ಸೋನಿಯಾ ಬಗ್ಗೆ ಕಲಾಂ ಸತ್ಯ ಹೇಳುತ್ತಿಲ್ಲ: ಸ್ವಾಮಿ
ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಹುದ್ದೆಯಲ್ಲಿ ತಮ್ಮ ಅವಧಿಯ ಕೊನೆಯ ದಿನಗಳ ಬಗ್ಗೆ ಅನುಭವವನ್ನು Turning Points, A Journey Through Challenges, ಎಂಬ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ನೇಮಿಸಲು ಸಿದ್ಧತೆ ಬಗ್ಗೆ ಯಾವುದೇ ಅಭ್ಯಂತರವಿರಲಿಲ್ಲ ಎಂದು ಕಲಾಂ ಹೇಳಿದ್ದಾರೆ. ಆದರೆ, ಕಲಾಂ ಅವರ ಹೇಳಿಕೆಯನ್ನು ಸ್ವಾಮಿ ಅಲ್ಲಗೆಳೆದಿದ್ದಾರೆ. 2004ರ ಮೇ 17ರಂದು ಅಪರಾಹ್ನ 3:30ರ ವೇಳೆಗೆ ತಾವು ಸೋನಿಯಾ ಗಾಂಧಿಗೆ ಬರೆದ ಪತ್ರ ನಿಜವಾದ ಸತ್ಯವನ್ನು ಒಳಗೊಂಡಿದೆ. ಕಲಾಂ ಅವರು ಆ ಪತ್ರವನ್ನು ಪ್ರಕಟಿಸಿದರೆ ನಿಜವಾದ ಸತ್ಯ ಹೊರಬೀಳಲಿದೆ ಎಂದು ಸ್ವಾಮಿ ಹೇಳಿದ್ದಾರೆ.
ಸೋನಿಯಾ ಅವರ ವಿದೇಶಿ ಮೂಲವನ್ನು ಉಲ್ಲೇಖಿಸಿ, ಪ್ರಧಾನಿ ಹುದ್ದೆಗೆ ಹಕ್ಕು ಮಂಡನೆಯನ್ನು ಒಪ್ಪಿಕೊಳ್ಳಲಾಗದು ಎಂದು ಡಾ. ಕಲಾಂ ಆ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಸೋನಿಯಾರನ್ನು ಒಪ್ಪಿಕೊಂಡರೆ ನ್ಯಾಯಾಂಗ ಹೋರಾಟಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತಿತ್ತು.
2004ರ ಮೇ 18ರ ಸಂಜೆ ನಂತರ ನಡೆದ ಎಲ್ಲಾ ನಾಟಕೀಯ ಬೆಳವಣಿಗೆಗಳ ಬಗ್ಗೆ ಕಲಾಂ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ದೇಶದ 11ನೇ ರಾಷ್ಟ್ರಪತಿಯಾಗಿ ತಾವು ಸೋನಿಯಾ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ನೇಮಿಸಲು ಸಿದ್ಧರಿದ್ದೆವು; ಆದರೆ ಯುಪಿಎ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಸೋನಿಯಾ ಬದಲು ಮನಮೋಹನ್ ಸಿಂಗ್ ಅವರನ್ನು ಹೆಸರಿಸಿತು ಎಂದು ಕಲಾಂ ನೆನಪಿಸಿಕೊಂಡಿದ್ದಾರೆ. ಆದರೆ, ಏಕೆ ಈ ನಿರ್ಣಯ ಕೈಗೊಳ್ಳಲಾಯಿತು ಎಂಬ ವಿಷಯ ಇರುವ ಪತ್ರವನ್ನು ಬಹಿರಂಗಪಡಿಸಿಲ್ಲ.
ಸೋನಿಯಾ ಅವರು ಡಾ. ಮನಮೋಹನ್ ಸಿಂಗ್ ಜತೆಗೆ ರಾಷ್ಟ್ರಪತಿ ಭವನಕ್ಕೆ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ರಾತ್ರಿ 8:15ಕ್ಕೆ ಆಗಮಿಸಿದರು. ಆ ಸಂದರ್ಭದಲ್ಲಿ ಪರಸ್ಪರ ಗೌರವಾರ್ಪಣೆಯ ಬಳಿಕ, ವಿವಿಧ ಪಕ್ಷಗಳು ನೀಡಿದ ಬೆಂಬಲ ಪತ್ರವನ್ನು ಸೋನಿಯಾ ತೋರಿಸಿದರು. ಇದು ಸ್ವಾಗತಾರ್ಹ ಎಂದು ನಾನು ಹೇಳಿದೆ.
ನಿಮಗೆ ಸೂಕ್ತವೆನಿಸಿದ ಸಮಯಕ್ಕೆ ಪ್ರಮಾಣ ವಚನ ಬೋಧಿಸಲು ರಾಷ್ಟ್ರಪತಿ ಭವನ ಸಿದ್ಧವಿದೆ ಎಂದು ನಾನು ತಿಳಿಸಿದೆ. ಆಗ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ನಾಮಕರಣ ಮಾಡುವುದಾಗಿ ಸೋನಿಯಾ ಹೇಳಿದರು. ಇದು ನನಗೆ ಅತ್ಯಾಶ್ಚರ್ಯ ಉಂಟುಮಾಡಿತು. ಇದರಿಂದಾಗಿ ರಾಷ್ಟ್ರಪತಿ ಭವನವು ಪ್ರಧಾನಿ ನೇಮಕದ ಪತ್ರವನ್ನು ಹೊಸದಾಗಿ ಸಿದ್ಧಗೊಳಿಸಬೇಕಾಯಿತು ಎಂದು ಕಲಾಂ ವಿವರಿಸಿದ್ದಾರೆ.
1991ರ ಆರ್ಥಿಕ ಸುಧಾರಣೆಯ ಹರಿಕಾರ ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಯುಪಿಎ ಆಯ್ಕೆ ಮಾಡಿದೆ ಎಂದಾಗ ನಾನು ಇಲ್ಲವೆನ್ನಲಾಗಲಿಲ್ಲ. ರಾಷ್ಟ್ರಪತಿ ಭವನ ಮೊದಲೇ ಸಿದ್ಧಪಡಿಸಿದ್ದ ಪತ್ರವನ್ನು ತಿದ್ದುಪಡಿ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಸೂಚಿಸಿದ ಪತ್ರವನ್ನು ತಯಾರಿಸಲಾಯಿತು ಎಂದು ಕಲಾಂ ಕೃತಿಯಲ್ಲಿ ಹೇಳಿದ್ದಾರೆ.
"Ask media to recycle MMS (Manmohan Singh) statement to TV and press on May 17th, reading out the last para of Kalam's 3.30 pm letter." ಎಂದು ಟ್ವೀಟ್ ಮಾಡಿರುವ ಸ್ವಾಮಿ ಇನ್ನು ಕಲಾಂ ಅವರ ಕೃತಿಯ ಬಗ್ಗೆ ಮಾತನಾಡುವುದಿದೆ ಎಂದು ಹೇಳಿದ್ದಾರೆ.