ಶೆಟ್ಟರ್ ಮುಖ್ಯಮಂತ್ರಿಯಾಗುವ proposal ಗೋತಾ?
ಏಕೆಂದರೆ ನಾಳೆಯೋ, ನಾಳಿದ್ದೋ ಸನ್ಮಾನ್ಯ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮಹೂರ್ತ ನಿಗದಿಯಾಗಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಪರಿಸ್ಥಿತಿ ಈಗ ಯಡಿಯೂರಪ್ಪ ಬಣದ ಕೈತಪ್ಪಿದೆ ಎನ್ನಲಾಗಿದೆ. ಜಗದೀಶ್ ಶೆಟ್ಟರ್ ಅವರು ದೆಹಲಿಯಿಂದಲೇ ಸಪ್ಪೆ ಮೋರೆ ಹಾಕಿಕೊಂಡು ಇಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.
ಅಡ್ವಾಣಿ ಅವ(ಕೃಪೆ): ಈ ಬೆಳವಣಿಗೆಗೆಲ್ಲಾ ಪ್ರಧಾನವಾಗಿ ಕಾರಣವಾಗಿರುವ ಬಿಜೆಪಿಯ ಭೀಷ್ಮ ಪಿತಾಮಹ ಎಲ್ ಕೆ ಅಡ್ವಾಣಿ. ನಿನ್ನೆ ಇಡೀ ದಿನ ಒಂದಿನಿತೂ ಅಲುಗಾಡದೆ ಆಡ್ವಾಣಿ ಅವರ ಮನೆಯ ಮುಂದೆ ಠಿಕಾಣಿ ಹೂಡಿದ್ದ ಜಗದೀಶ್ ಶೆಟ್ಟರ್ ಅವರಿಗೆ ಆಡ್ವಾಣಿ ದರುಶನ ನೀಡೇ ಇಲ್ಲ. ಇದರಿಂದ ಬೇಸತ್ತ ಶೆಟ್ಟರ್ ಅವರು ಬರಿಗೈಯಲ್ಲಿ ಬೆಂಗಳೂರು ವಿಮಾನ ಹತ್ತಿದ್ದಾರೆ. ಆದರೆ ಅಡ್ವಾಣಿಯ ಈ ನಿಲುವಿಗೆ ಹೇತುವಾಗಿರುವುದು ಬಾಲಚಂದ್ರ ಜಾರಕಿಹೊಳಿ ಎನ್ನಲಾಗಿದೆ.
ಆದರೆ ಹಿರಿಯ ನಾಯಕ ಅಡ್ವಾಣಿ ಅವರು ಮನೆಯ ಬಾಗಿಲಿಗೆ ಬಂದ ರಾಜ್ಯದ ಹಿರಿಯ ನಾಯಕರೊಬ್ಬರಿಗೆ ದರ್ಶನ ನೀಡದೆ ಈ ರೀತಿ ಅವಮಾನ ಮಾಡಿರುವ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನವನ್ನುಂಟುಮಾಡಿದೆ ಎನ್ನಲಾಗಿದೆ.
ರಾಜ್ಯ ಬಿಜೆಪಿಯಲ್ಲಿನ ತಿಕ್ಕಾಟ ತಾರ್ಕಿಕ ಅಂತ್ಯ ಕಂಡಿದ್ದು ಶೆಟ್ಟರ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಸಂಧಾನ ಸೂತ್ರ ಸಿದ್ಧವಾಗಿತ್ತು. ಆದರೆ ಸದಾನಂದ ಗೌಡರನ್ನು ಯಾವುದೇ ಕಾರಣಕ್ಕೂ ಕೆಳಿಗಿಳಿಸಬಾರದು ಎಂದು From Day Oneನಿಂದ ಸದಾನಂದರ ಪರವಾಗಿ ದೃಢವಾಗಿ ಬೇರೂರಿ ನಿಂತಿರುವ ಜಾರಕಿಹೊಳಿ ಅವರು ನಿನ್ನೆ ರಾತ್ರಿ ದೆಹಲಿಯಲ್ಲಿ ತಮ್ಮಕೊನೆಯ ಆಟ ಆಡಿದ್ದು ಶೆಟ್ಟರ್ ಅವರಿಗೆ ಸಿಎಂ ಸ್ಥಾನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ನಿನ್ನೆ ರಾತ್ರಿಯೇ ದೆಹಲಿಯಿಂದ ವಾಪಸಾಗಬೇಕಿದ್ದ ಜಾರಕಿಹೊಳಿ stay back ಆಗಿದ್ದು, ಇಂದು ಬೆಳಗ್ಗೆ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ಅವರ ಭೇಟಿಗೆ ಸಮಯ ನಿಗದಿಯಾಗಿದೆ. ಆ ಸಂದರ್ಭದಲ್ಲಿ ಸಿಎಂ ಸದಾನಂದ ಪರ ಅವರು ಭರ್ಜರಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.
ಇತ್ತ ದಿಢೀರ್ ಬೆಳವಣಿಗೆಗಳ ಬಗ್ಗೆ ಮತ್ತು ತಮ್ಮ ಅನುಯಾಯಿ ಶೆಟ್ಟರ್ ಗೆ ಪಟ್ಟ ಸಿಗದಿರುವ ಬಗ್ಗೆ ಭಿನ್ನಮತದ ನಾಯಕ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಏನು, ಮುಂದಿನ ಕಾರ್ಯತಂತ್ರವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.