ತಿಹಾರ್ ಜೈಲಿನಲ್ಲಿ ಸಹ ಖೈದಿಗಳಿಂದ ಬಲಾತ್ಕಾರ
ಆದರೆ, ಖೈದಿಯ ಮಾತನ್ನು ಅಲ್ಲಗೆಳೆದಿರುವ ಪೊಲೀಸರು, ತನಿಖೆ ಸರಿಯಾದ ಮಾರ್ಗದಲ್ಲೇ ಸಾಗಿದೆ ಎಂದಿದ್ದಾರೆ.
32 ವರ್ಷದ ಖೈದಿ ತಿಹಾರ್ ಜೈಲಿನಲ್ಲಿ 5ನೇ ಸಂಖ್ಯೆ ಕೊಠಡಿಯಲ್ಲಿ ಇರಿಸಲಾಗಿತ್ತು. ಕಳೆದ ಎರಡು ತಿಂಗಳಲ್ಲಿ ಜೈಲು ಅಧಿಕಾರಿಗಳ ಜೊತೆ ಕಿತ್ತಾಟ ಮಾಡಿಕೊಂಡಿದ್ದ ಎನ್ನಲಾಗಿದೆ.
ಜೈಲು ಅಧಿಕಾರಿಗಳು ಹಾಗೂ ಕೆಲ ಸಹ ಖೈದಿಗಳು ನನ್ನಿಂದ ಹಣ ಕೀಳು ಯತ್ನಿಸಿದರು. ಅವರು ಪದೇ ಪದೇ ಹಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದರು. ಬರಾಕ್ ಗೆ ಎಳೆದೊಯ್ದು ನಗ್ನಗೊಳಿಸಿ ಸಿಕ್ಕಾಪಟ್ಟೆ ಹೊಡೆದರು. ಲೈಂಗಿಕವಾಗಿ ಬಳಸಿಕೊಂಡರು.
ನನಗೆ ಯಾರ ಸಹಾಯವೂ ಸಿಗಲಿಲ್ಲ. ಕೇವಲ ಹಣದಾಸೆಗೆ ಈ ರೀತಿ ಮಾಡಿದರು ಎನ್ನಲು ಬರುವುದಿಲ್ಲ. ಲೈಂಗಿಕ ಕಾಮನೆ ತೀರಿಸಿಕೊಳ್ಳಲು ಅಮಾಯಕ ಖೈದಿಗಳನ್ನು ಬಳಸಿಕೊಳ್ಳುವುದು ಮಾಮೂಲಿ ಎಂಬುದು ತಿಳಿದು ಬಂದಿದೆ ಎಂದು ನೊಂದ ಖೈದಿ ಹೇಳಿದ್ದಾನೆ.
32 ವರ್ಷದ ಖೈದಿ ತನಗೆ ಉಂಟಾದ ನೋವು, ಹಿಂಸೆಯನ್ನು ಕೋರ್ಟ್ ನಲ್ಲಿ ಬಾಯ್ಬಿಟ್ಟಿದ್ದಾನೆ. ಕೋರ್ಟ್ ಆದೇಶದಂತೆ ಖೈದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಖೈದಿಯ ಮೇಲೆ ಲೈಂಗಿಕ ಹಲ್ಲೆ ನಡೆದಿದ್ದು ಸಾಬೀತಾಗಿದೆ.
ನಂತರ ಖೈದಿಗೆ ಸೂಕ್ತ ರಕ್ಷಣೆ ನೀಡಬೇಕು. ಲೈಂಗಿಕ ಹಲ್ಲೆ ನಡೆಸಿದವರ ವಿವರಗಳನ್ನು ಒಪ್ಪಿಸಬೇಕು ಎಂದು ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಜೈಲು ಅಧಿಕಾರಿಗಳ ವಿಚಾರಣೆ ನಡೆಸಿದ ಪೊಲೀಸರು ಪ್ರಕರಣದ ತನಿಖೆಯನ್ನು ನಿಧಾನಗತಿಯಲ್ಲಿ ಮುಂದುವರೆಸಿದ್ದಾರೆ. ಆದರೆ, ತಿಹಾರ್ ಜೈಲಿನ ಸುರಕ್ಷತೆ ಪ್ರಶ್ನೆಯಾಗಿ ಉಳಿದಿದೆ.
ಎಂಥಾ ಜೈಲಿಗೆ ಎಂಥಾ ಸ್ಥಿತಿ: ಭಾರತದ ಪ್ರಮುಖ ಜೈಲುಗಳಲ್ಲಿ ಒಂದಾದ ತಿಹಾರ್ ಜೈಲಿನ ಸುಧಾರಣೆ ಕೈಗೊಂಡವರಲ್ಲಿ ಹಾಲಿ ಟೀಂ ಅಣ್ಣಾ ಸದಸ್ಯೆ ಕಿರಣ್ ಬೇಡಿ ಪ್ರಮುಖರು. ಭಾರತದ ಬಂದೀಖಾನೆ ಕಾನೂನನ್ನು ಸುಧಾರಣೆಗೊಳಿಸಿ ಖೈದಿಗಳನ್ನು ಪರಿವರ್ತನೆಗೊಳಿಸಿದ ಬೇಡಿ ಅವರು ತಿಹಾರ್ ಜೈಲಿಗೆ ಒಂದು ಹಿರಿಮೆ ತಂದುಕೊಟ್ಟಿದ್ದರು.
ವಿಪಾಸನ ಧ್ಯಾನ ಶಿಬಿರಗಳ ಮೂಲಕ, ಜೈಲಿನಲ್ಲಿ ಶಾಂತಿ, ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಿದ್ದರು. ಖೈದಿಗಳ ಮನಪರಿವರ್ತನೆ, ಅಧಿಕಾರಿಗಳ ದಬ್ಬಾಳಿಕೆಗೆ ಕಡಿವಾಣ ಹಾಕಲಾಗಿತ್ತು.
ಆದರೆ, ಈಗ ತಿಹಾರ್ ಜೈಲಿನಲ್ಲಿ ನಡೆದ ಈ ಕೃತ್ಯದಿಂದ ದೆಹಲಿಯ ಕ್ರೈಂ ಪಟ್ಟಿಗೆ ಮತ್ತೊಂದು ಪ್ರಕರಣ ದಾಖಲಾಗಿದೆ. ದೆಹಲಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎಂಬುದು ಈಗಾಗಲೆ ಸಾಬೀತಾಗಿತ್ತು, ಈಗ ಪುರುಷ ಖೈದಿಗಳಿಗೆ ತಿಹಾರ್ ಜೈಲು ಸುರಕ್ಷಿತವಲ್ಲ ಎಂಬು ಅಂಶ ಸೇರ್ಪಡೆಯಾಗಿದೆ.