ಆಂಧ್ರದಲ್ಲಿ ಬದಲಾಣೆ ಪರ್ವ: ಚುನಾವಣೆ ಫಲಿತಾಂಶ

ಇಂದಿನ ಚುನಾವಣೆ ಫಲಿತಾಂಶಕ್ಕೆ ಎಲ್ಲಿಲ್ಲದ ಮಹತ್ವ ಬಂದಿರುವುದೇ ಈ ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್ ಮೋಹನ್ ರೆಡ್ಡಿ ಅವರ YSR Congress ಪಕ್ಷದ ಜಿದ್ದಾಜಿದ್ದಿಯಿಂದಾಗಿ ಎಂದು ಹೇಳಬಹುದು. ಇಲ್ಲವಾದಲ್ಲಿ ಇರುವ ಮೂರ್ನಾಲ್ಕು ಪಾರ್ಟಿಗಳಲ್ಲೇ ಹೊಂದಾಣಿಕೆ ರಾಜಕೀಯ ನಡೆದು ಇದು 'ಮತ್ತೊಂದು ಚುನಾವಣೆ ಅಷ್ಟೇ' ಎನಿಸಿಕೊಳ್ಳುತ್ತಿತ್ತು.
ಆದರೆ ಜಗನ್ ಮೋಹನ್ ರೆಡ್ಡಿಯನ್ನು ಜೈಲಿಗಟ್ಟಿ ಚುನಾವಣೆ ಎದುರಿಸಿರುವ ಆಡಳಿತಾರೂಢ ಕಾಂಗ್ರೆಸ್ (ಪ್ಲಸ್ ಚಿರುವಿನ ಪ್ರಜಾರಾಜ್ಯಂ) ಹಾಗೂ ಟಿಡಿಪಿಗೆ ಜಗನ್ ಜೈಲು ಸೇರಿಕೊಂಡಿದ್ದೇ ಮುಳುವಾಗಲಿದೆಯಾ? ಜಗನ್ ತಾಯಿ ವಿಜಯಮ್ಮ ಸಾರಥ್ಯದಲ್ಲಿ ಮುನ್ನಡೆದ YSR Congress ಪಕ್ಷದ ಸತ್ವ ಏನು ಎಂಬುದು ಇಡೀ ಜಗತ್ತಿಗೆ ಇಂದು ಗೊತ್ತಾಗಲಿದೆ. ಯಾರಿಗೆ ಶುಭ ಶುಕ್ರವಾರವಾಗಲಿದೆ? ಎಂದಿನಂತೆ ತಾಜಾ ಫಲಿತಾಂಶ ಕೆಲವೇ ಕ್ಷಣಗಳಲ್ಲಿ 'ದಟ್ಸ್ ಕನ್ನಡ' ದಿಂದ.
ಮತ ಎಣಿಕೆ ಕಾರ್ಯ 8 ಗಂಟೆಗೆ ಆರಂಭವಾಗಲಿದ್ದು, 9.30ರ ವೇಳೆಗೆ ಮೊದಲ ನಾಡಿಮಿಡಿತ ತಿಳಿಯಲಿದೆ. 11 ಗಂಟೆಯ ವೇಳೆಗೆ ಮೊದಲ ಫಲಿತಾಂಶ ( ಮತದಾರರು ಕಡಿಮೆಯಿರುವ ನರಸಾಪುರ ಕ್ಷೇತ್ರದ್ದು) ಹೊರಬೀಳುವ ಅಂದಾಜಿದೆ. ಒಟ್ಟಾರೆ ಫಲಿತಾಂಶ ಮಧ್ಯಾಹ್ನ 3 ಗಂಟೆಗೆ ಹೊರಬೀಳಲಿದೆ. ನೆಲ್ಲೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸ್ವಲ್ಪ ಹೆಚ್ಚು ಸಮಯ ಹಿಡಿಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಆಡಳಿತದ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಬೀಳುವುದಿಲ್ಲ ಎಂದು ಭಾವಿಸಬಹುದಾದರೂ ಜಗನ್ ಸಂಪೂರ್ಣ ವಿಜಯಯೀಭವ ಆಗಿಬಿಟ್ಟರೆ ಯಾವುದೇ ಕ್ಷಣದಲ್ಲಿ ಕಿರಣ್ ಕುಮಾರ್ ರೆಡ್ಡಿಯ ಮುಖ್ಯಮಂತ್ರಿ ಖುರ್ಚಿ ಅಲುಗಾಡಬಹುದು. ಅತ್ತ 2004ರಿಂದ ಒಂದೇ ಸಮನೆ ಚುನಾವಣೆಗಳಲ್ಲಿ ಮಣ್ಣು ಮುಕ್ಕುತ್ತಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪರಿಸ್ಥಿತಿಯೂ ಗಂಭೀರವಾಗಲಿದೆ.












Click it and Unblock the Notifications