ರಾಜ್ಯದ ಹಿತ ಮುಖ್ಯ; ಜೈಲಿಗೂ ಸಿದ್ಧ- ಸಿಎಂ ಸದಾನಂದ
ತಮ್ಮ ವಿರುದ್ಧವೇ ಕೇಸ್ ಹಾಕಿ ಕಾನೂನು ಪ್ರಕ್ರಿಯೆಯ ದಿಕ್ಕುತಪ್ಪಿಸುವ ದುಸ್ಸಾಹಸಕ್ಕೆ ಮುಂದಾಗಿರುವ ನಿತ್ಯಾನಂದನಂತಹವರ ಬಗ್ಗೆ ತಲೆಕೆಡಿಸಿಕೊಳ್ಳದ ಡಿವಿ ಸದಾನಂದ ಗೌಡರು ರಾಜ್ಯದ ಹಿತಕ್ಕಾಗಿ ತಾನು ಜೈಲಿಗೆ ಹೋಗಲೂ ಸಿದ್ಧನಿದ್ದೇನೆ. ನಿತ್ಯಾನಂದ ತನ್ನ ಮೇಲೆ 10 ಕೇಸ್ ಹಾಕಿದ್ರೂ ಪರವಾಗಿಲ್ಲ ಎಂದು ಗುಡುಗಿದ್ದಾರೆ.
ನಿತ್ಯಾನಂದ ಕಡೆಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ: ಈ ಮಧ್ಯೆ, ಕುತೂಹಲಕರ ಬೆಳವಣಿಗೆಯೊಂದರಲ್ಲಿ - ಕರ್ನಾಟಕ ಪೊಲೀಸರು ಸ್ವಾಮಿ ನಿತ್ಯಾನಂದರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ನಿತ್ಯಾನಂದರ ತಜೋವಧೆ ನಡೆಯುತ್ತಿದೆ. ಆದ್ದರಿಂದ ತಕ್ಷಣ ಅವರನ್ನು ಕೋರ್ಟಿನಲ್ಲಿ ಹಾಜರುಪಡಿಸುವಂತೆ ಕೋರಿ - ನಿತ್ಯಾನಂದ ಪರ ವಕೀಲರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ನಿತ್ಯಾನಂದ ಸ್ವಾಮಿ ಮುಖ್ಯಮಂತ್ರಿಯ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಸಮರಕ್ಕೆ ಮುಂದಾಗಿರುವ ವಿಷಯದ ಬಗ್ಗೆ ರಾಜಧಾನಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತ ಕಾಪಾಡುವುದು ತನ್ನ ಜವಾಬ್ದಾರಿ. ಆದ್ದರಿಂದ ತಾನು ಈ ನಿಟ್ಟಿನಲ್ಲಿ ಜೈಲಿಗೆ ಹೋಗಲೂ ಹೆದರುವುದಿಲ್ಲ ಎಂದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆಗೆ ದಿಟ್ಟ ಕ್ರಮ ತೆಗೆದುಕೊಳ್ಳುತ್ತೇವೆ. ಅದು ನನ್ನ ಜವಾಬ್ದಾರಿ. ಸಮಾಜ ಮತ್ತು ಜನರ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಸ್ಥಿತಪ್ರಜ್ಞನಂತೆ ಕ್ರಮಕೈಗೊಳ್ಳುವೆ. ಇದರಿಂದಾಗಿ ಯಾವುದೇ ತೊಂದರೆ ಬಂದರೂ ಎದುರಿಸಲು ನಾನು ಸಿದ್ಧವಾಗಿದ್ದೇನೆ ಎಂದು ಡಿವಿ ಸದಾನಂದ ಗೌಡರು ಪ್ರತಿಕ್ರಿಯಿಸಿದರು.
ನಿತ್ಯಾನಂದ ಸ್ವಾಮಿಯ ಮೇಲೆ ತನಗೇನೂ ವೈಯಕ್ತಿಕವಾದ ದ್ವೇಷವಿಲ್ಲ. ಕಾನೂನು- ಸುವ್ಯವಸ್ಥೆ ಪಾಲಿಸುವುದಕ್ಕಾಗಿ ಆಶ್ರಮಕ್ಕೆ ಬೀಗ ಜಡಿಯುವ ಆದೇಶ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.