ಯುವತಿ ಮೇಲಿನ ದಾಳಿಗೆ ಪತ್ರಕರ್ತನ ಕುಮ್ಮಕ್ಕು!

20ಕ್ಕೂ ಹೆಚ್ಚಿದ್ದ ಕಾಮನೆ ಮತ್ತೇರಿದ ಯುವಕರ ತಂಡವನ್ನು, ಯುವತಿಯ ಮೇಲೆ ಲೈಂಗಿಕ ಹಿಂಸೆ ಮಾಡಲು ಉತ್ತೇಜಿಸಿದ್ದೇ ಆ ಅಹಸ್ಯಕರ ವಿಡಿಯೋ ಚಿತ್ರೀಕರಣ ಮಾಡಿದ ಟಿವಿ ಚಾನಲ್ ಪತ್ರಕರ್ತ ಎಂಬ ಸಂಗತಿಯನ್ನು ಸಾಕ್ಷ್ಯದ ಸಮೇತ ಆರ್ಟಿಐ ಕಾರ್ಯಕರ್ತ ಮತ್ತು ಟೀಂ ಅಣ್ಣಾ ಸದಸ್ಯ ಅಖಿಲ್ ಗೊಗೋಯ್ ಎಂಬುವವರು ಹೊರಹಾಕಿದ್ದಾರೆ.
ಪತ್ರಕರ್ತನೇ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಲು ಯುವಕರಿಗೆ ಕುಮ್ಮಕ್ಕು ನೀಡುತ್ತಿದ್ದ ವಿಡಿಯೋ ಸಾಕ್ಷ್ಯವನ್ನು ಅಖಿಲ್ ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮುನ್ನ ಆಸ್ಸಾಂನ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ್ದಾರೆ. ಇದು ಇಡೀ ಆಸ್ಸಾಂ ತಲೆತಗ್ಗಿಸುವಂತೆ ಮಾಡಿದೆ. ಪತ್ರಕರ್ತನ ಕೈವಾಡದ ಬಗ್ಗೆ ಉನ್ನತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಸ್ಸಾಂ ಎಲೆಕ್ಟ್ರಾನಿಕ್ ಮೀಡಿಯಾ ಒತ್ತಾಯ ಮಾಡಿದೆ.
ಕೆಲ ದಿನಗಳ ಹಿಂದೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ, ಆ ಯುವತಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆಯುತ್ತಿರುವಾಗ ಅದನ್ನು ಶೂಟ್ ಮಾಡುತ್ತಿದ್ದ ವ್ಯಕ್ತಿ ಏನು ಮಾಡುತ್ತಿದ್ದ, ಆ ಯುವಕರನ್ನು ಯಾಕೆ ತಡೆಯಲು ಯತ್ನಿಸಲಿಲ್ಲ ಎಂದು ಟ್ಟಿಟ್ಟರ್ನಲ್ಲಿ ಕಿಡಿ ಕಾರಿದ್ದರು. ಗೊಗೋಯ್ ಹೇಳಿರುವ ಪ್ರಕಾರ, ಪತ್ರಕರ್ತನೇ ಕೆಲ ಅಸಹ್ಯಕರ ಸಂಜ್ಞೆಗಳನ್ನು ಯುವತಿಗೆ ಮಾಡಿದ್ದಕ್ಕೆ ಆಕೆ ಪ್ರತಿರೋಧಿಸಿದ್ದೇ ಮುಂದಿನ ಘಟನೆಗಳಿಗೆ ಕಾರಣವಾಯಿತು.
ಯುವತಿ ಮೇಲೆ ಸಿಗರೇಟ್ ಗಾಯ : ಆ ಯುವತಿಯನ್ನು ಹತ್ತಾರು ಯುವಕರು ವಿವಸ್ತ್ರಗೊಳಿಸಿದ್ದೇ ಅಲ್ಲ, ಆಕೆಯ ದೇಹದ ಮೇಲೆ ಸಿಗರೇಟಿನಿಂದ ಅನೇಕ ಭಾಗಗಳಲ್ಲಿ ಸುಟ್ಟಿದ್ದಾರೆ ಎಂದು ಆಘಾತಕಾರಿ ವಿಷಯವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ತಿಳಿಸಿದ್ದಾರೆ.
ದೆಹಲಿಯಿಂದ ಗುವಾಹಾಟಿಗೆ ಬಂದಿದ್ದ ಆಯೋಗದ ಸದಸ್ಯರು ಲೈಂಗಿಕ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಯುವತಿಯನ್ನು ಭೇಟಿ ಮಾಡಿ ಆಕೆಯಿಂದ ಹೇಳಿಕೆಗಳನ್ನು ಪಡೆದಿದ್ದಾರೆ. ಆಕೆಯ ದೇಹದ ಮೇಲೆ ಸುಟ್ಟ ಗಾಯಗಳು ಇರುವುದನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿದ್ದಾರೆ.
ಆಸ್ಸಾಂನಲ್ಲಿ ಮತ್ತೊಂದು ಪ್ರಕರಣ : ಗುವಾಹಾಟಿಯಲ್ಲಿ ಯುವತಿಯ ಮೇಲೆ ಲೈಂಗಿಕ ದಾಳಿ ನಡೆಸಿದ ವಾರದಲ್ಲೇ ಆಸ್ಸಾಂನಲ್ಲಿ ಮತ್ತೊಂದು ಇಂಥದೇ ಪ್ರಕರಣ ದಾಖಲಾಗಿದೆ. ಆಸ್ಸಾಂ ಸಿಬ್ಸಾಗರ ಜಿಲ್ಲೆಯಲ್ಲಿ ಉರುವಲು ತರಲೆಂದು ಕಾಡಿಗೆ ತೆರಳುತ್ತಿದ್ದ ಹದಿಹರೆಯದ ಯುವತಿಯನ್ನು ಭೂಸೇನೆಯ ಜವಾನವೊಬ್ಬನು ಲೈಂಗಿಕವಾಗಿ ಹಿಂಸಿಸಿದ್ದಾನೆ. ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಹಳ್ಳಿಗರು ಸ್ಥಳಕ್ಕೆ ಧಾವಿಸಿದ್ದರಿಂದ ಆಕೆ ಪಾರಾಗಿದ್ದಾಳೆ.












Click it and Unblock the Notifications