ಜಗನ್ ಜನರಿಂದ ಸಿಬಿಐ ಲಕ್ಷ್ಮಿನಾರಾಯಣ ಫೋನ್ ಟ್ಯಾಪ್
ವಿಷಯವೇನೆಂದರೆ, ತಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಿಬಿಐ ಲಕ್ಷ್ಮಿನಾರಾಯಣ ಅವರನ್ನು ಅಡಕತ್ತರಿಗೆ ಸಿಕ್ಕಿಸಲು ಜಗನ್ ಸಾರಥ್ಯದ YSR Congress ನಾಯಕರು ನೇರವಾಗಿ ಲಕ್ಷ್ಮಿನಾರಾಯಣರ ಮೊಬೈಲನ್ನೇ ಕದ್ದಾಲಿಸಿ, ಈಗ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರೆ.
ಹಿರಿಯ ಅಧಿಕಾರಿಯ ತೇಜೋವಧೆ ಮಾಡಲು ಅವರ ಫೋನುಗಳನ್ನು ಅನಧಿಕೃತವಾಗಿ ಕದ್ದಾಲಿಸಿದ್ದೂ ಅಲ್ಲದೆ, call details ಅನ್ನು ಬಹಿರಂಗಗೊಳಿಸಿರುವ YSR Congress ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೆಹಲಿ ಸಿಬಿಐ ನಿರ್ಧರಿಸಿದೆ.
ಆಯ್ದ ಕೆಲವು ಮಾಧ್ಯಮಗಳನ್ನು ಸಂಪರ್ಕಿಸಿ, ತಮ್ಮ ಪಕ್ಷದ ನಾಯಕನ ಬಂಧನದ ಸುದ್ದಿ ಪ್ರಮುಖವಾಗಿ ಪ್ರಸಾರವಾಗುವಂತೆ ಸಿಬಿಐ ಲಕ್ಷ್ಮಿನಾರಾಯಣ ಯತ್ನಿಸಿದ್ದಾರೆ ಎಂಬುದು ಈ ರೀತಿಯ ಫೋನ್ ಕದ್ದಾಲಿಕೆಯ ಮೂಲಕ ದೃಢಪಟ್ಟಿದೆ ಎಂಬುದು YSR Congress ನಾಯಕರ ಆರೋಪವಾಗಿದೆ.
ಸಿಬಿಐ ಲಕ್ಷ್ಮಿನಾರಾಯಣ ಸಹಪಾಠಿ ಚಂದ್ರಬಾಲಾ : ಸಿಬಿಐ ಲಕ್ಷ್ಮಿನಾರಾಯಣ ಅವರು ತಮ್ಮ ಸಹಪಾಠಿ ವಾಸಿರೆಡ್ಡಿ ಚಂದ್ರಬಾಲಾ ಜತೆ ನಡೆಸಿದ ದೂರವಾಣಿ ಮಾತುಕತೆ ಈ ವಿವಾದದ ಕೇಂದ್ರಬಿಂದುವಾಗಿದೆ. 'ಸಹಪಾಠಿ ಹೀಗೆ ಆಪ್ತವಾಗಿ ಮಾತನಾಡಿಕೊಳ್ಳುವುದಕ್ಕೆ ನಮ್ಮದೇನೂ ಆಭ್ಯಂತರವಿಲ್ಲ. ಆದರೆ ಹಾಗೆ ಲಕ್ಷ್ಮಿನಾರಾಯಣ ಜತೆ ಮಾತನಾಡಿದ ಬಳಿಕ ಚಂದ್ರಬಾಲಾ ಅವರು ಆಂಧ್ರಜ್ಯೋತಿ ಸಂಪಾದಕರ (ವಿ ರಾಧಾಕೃಷ್ಣ) ಜತೆ ಮಾತುಕತೆ ನಡೆಸುತ್ತಿದ್ದುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆಯಾಗಬೇಕು' ಎಂದು YSR Congress ವಕ್ತಾರ ಅಂಬಟ್ಟಿ ರಾಮಬಾಬು ಆಗ್ರಹಿಸಿದ್ದಾರೆ.
ಚಂದ್ರಬಾಲಾ ಮತ್ತು ಲಕ್ಷ್ಮಿನಾರಾಯಣ ಅವರು ವಾರಂಗಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದಾರೆ. ಕುಕ್ಕುಟಪಲ್ಲಿಯ ನಿವಾಸಿ ಚಂದ್ರಬಾಲಾ ಅವರು IBMನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ಇವರಿಬ್ಬರೂ ಬಳಸುತ್ತಿದ್ದ BSNL ಮೊಬೈಲುಗಳ call details ಜಗನ್ ಆಪ್ತರ ಕೈಸೇರುವುದಕ್ಕೆ BSNL ಸಿಬ್ಬಂದಿ ಸಹಕರಿಸಿದ್ದಾರೆ ಎಂದು ಅನುಮಾನಿಸಲಾಗಿದೆ. ಸಿಬಿಐ ಲಕ್ಷ್ಮಿನಾರಾಯಣ ಅವರು ತಮಗೆ ಒಪ್ಪಿಸಿರುವ High profile ಪ್ರಕರಣಗಳ ತನಿಖೆಗೆಂದು ರಹಸ್ಯವಾಗಿ ಈ BSNL ಮೊಬೈಲನ್ನು ಬಳಸುತ್ತಾರೆ ಎನ್ನಲಾಗಿದೆ.
DoT ಮಾರ್ಗಸೂಚಿ ಪ್ರಕಾರ ಯಾವುದೇ ಮೊಬೈಲ್ ಸೇವಾ ಕಂಪನಿಯು SP ಅಥವಾ DCP ಶ್ರೇಣಿಯ ಪೊಲೀಸ್ ಅಧಿಕಾರಿಯ ಕೋರಿಕೆ ಮೇರೆಗೆ ಮಾತ್ರ ದೂರವಾಣಿಯ call details ನೀಡಬಹುದಾಗಿದೆ. ಹಾಗಂತ, ಈಗಿನ Right to Information Act ಪ್ರಕಾರ ಬೇರೆ ಯಾರೇ ಆಗಲಿ ಇಂತಹ ಮಾಹಿತಿಯನ್ನು ಪಡೆಯುವ ಹಾಗಿಲ್ಲ.
ಈ ಮಧ್ಯೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ IBM ಸಾಫ್ಟ್ ವೇರ್ ಇಂಜಿನಿಯರ್ ಚಂದ್ರಬಾಲಾ ಅವರು ಹೈದರಾಬಾದಿನ ನಾಚ್ ರಾಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್ ಹಾಗೂ ಜಗನ್ ಮಾಲೀಕತ್ವದ ಸಾಕ್ಷಿ ದಿನಪತ್ರಿಕೆಯ ವರದಿಗಾರನ ವಿರುದ್ಧ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.