ಬಾಲಕಿಗೆ ಮೂತ್ರ ಸೇವನೆ ಶಿಕ್ಷೆ, ವಾರ್ಡನ್ ಬಂಧನ

ರಾಷ್ಟ್ರಕವಿ ರವೀಂದ್ರನಾಥ ಟಾಗೋರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ 5ನೇ ತರಗತಿ ಬಾಲಕಿ ತನ್ನ ಮೂತ್ರವನ್ನೇ ಕುಡಿಯುವಂತೆ ಶಿಕ್ಷೆ ನೀಡಿದ ಆಘಾತಕಾರಿ ಘಟನೆ ನಡೆದಿತ್ತು.
5ನೇ ತರಗತಿಯ ಪುಟ್ಟ ಬಾಲಕಿ ಹಾಸಿಗೆ ಒದ್ದೆ ಮಾಡಿದಳೆಂಬ ಕಾರಣಕ್ಕೆ ಈ ಕಠೋರ ಶಿಕ್ಷೆ ವಿಧಿಸಲಾಗಿದೆ. ಬಾಲಕಿಯ ಪೋಷಕರು ಹಾಸ್ಟೆಲ್ ವಾರ್ಡನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತಪ್ಪಿತಸ್ಶರಿಗೆ ಗುರುತರ ಶಿಕ್ಷೆಯಾಗಲೇಬೇಕು. ಈ ಘಟನೆಯಿಂದ ನನ್ನ ಮಗಳು ಚೇತರಿಸಿಕೊಳ್ಳಲಾರಳು ಎಂದು ಬಾಲಕಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಕುರಿತು ವಿಶ್ವವಿದ್ಯಾಲಯದಿಂದ ವಿವರಣೆ ಕೇಳಿದೆ. ಇದು ನಿಜವೇ ಆಗಿದ್ದಲ್ಲಿ ವಾರ್ಡನ್ ಗೆ ಕಠಿಣ ಶಿಕ್ಷೆಯಾಗಲೇಬೇಕು. ಮಕ್ಕಳಿಗೆ ಈ ರೀತಿಯ ಅಮಾನುಷ ಶಿಕ್ಷೆ ವಿಧಿಸುವುದನ್ನು ದೇಶಾದ್ಯಂತ ನಿಷೇಧಿಸಲಾಗಿದೆ ಎಂದು NCPCR ಆಯೋಗದ ಸದಸ್ಯ ವಿನೋದ್ ಕುಮಾರ್ ಟಿಕ್ಕೂ ಹೇಳಿದ್ದಾರೆ.
ಆದರೆ ವಿಶ್ವ ವಿದ್ಯಾಲಯದ ಮೂಲಗಳು ಈ ಘಟನೆಯನ್ನು ನಿರಾಕರಿಸಿದ್ದು, ಬಾಲಕಿ ಅಸ್ವಸ್ಥಳಾಗಿದ್ದಳು. ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ವಾರ್ಡನ್ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸಲು ನಾಲ್ವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ವಿವಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಥ ಭವನ್ ನಲ್ಲಿರುವ ವಸತಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಿಂದ ತನಗೆ ಶಿಕ್ಷೆಯ ರೂಪದಲ್ಲಿ ಬಲವಂತವಾಗಿ ಮೂತ್ರ ಕುಡಿಸಲಾಗಿದೆ ಎಂಬ ದೂರನ್ನು ನಾವು ಸ್ವೀಕರಿಸಿದ್ದೇವೆ. ಮಾಜಿ ಡೀನ್ ಅರುಣಾ ಮುಖರ್ಜಿ ನೇತೃತ್ವದ ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ನಾಲ್ವರು ಸದಸ್ಯರ ಸತ್ಯಶೋಧನಾ ಸಮಿತಿ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ವಿವಿ ಕುಲಪತಿಗೆ ವರದಿ ಸಲ್ಲಿಸಲಿದೆ ಎಂದು ವಿವಿ ವಕ್ತಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ನಡೆದ ಘಟನೆಯಿಂದ ಪಶ್ಚಿಮ ಬಂಗಾಳ ತಲೆ ತಗ್ಗಿಸುವಂತಾಗಿದೆ. Karabi ಹಾಸ್ಟೆಲ್ ವಾರ್ಡನ್ ಉಮಾ ಪೊದ್ದಾರ್ ಎಂದಿನಂತೆ ವಿದ್ಯಾರ್ಥಿಗಳ ಕೊಠಡಿ ತಪಾಸಣೆ ನಡೆಸುತ್ತಿದ್ದಾಗ ಪುನೀತಾ ಎಂಬ ಬಾಲಕಿ ಹಾಸಿಗೆಯಲ್ಲಿ ಮೂತ್ರ ಮಾಡಿರುವುದು ಕಂಡು ಬಂದಿದೆ. ಇದರಿಂದ ಕೆರಳಿದ ವಾರ್ಡನ್ ಆಕೆಗೆ ಶಿಕ್ಷೆ ರೂಪವಾಗಿ ಮೂತ್ರ ಕುಡಿಯುವ ಶಿಕ್ಷೆ ನೀಡಿದರು ಎಂಬ ಆರೋಪವಿದೆ.












Click it and Unblock the Notifications