸಿದ್ದಾರೆ. ಯಾಕಪ್ಪಾ ಈ ದಿಢೀರ್ ಪ್ರೇಮ ಅಂದರೆ ಗ್ರಾಮದ ಖಾಪ್ ಮಹಾ ಪಂಚಾಯತ್ ಹೆಣ್ಣು ಮಗು/ ಭ್ರೂಣ ಹತ್ಯೆ ಕೃತ್ಯವನ್ನು ಮಹಾಪಾಪ ಎಂದು ಪ್ರಕಟಿಸಿದ್ದು, ಹಂತಕರಿಗೆ ಘೋರ ಶಿಕ್ಷೆ ವಿಧಿಸುವುದಾಗಿ ಘೋಷಿಸಿದೆ. ಗ್ರಾಮದ ಖಾಪ್ ಮಹಾಪಂಚಾಯತ್ ಅಷ್ಟೇ ಅಲ್ಲ. ಅಲ್ಲಿನ ಮಹಿಳೆಯರೂ ಇದಕ್ಕೆ ಸಾಥ್ ನೀಡಿದ್ದಾರೆ.
ಇದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಭುಪಿಂಧರ್ ಸಿಂಗ್ ಹೂಡಾ ಇದು ಹರಿಯಾಣಾ ರಾಜ್ಯಕ್ಕಷ್ಟೇ ಸೀಮಿತವಾಗದೆ ಇಡೀ ದೇಶಕ್ಕೆ ಮಾದರಿಯಾಗಿದೆ/ಸ್ಫೂರ್ತಿದಾಯಕವಾಗಿದೆ. ಇದು ಸಕಾರಾತ್ಮಕ ಸಾಮಾಜಿಕ ಬದಲಾವಣೆಗಳನ್ನು ತರುತ್ತದೆ ಎಂದು ಹೇಳಿದ್ದಾರೆ.
ಖಾಪ್ ಮಹಾ ಪಂಚಾಯತ್ ನಲ್ಲಿ ಬಹುತೇಕ ಮಹಿಳಾ ಸದಸ್ಯರೇ ಇದ್ದಾರೆ. ಈ ಸಾಮಾಜಿಕ ಪಿಡುಗಿನ ವಿರುದ್ಧ ಧ್ವನಿ ಎತ್ತಿ, ಕಳೆದ ವಾರ ನಡೆದ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮಹಾ ಪಂಚಾಯತ್ ಎಂಬುದು ನಾನಾ ಜಾತಿ/ಸಮುದಾಯಗಳ ಪರಿಷತ್ತು. ಹರಿಯಾಣಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ವಿವಿಧ ಸಮುದಾಯಗಳು ಇದರಲ್ಲಿ ಪಾಲ್ಗೊಂಡಿವೆ.
ಹೆಣ್ಣು ಮಗು/ ಭ್ರೂಣ ಹತ್ಯೆಯಿಂದ ಹೆಣ್ಣು ಮಕ್ಕಳ ಸಂಖ್ಯೆ ಗಂಭೀರವಾಗಿ ಕುಸಿದಿದೆ. ಆದ್ದರಿಂದ ಈ ಪಿಡುಗಿದೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೀವೀಪುರ ಗ್ರಾಮದಲ್ಲಿ ನಡೆದ ಖಾಪ್ ಮಹಾ ಪಂಚಾಯತ್ ನಲ್ಲಿ ನಿರ್ಣಯ ಕೈಗೊಂಡಿದೆ. ಇದನ್ನು ಸಾಮಾಜಿಕ ಚಳುವಳಿಯಾಗಿ ರೂಪಿಸಲು ಎಲ್ಲ ಖಾಪ್ ಮಹಾ ಪಂಚಾಯತ್ ಗಳೂ ಮುಂದೆ ಬರಬೇಕು ಎಂದು ಮುಖ್ಯಮಂತ್ರಿ ಭುಪಿಂಧರ್ ಸಿಂಗ್ ಹೂಡಾ ಹೇಳಿದ್ದಾರೆ.