ಸೋಮಶೇಖರ, ಸುರೇಶ್ ಬಾಬುಗೆ ಎಸಿಬಿ ಸಮನ್ಸ್

ಇತ್ತೀಚೆಗೆ ಬೇಲ್ ಗಾಗಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಜಡ್ಜ್ ಅಮಾನತುಗೊಂಡು, ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಸಿಟಿ ಸಿವಿಲ್ ತ್ವರಿತಗತಿ ಕೋರ್ಟ್ ನ್ಯಾ ಲಕ್ಷ್ಮಿನರಸಿಂಹರಾವ್ ಅವರನ್ನು ಅಮಾನತುಗೊಳಿಸಿ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ (ಜು.11) ಆದೇಶ ಹೊರಡಿಸಿತ್ತು.
ಜನಾರ್ದನ ರೆಡ್ಡಿ ಅವರ ಸೋದರ ಸೋಮಶೇಖರ್ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು ಸೇರಿದಂತೆ ಇತರೆ ಆರೋಪಿಗಳಿಗೂ ಎಸಿಬಿ ಸಮನ್ಸ್ ಜಾರಿ ಮಾಡಲಾಗಿದೆ. ಈ ನಡುವೆ ಈ ಪ್ರಕರಣವನ್ನು ಒಪ್ಪಿಸುವಂತೆ ಸಿಬಿಐ ತಂಡ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಈ ಬಗ್ಗೆ ಯಾವುದೇ ನಿರ್ಣಯ ಹೊರಬೀಳದ ಕಾರಣ ಎಸಿಬಿ ತಂಡ ತನ್ನ ತನಿಖೆಯನ್ನು ಮುಂದುವರೆಸಲಿದೆ ಎಂದು ಎಸಿಬಿ ಅಧಿಕಾರಿ ಪ್ರಸಾದ್ ರಾವ್ ಹೇಳಿದ್ದಾರೆ.
ಜಡ್ಜುಗಳಾದ ಪಟ್ಟಾಭಿ, ಚಲಪತಿರಾವ್, ಪ್ರಭಾಕರ ರಾವ್, ಲಕ್ಷ್ಮಿನರಸಿಂಹ ರಾವ್, ಪಟ್ಟಾಭಿ ಪುತ್ರ ರವಿಚಂದ್ರ, ರೌಡಿಶೀಟರ್ ಯಾದಗಿರಿ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಪ್ರಕರಣದ ಆರೋಪಿಗಳಾದ ಕರ್ನಾಟಕ ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಹಾಗೂ ಕೂಡ್ಲಿಗಿ ನಾಗೇಂದ್ರ ಅವರತ್ತ ACB ಕಣ್ಣು ಹಾಯಿಸಿದೆ.
ಮುಳುವಾದ ಯಾದಗಿರಿ ತಪ್ಪೊಪ್ಪಿಗೆ: ಲಂಚ ಪಡೆದು ಜಾಮೀನು ನೀಡಿದ ಆರೋಪ ಎದುರಿಸುತ್ತಿರುವ ಜಡ್ಜ್ ಪಟ್ಟಾಭಿರಾಮರಾವ್ ಜೊತೆ ಡೀಲ್ ಕುದುರಿಸಿದ್ದ ಯಾದಗಿರಿ ಸಿಕ್ಕಿ ಬಿದ್ದಿದ್ದು, ತಪ್ಪೊಪ್ಪಿಗೆ ನೀಡಿದ್ದು ಸೋಮಶೇಖರ ರೆಡ್ಡಿಗೆ ಮುಳುವಾಗಿದೆ. ಜೊತೆಗೆ ಗಾಲಿ ರೆಡ್ಡಿ ಅವರ ಮತ್ತೊಬ್ಬ ಸಂಬಂಧಿ ದಶರಥ ರೆಡ್ಡಿ ಮತ್ತು ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ತನಗೆ 20 ಕೋಟಿ ರುಪಾಯಿ ಹಣ ನೀಡಿದರು ಎಂದು ಯಾದಗಿರಿ ರಾವ್ ಹೇಳಿಕೆ ನೀಡಿದ್ದಾನೆ.
ನ್ಯಾ ಪಟ್ಟಾಭಿರಾಮರಾವ್ ಹಾಗೂ 8 ಜನರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1)(ಸಿ) ಹಾಗೂ 13(1)(ಡಿ)(ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ), ಐಪಿಸಿ ಸೆಕ್ಷನ್ 120ಬಿ(ಒಳಸಂಚು, ಪಿತೂರಿ), 409(ವಿಶ್ವಾಸ ದ್ರೋಹ), 420(ವಂಚನೆ) ಹಾಗೂ 417(ವಂಚನೆಗೆ ಪ್ರೋತ್ಸಾಹ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಾಲಿ ಜನಾರ್ದನರೆಡ್ಡಿ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(1)(ಡಿ), ಐಪಿಸಿ ಸೆಕ್ಷನ್ 120 ಬಿ ಹಾಗೂ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.
ಮೊದಲ ಎಫ್ ಐಆರ್ ನಲ್ಲಿ 8 ಜನರ ಹೆಸರಿದೆ. ಇನ್ನೊಂದು ಎಫ್ ಐಆರ್ ನಲ್ಲಿ 5 ಜನರ ಹೆಸರಿದೆ. ಜಾಮೀನಿಗಾಗಿ ಲಂಚ ಡೀಲ್ ಕುದುರಿಸಿದ ಪ್ರಮುಖ ಆರೋಪಿ ಆಂಧ್ರಪ್ರದೇಶ ಸಚಿವ ಎರಸು ಪ್ರತಾಪ್ ರೆಡ್ಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿಯ ಇಬ್ಬರು ರಾಜಕಾರಣಿಗಳ ಮೇಲೆ ಎರಡನೆ ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.












Click it and Unblock the Notifications