ಬಿಕ್ಕಟ್ಟಿನ ಲಾಭ ನಮಗೆ ಬೇಕಿಲ್ಲ, ಚುನಾವಣೆಗೆ ಸಿದ್ಧ

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ಕೆಪಿಸಿಸಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಆಡಳಿತ ನಡೆಸಲು ಬರುವುದಿಲ್ಲ. ಪರಸ್ಪರ ತಮ್ಮ ತಮ್ಮಲ್ಲೇ ಕಚ್ಚಾಟ ಮಾಡಿಕೊಂಡು ಸರ್ಕಾರ ಪತನಗೊಳ್ಳುವ ಸ್ಥಿತಿಗೆ ಸ್ವತಃ ಬಿಜೆಪಿಯವರೇ ತಂದುಕೊಂಡಿದ್ದಾರೆ. ಕರ್ನಾಟಕದಲ್ಲಿ ವಿರೋಧ ಪಕ್ಷದ ಕೆಲಸವನ್ನು ಯಡಿಯೂರಪ್ಪ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಯಾವ ಸಂದರ್ಭದಲ್ಲಿ ಸರ್ಕಾರ ಪತನವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತದೆ ಎಂಬ ಆತಂಕದಲ್ಲಿ ಹಲವು ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಪ್ರಮುಖರು. ಬಿಜೆಪಿ ಬಿಕ್ಕಟ್ಟು, ಸರ್ಕಾರ ಪತನಕ್ಕೆ ನಾವು ಎಂದು ಯತ್ನಿಸಿಲ್ಲ. ಸುಮ್ಮನೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಹೇಳಿಕೆ ನೀಡುವುದನ್ನು ಈಶ್ವರಪ್ಪ ಸೇರಿದಂತೆ ಹಲವು ನಾಯಕರು ನಿಲ್ಲಿಸಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬಿಜೆಪಿಗೆ ನಾವು ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಬಿಜೆಪಿಯವರೇ ಆಡಳಿತ ಹಾಗೂ ಪ್ರತಿಪಕ್ಷದವರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಶಿವಕುಮಾರ್ ಗೇಲಿ ಮಾಡಿದರು.
ಬಿಜೆಪಿಯಲ್ಲಿನ ಭಿನ್ನಮತ ಚಟುವಟಿಕೆಯಿಂದ ರಾಜ್ಯ ಸರ್ಕಾರ ಕೋಮಾ ಸ್ಥಿತಿ ತಲುಪಿದೆ. ಕೂಡಲೇ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಜನಾದೇಶ ಪಡೆಯುವುದು ಒಳಿತು. ಸಚಿವರುಗಳು ರಾಜೀನಾಮೆ ಕೊಡುವುದು, ಹಿಂಪಡೆಯುವುದು, ಪರಸ್ಪರ ವಾಗ್ದಾಳಿ ನಡೆಸುವುದು ಜನರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿದೆ.
ನಾಡಿನಲ್ಲಿ ಬರಗಾಲವಿದೆ. ಕುಡಿಯಲು ನೀಡಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರದಿಂದ ಬಂದಿರುವ ಹಣ ಸದ್ಬಳಕೆಯಾಗಿಲ್ಲ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಯುಪಿಎ ಅಭ್ಯರ್ಥಿಯಾಗಿ ಮತಯಾಚನೆಗಾಗಿ ಬಂದಿದ್ದ ಪ್ರಣಬ್ ಮುಖರ್ಜಿ ಅವರಿಗೆ ಜೆಡಿಎಸ್ ಹಾಗೂ ಬಿಎಸ್ ಆರ್ ಕಾಂಗ್ರೆಸ್ ಪಕ್ಷಗಳು ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿರುವುದು ಸಂತಸದ ವಿಷಯ ಎಂದು ಶಿವಕುಮಾರ್ ಹೇಳಿದರು. ಹಿಂದುಳಿದ ವರ್ಗಗಳ ಬಗ್ಗೆ ಶ್ರೀರಾಮುಲು ಅವರಿಗೆ ಕಾಳಜಿ ಇದೆ ಎಂದು ಕೊಂಡಾಡಿದರು.












Click it and Unblock the Notifications