ಬಿಎಸ್ವೈ ಬಣಕ್ಕೆ ನಾಳೆ ಸರಿಯಾಗಿ ತಿರುಗೇಟು ನೀಡಲಿರುವ ಸಿಎಂ?
ಶನಿವಾರ (ಜೂ 30) ಮೂರು ಗಂಟೆಗೆ ತನ್ನ ಆಪ್ತವಲಯದ ಸಚಿವರ ಮತ್ತು ಶಾಸಕರ ತುರ್ತು ಸಭೆಯನ್ನು ಸದಾನಂದ ಗೌಡ ಕರೆದಿದ್ದಾರೆ. ಈ ಸಭೆಯ ನಂತರ ರಾಜ್ಯಪಾಲ ಭಾರದ್ವಾಜ್ ಅವರನ್ನು ಸಿಎಂ ಭೇಟಿಯಾಗಲಿದ್ದಾರೆ.
ಒಂದು ವೇಳೆ ಯಡಿಯೂರಪ್ಪ ಬಣದ ಸಚಿವರುಗಳು ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
ಈ ಮೂಲಕ ಯಡಿಯೂರಪ್ಪ ಮತ್ತು ಅವರ ಬಣಕ್ಕೆ ಸರಿಯಾದ ತಿರುಗೇಟು ನೀಡಲು ಸಿಎಂ ಮತ್ತು ಅವರ ಆಪ್ತರು ನಿರ್ಧರಿಸಿದ್ದಾರೆ. ರಾಜೀನಾಮೆ ನೀಡುವ ಬಗ್ಗೆ ನನ್ನಲ್ಲಿ ಯಾವುದೇ ಮಾಹಿತಿಗಳು ಇಲ್ಲ.
ರಾಜೀನಾಮೆ ನೀಡಿದರೆ ಪರಿಶೀಲನೆ ನಡೆಸುವೆ, ಬಹುಷಃ ಅವರಿಗೆ ಪಕ್ಷಕ್ಕೆ ಕೆಲಸ ಮಾಡಲು ತೊಂದರೆಯಾಗುತ್ತಿರಬಹುದು ಎಂದು ಸಿಎಂ ಗೌಡ ವ್ಯಂಗ್ಯವಾಡಿದ್ದಾರೆ.
ಇಂದು ಸಂಜೆ 7ಗಂಟೆಯ ಒಳಗೆ ಸಚಿವ ಸಂಪುಟ ಸಭೆಯ ಕರೆಯದಿದ್ದರೆ ಹತ್ತು ಸಚಿವರುಗಳು ( ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಸಿ ಎಂ ಉದಾಸಿ, ಉಮೇಶ್ ಕತ್ತಿ, ವಿ ಸೋಮಣ್ಣ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ರೇವೂನಾಯಕ್ ಬೆಳಮಗಿ, ರಾಜು ಗೌಡ, ಮುರುಗೇಶ್ ನಿರಾಣಿ) ರಾಜೀನಾಮೆ ನೀಡುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ.
ಎಲ್ಲಾ ಸಚಿವರುಗಳ ರಾಜೀನಾಮೆ ಪತ್ರ ಶೆಟ್ಟರ್ ನಿವಾಸದಲ್ಲಿ ರೆಡಿಯಾಗಿದ್ದು ಸಿಎಂ ಬೆಂಗಳೂರಿಗೆ ಬಂದ ಕೂಡಲೇ ಅವರಿಗೆ ನೀಡಲು ತಯಾರಾಗಿದ್ದಾರೆ. ಮುಂದೆ ಆಗಬಹುದಾದ ಸಾಧಕ ಬಾಧಕಗಳನ್ನು ಮುಂದಾಲೋಚನೆ ಮಾಡಿಕೊಂಡೆ ಸಚಿವರುಗಳು ರಾಜೀನಾಮೆಗೆ ಮುಂದಾಗಿದ್ದಾರೋ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.
ಹಾವೂ ಸಾಯಿಬಾರದು, ಕೋಲೂ ಮುರಿಯಬಾರದು ಎನ್ನುವ ಬಿಜೆಪಿ ಹೈಕಮಾಂಡ್ ಧೋರಣೆ ಎಂದಿನಂತೆ ಮುಂದುವರಿದಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲು ಮುಂದಾಗಿರುವ ಎಲ್ಲಾ ಸಚಿವರುಗಳ ಜೊತೆ ವನ್ ಟು ವನ್ ದೂರವಾಣಿ ಸಂಪರ್ಕದಲ್ಲಿದ್ದಾರೆ. ಸದ್ಯ ಯಾವುದೇ ಕಾರಣಕ್ಕೂ ಸಿಎಂ ಕುರ್ಚಿಯಲ್ಲಿ ಬದಲಾವಣೆ ಇಲ್ಲ ಎಂದು ದೆಹಲಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಆದರೆ ಹೈಕಮಾಂಡ್ ಮಾತನ್ನು ಕೇಳುವ ಯಾವುದೇ ಮನಸ್ಥಿತಿಯಲ್ಲಿ ಯಡಿಯೂರಪ್ಪ ಬೆಂಬಲಿಗರು ಸದ್ಯಕಿಲ್ಲ.