ಪ್ರತಿಷ್ಠಿತ ಪುಟ್ಟಣ್ಣ ಚಿತ್ರಮಂದಿರ ನೆಲಸಮಕ್ಕೆ ಮಹೂರ್ತ ಫಿಕ್ಸ್

ಮುಂದಿನ ತಿಂಗಳು ಅಂದರೆ ಜುಲೈ 23ರಂದು ಚಿತ್ರಮಂದಿರ ಕೆಡವಿ ಭೂಮಿಪೂಜೆ ಮಾಡಲು ದಿನ ನಿಗದಿ ಮಾಡಲಾಗಿದೆ. ಮುಂದಿನ 18ರಿಂದ 20 ತಿಂಗಳೊಳಗೆ ಸಮುಚ್ಚಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಯನಗರದ ಶಾಸಕ ವಿಜಯ್ ಕುಮಾರ್ ಹೇಳಿದ್ದಾರೆ. ಒಟ್ಟು ನಾಲ್ಕು ಬ್ಲಾಕಿನಲ್ಲಿ ಈ ಸಂಕೀರ್ಣ ನಿರ್ಮಾಣಗೊಳ್ಳಲಿದೆ.
ಶುಕ್ರವಾರ (ಜೂ 29)ರಂದು ಬಿಬಿಎಂಪಿ ಮೇಯರ್ ವೆಂಕಟೇಶ್ ಮೂರ್ತಿ, ಆಡಳಿತ ಪಕ್ಷದ ನಾಗರಾಜ್ ಮತ್ತು ಶಾಸಕರೊಂದಿಗೆ ಪುಟ್ಟಣ್ಣ ಚಿತ್ರಮಂದಿರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಹೇಳಿಕೆ ನೀಡಿದ ಮೇಯರ್ 193 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಎರಡು ಚಿತ್ರಮಂದಿರಗಳು, ಐದು ಅಂತಸ್ತಿನ ಕಟ್ಟಡ ಮತ್ತು ಸೆಲ್ಲರ್ ನಿರ್ಮಾಣ ಮಾಡಿಕೊಡಲು ಈಗಾಗಲೇ ಬಿಡಿಎಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ನೂತನ ಕಾಮಗಾರಿಗೆ ಟೆಂಡರ್ ಕಾರ್ಯ ಮುಗಿದಿದ್ದು ನಾಗಾರ್ಜುನ ಸಂಸ್ಥೆಗೆ ವಹಿಸಿಕೊಡಲಾಗಿದೆ. ಮುಖ್ಯಮಂತ್ರಿ ಸದಾನಂದ ಗೌಡರ ಬಳಿ ಭೂಮಿಪೂಜೆ ನೆರವೇರಿಸಲು ಮನವಿ ಮಾಡಲಾಗಿದೆ ಎಂದು ಬಿ ಎನ್ ವಿಜಯ್ ಕುಮಾರ್ ಹೇಳಿದ್ದಾರೆ.
ಮೊದಲು ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವನ್ನು ಕೆಡವಿ ಹಾಕಲಾಗುವುದು. ನಂತರ ಎರಡು ಅಂತಸ್ತಿನ ಕಟ್ಟಡ ಪೂರ್ಣಗೊಳ್ಳುತ್ತಿದ್ದಂತೆ ಜನತಾ ಬಜಾರ್, ತರಕಾರಿ, ಮೀನು ಮಾರಾಟಗಾರರು ಮತ್ತು ಇತರ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಶಾಸಕರು ಹೇಳಿದ್ದಾರೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಇದರ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು 15 ವರ್ಷದ ನಂತರ ಈ ಕಟ್ಟಡವನ್ನು ಬಿಬಿಎಂಪಿಗೆ ವಾಪಸ್ ನೀಡಲಿದೆ.
ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹೆಸರಿನಲ್ಲಿ ಈ ಚಿತ್ರಮಂದಿರ ನಿರ್ಮಿಸಲಾಗಿತ್ತು. ಇಂಥಹ ಮೇರು ನಿರ್ದೇಶಕನ ಹೆಸರಿನಲ್ಲಿರುವ ಈ ಚಿತ್ರಮಂದಿರ ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಅವಸಾನದ ಹಾದಿ ಹಿಡಿದಿತ್ತು.
ನವೀಕರಣದ ಹೆಸರಿನಲ್ಲಿ 2004ರಲ್ಲಿ ಸರಕಾರ ಈ ಚಿತ್ರಮಂದಿರಕ್ಕೆ ಬೀಗ ಜಡಿದಿತ್ತು. ಕೆಲ ದಿನ ಈ ಚಿತ್ರಮಂದಿರ ಜಯನಗರ ಪೊಲೀಸ್ ಠಾಣೆಗೆ ಕಛೇರಿಯಾಗಿತ್ತು. ಪುಟ್ಟಣ್ಣ ಶಿಷ್ಯರಾದ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಚಿತ್ರಮಂದಿರ ಮತ್ತೆ ಕಾರ್ಯನಿರ್ವಹಿಸಲು ಶತ ಪ್ರಯತ್ನ ನಡೆಸಿದ್ದರು.
ಅಬ್ಬಾ.. ಪರವಾಗಿಲ್ವೇ ಬಿಬಿಎಂಪಿಯವರು, at least ಚಿತ್ರಮಂದಿರ ಕೆಡವಿ ಇನ್ನೊಂದು ಚಿತ್ರಮಂದಿರ ನಿರ್ಮಾಣ ಮಾಡುತ್ತಿದ್ದಾರಲ್ಲಾ. ಸಾಲ ಸಾಲ ಅನ್ಕೊಂಡು ಇದನ್ನು ಅಡ ಇಟ್ಟಿಲ್ವೆ ಅಂತಾನೆ ನೋಡಿ ನಮ್ಮ ಗುಂಡ..












Click it and Unblock the Notifications