ಶೆಟ್ಟರ್ ಸಿಎಂ ಮುಂದೆ ಸಂಪುಟ ರಾಗ ಹಾಡಿದ ಸಿಟಿ ರವಿ

ಜಗದೀಶ್ ಶೆಟ್ಟರ್ ಅವರು ಸಿಎಂ ಆಗಲು ಸಮರ್ಥ ವ್ಯಕ್ತಿ. ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಅವರು ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಶಾಸಕ ಹಾಗೂ ಬಿಜೆಪಿ ವಕ್ತಾರ ಸಿ.ಟಿ.ರವಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಡಿವಿ ಸದಾನಂದ ಗೌಡರು ರಾಜೀನಾಮೆ ನೀಡಿದ ನಂತರ ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, 'ಜಾತಿ ರಾಜಕಾರಣದ ಆಧಾರದ ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡಿಲ್ಲ. ಇದೊಂದು ಸಾಂದರ್ಭಿಕ ಬದಲಾವಣೆ. ಜಾತಿ, ಸಂಘರ್ಷದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಜಗದೀಶ್ ಶೆಟ್ಟರ್ ಗೂ ನಂಬಿಕೆ ಇಲ್ಲ. 11 ತಿಂಗಳಿನಲ್ಲಿ ಬಿಜೆಪಿ ಸರ್ಕಾರವನ್ನು ಸದಾನಂದ ಗೌಡರು ಸಮರ್ಥವಾಗಿ ಮುನ್ನೆಡೆಸಿಕೊಂಡು ಹೋಗಿದ್ದಾರೆ ಎಂದರು.
ನಾಯಕತ್ವ ಬದಲಾವಣೆಗೆ ಚುನಾವಣೆ, ಹಿಂದುತ್ವ, ಹೀಗೆ ಬೇರೆ ಕಾರಣಗಳಿದೆ ಹೊರತು ಜಾತಿ ರಾಜಕಾರಣದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ಜಾತಿ ರಾಜಕಾರಣದ ದುರ್ಲಭವನ್ನು ಯಾರೊಬ್ಬರೂ ಪಡೆಯಲೂ ಬಾರದು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ಮುಖ್ಯಮಂತ್ರಿ ಸದಾನಂದಗೌಡ ಅವರ ಬದಲಾವಣೆ ಕೇವಲ ಒಂದು ಸಾಂದರ್ಭಿಕ ಬದಲಾವಣೆಯೆ ಹೊರತು ಅದಕ್ಕೆ ರಾಜಕೀಯದ ಬಣ್ಣ ಹಚ್ಚಬೇಕಾಗಿಲ್ಲ ಎಂದರು.
ಶೆಟ್ಟರ್ ಜೊತೆ 31 ಜನರು ಸಂಪುಟಕ್ಕೆ?: ಬುಧವಾರ ಜಗದೀಶ್ ಶೆಟ್ಟರ್ ಅವರ ಜೊತೆ 31 ಶಾಸಕರು ಸಂಪುಟ ಸೇರುವ ನಿರೀಕ್ಷೆಯಿದೆ. ಅದರೆ, ಯಾರು ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದು ಪಕ್ಷದ ರಾಜ್ಯಾಧ್ಯಕ್ಷರಾಗಲಿ, ನಿಯೋಜಿತ ಮುಖ್ಯಮಂತ್ರಿ ಶೆಟ್ಟರ್ ಆಗಲಿ ಬಾಯ್ಬಿಟ್ಟಿಲ್ಲ. ದೆಹಲಿ ವರಿಷ್ಠರ ಜೊತೆ ಮಾತನಾಡಿ ನಂತರ ಬಹಿರಂಗ ಪಡಿಸಬಹುದು. ಆ ವಿಷಯ ಹಾಗಿರಲಿ, ಈಗ ಸಂಪುಟ ಸೇರಲು ಕಾದು ಕೂತಿರುವ ಪಟ್ಟಿಯತ್ತ ಸ್ವಲ್ಪ ಗಮನ ಹರಿಸೋಣ..
ಸುಮಾರು 21ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ತಲೆ ಮೇಲೆ ಇನ್ನೂ 9 ಖಾತೆಗಳು ಸೇರ್ಪಡೆಗೊಂಡಿತ್ತು. ಸದಾನಂದ ಗೌಡರು ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ಗೆ ನೀಡಿದ್ದರು. ಹೊಸಬರಿಗೆ ಸಂಪುಟದಲ್ಲಿ ಜಾಗ ನೀಡುವುದು ಸದಾನಂದ ಗೌಡರ ಪಟ್ಟಿಯ ಮುಖ್ಯ ಉದ್ದೇಶವಾಗಿತ್ತು. ಆದರೆ, ಶೆಟ್ಟರ್ ಎಷ್ಟರಮಟ್ಟಿಗೆ ಹೊಸಬರಿಗೆ ಸ್ಥಾನ ನೀಡುತ್ತಾರೆ ನೋಡಬೇಕಿದೆ.
ಡಾ.ವಿ.ಎಸ್. ಆಚಾರ್ಯ ನಿಧನ ಹಿನ್ನೆಲೆ ಕರಾವಳಿ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಸುಳ್ಯದ ಅಂಗಾರ ಅಥವಾ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ನೀಡವ ಸಾಧ್ಯತೆ ನಿಚ್ಚಳವಾಗಿದೆ. ಆಚಾರ್ಯ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಜು.25ರಲ್ಲಿ ಚುನಾವಣೆ ನಡೆಯಲಿದೆ.
ರೇಸ್ ನಲ್ಲಿ ಯಾರಿದ್ದಾರೆ: ತುಮಕೂರು ಭಾಗದಿಂದ ಸೊಗಡು ಶಿವಣ್ಣ, ಕೊಡಗಿನಿಂದ ಅಪ್ಪಚ್ಚು ರಂಜನ್, ಚಿಕ್ಕಮಗಳೂರು ಭಾಗದಿಂದ ಸಿ.ಟಿ. ರವಿ, ಜೀವರಾಜ್, ಎಂಪಿ ಕುಮಾರಸ್ವಾಮಿ.
ಮಂಗಳೂರು ಭಾಗದಿಂದ ಅಂಗಾರ, ಉಡುಪಿಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಳ್ಳಾರಿಯಿಂದ ಆನಂದ್ ಸಿಂಗ್, ಬಿಜಾಪುರದಿಂದ ಅಪ್ಪು ಪಟ್ಟಣಶೆಟ್ಟಿ, ಬೆಂಗಳೂರಿನಿಂದ ಅರವಿಂದ ಲಿಂಬಾವಳಿ ಅಥವಾ ಎಂ. ಶ್ರೀನಿವಾಸ್ ಈ ಬಾರಿಯ ಮಂತ್ರಿ ಸ್ಥಾನ ಗಿಟ್ಟಿಸುವ ನಿರೀಕ್ಷೆ ಹೊಂದಿದ್ದಾರೆ. ಈ ಪೈಕಿ ಇತ್ತೀಚೆಗೆ ಲೋಕಾಯುಕ್ತ ದಾಳಿಗೊಳಲಾದ ಎಂ ಶ್ರೀನಿವಾಸ್ ಅವರಿಗೆ ಸ್ಥಾನ ಸಿಗುವುದು ಕಷ್ಟ.
ಇವರೆಲ್ಲರ ಜೊತೆಗೆ ಬೇಳೂರು ಗೋಪಾಲಕೃಷ್ಣ ಕೂಡಾ ರೇಸ್ ನಲ್ಲಿದ್ದು, ಆರು ಕೊಟ್ಟರೆ ಯಡಿಯೂರಪ್ಪ ಕಡೆ ಸಚಿವ ಸ್ಥಾನ ಸಿಕ್ಕರೆ ಸದಾನಂದ ಗೌಡರ ಕಡೆ ಎಂಬಂತೆ ಆಡುತ್ತಿದ್ದ ಬೇಳೂರು ಈ ಬಾರಿ ಎರಡನೇ ಹಂತದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚು. ಹಿಂದುಳಿದ ವರ್ಗಕ್ಕೆ, ಪ್ರದೇಶವಾರು ಆದ್ಯತೆ, ಕೊಡಗಿಗೆ ಒಂದು ಸಚಿವ ಸ್ಥಾನ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಸ್ಥಾನ ಪಲ್ಲಟ: ಯಡಿಯೂರಪ್ಪ ಬೆಂಬಲಿಗ ಸಚಿವರಾದ ಸಿಎಂ ಉದಾಸಿ, ಉಮೇಶ್ ಕತ್ತಿ, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ರೇವೂ ನಾಯಕ ಬೆಳಮಗಿ, ಬಸವರಾಜ್ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಮತ್ತು ರಾಜೂಗೌಡ ಅವರ ಖಾತೆ ಬದಲಾವಣೆ ನಿಚ್ಚಳವಾಗಿದೆ.












Click it and Unblock the Notifications