ಭೋಪಾಲ್ ದುರಂತ : ಅಮೆರಿಕ ಕೋರ್ಟ್ ತೀರ್ಪು
ಭೋಪಾಲ್ ಅನಿಲ ಸೋರಿಕೆಯ ನಂತರ ಸುತ್ತಲಿನ ಮಣ್ಣು ಮತ್ತು ನೀರು ವಿಷಪೂರಿತವಾಗಲು ಯುನಿಯನ್ ಕಾರ್ಬೈಡ್ ಕಂಪನಿ ಮತ್ತು ಅದರ ಚೇರ್ಮನ್ ಕಾರಣ ಎಂದು ಹೂಡಲಾಗಿದ್ದ ದೂರಿ ಹೂಡಲಾಗಿದ್ದ ಕೇಸನ್ನು ಮ್ಯಾನ್ಹಟ್ಟನ್ ಜಿಲ್ಲಾ ನ್ಯಾಯಾಧೀಶ ಜಾನ್ ಕಾನಾ ಅವರು ತಳ್ಳಿಹಾಕಿದ್ದಾರೆ. ಪರಿಸರ ಕಲುಷಿತವಾಗಲು ಅವರು ಕಾರಣ ಅಲ್ಲವೇ ಇಲ್ಲ ಎಂದು ತೀರ್ಪು ನೀಡಿದ್ದಾರೆ.
ಅನಿಲ ಸೋರಿಕೆಯಿಂದಾಗಿ ಭೋಪಾಲ್ ಅನಿಲ ಘಟಕ ಇದ್ದ ಸ್ಥಳದ ಸುತ್ತಲಿನ ಜಮೀನಿನ ಮಣ್ಣು ಕಲುಷಯುಕ್ತವಾಗಿದೆ ಮತ್ತು ಅಲ್ಲಿನ ನಿವಾಸಿಗಳು ಕುಡಿಯುವ ನೀರು ವಿಷದಿಂದ ಕೂಡಿದೆ ಎಂದು ಜಾನಕಿ ಬಾಯಿ ಸಾಹು ಮತ್ತಿತರರು ಯುನಿಯನ್ ಕಾರ್ಬೈಡ್ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.
ಈ ದುರಂತಕ್ಕೆ ಯುನಿಯನ್ ಕಾರ್ಬೈಡ್ ಕಂಪನಿಯ ಅಂಗ ಸಂಸ್ಥೆಯಾಗಿದ್ದ ಯುನಿಯನ್ ಕಾರ್ಬೈಡ್ ಇಂಡಿಯಾ ಲಿ. ಕಾರಣವೇ ಹೊರತು ಮಾತೃಸಂಸ್ಥೆಯಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕುಡಿಯುವ ನೀರು ವಿಷಪೂರಿತ ಮಾಡಿದ ಅನಿಲ ಘಟಕ ಉತ್ಪಾದಿಸುತ್ತಿದ್ದ ತ್ಯಾಜ್ಯದ ವಿಲೇವಾರಿ ಭಾರತದಲ್ಲಿನ ಕಂಪನಿಯ ಜವಾಬ್ದಾರಿಯಾಗಿತ್ತು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ಮಾತೃಸಂಸ್ಥೆಯ ಅನುಮತಿಯನ್ನು ಭಾರತದಲ್ಲಿನ ಕಂಪನಿ ಪಡೆದಿತ್ತು ಎಂದು ವಾದಿಗಳು ಮೊಕದ್ದಮೆಯಲ್ಲಿ ತಿಳಿಸಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಸಾಕ್ಷಿ ದೊರೆತಿಲ್ಲವಾದ ಕಾರಣ ಯುನಿಯನ್ ಕಾರ್ಬೈಡ್ ಕಂಪನಿಯನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
1984ರ ಡಿಸೆಂಬರ್ 3ರಂದು ಮಧ್ಯಪ್ರದೇಶದ ಭೋಪಾಲ್ನ ಕೀಟನಾಶಕ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಮಿಥೈಲ್ ಇಸೋಸೈನೇಟ್ ಅನಿಲ ಸೋರಿಕೆಯಿಂದಾಗಿ ಮೂರು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡು, ನಂತರದ ವರ್ಷಗಳಲ್ಲಿ ಸಾವಿರಾರು ಜನರು ಅಂಗವೈಕಲ್ಯ ಅನುಭವಿಸಿದ್ದರು.