ಯಡಿಯೂರಪ್ಪ ಶಕುನಿ, ಅಶೋಕ್ ಮೀರ್ ಸಾಧಿಕ್ : ಗೌಡ
ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಮಾಜಿ ಸಿಎಂ ಯಡಿಯೂರಪ್ಪ ಕುತಂತ್ರವೇ ಕಾರಣ. ಜಗದೀಶ್ ಶೆಟ್ಟರ್ ಅವರು ಒಳ್ಳೆ ವ್ಯಕ್ತಿ ಆದರೆ, ಯಡಿಯೂರಪ್ಪ ಅವರ ಸಹವಾಸಕ್ಕೆ ಬಿದ್ದರೆ ನಾಶ ಖಂಡಿತ ಎಂದು ಬಿಜೆಪಿ ಶಾಸಕ ಶಂಕರಲಿಂಗೇಗೌಡ ಎಚ್ಚರಿಸಿದ್ದಾರೆ.
ನಾಯಕತ್ವ ಬದಲಾವಣೆ ವಿರೋಧಿಸಿ ಒಕ್ಕಲಿಗ ಸಂಘ ನಗರದ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ಶಾಸಕ ಶಂಕರಲಿಂಗೇಗೌಡ, ಯಡಿಯೂರಪ್ಪ ಭ್ರಷ್ಟ, ಕುತಂತ್ರಿ, ಜಾತಿವಾದಿಯಾಗಿದ್ದಾರೆ. ನಮ್ಮ ಜನಾಂಗದವರಾದ ಸದಾನಂದ ಗೌಡರನ್ನು ಒಂದು ವರ್ಷ ಕೂಡಾ ಅಧಿಕಾರ ನಡೆಸಲು ಬಿಡಲಿಲ್ಲ. ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾದಲ್ಲಿ ಈ ಕೂಡಲೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅಬ್ಬರಿಸಿದರು.
ನಾಯಕತ್ವ ಬದಲಾವಣೆ ವಿರೋಧಿಸಿ ಒಕ್ಕಲಿಗ ಸಮುದಾಯದ ಮುಖಂಡರು ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಮಂಗಳವಾರ(ಜು.10) ನೆಲಮಂಗಲದಲ್ಲಿ ರಸ್ತೆ ತಡೆದು ಬಹರಿ ಪ್ರತಿಭಟನೆ ಕೈಗೊಂಡಿರುವ ಒಕ್ಕಲಿಗರು, ಬಿಜೆಪಿ ಹೈಕಮಾಂಡ್ ಗೆ ಸವಾಲು ಎಸೆದಿದ್ದಾರೆ.
ದಲಿತ ಮುಖಂಡರೊಬ್ಬರನ್ನು ಸಿಎಂ ಮಾಡಿ, ಸದಾನಂದ ಗೌಡರನ್ನು ಕೆಳಗಿಳಿಸಿದ್ದು ಏಕೆ ಎಂದು ಸ್ಪಷ್ಟವಾದ ಕಾರಣ ನೀಡಿ, ಜಾತಿ ರಾಜಕಾರಣ ಕೈಬಿಡಿ, ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಅವರು ಹೈಕಮಾಂಡ್ ಗೆ ಸವಾಲು ಹಾಕಿದ್ದಾರೆ.