ನಾಯ್ಡು ಸ್ವಿಸ್ ಕತೆ ಹೇಳಿದ ಕೃಷ್ಣನ ಲಾಟರಿ ಕತೆ

ಚಂದ್ರಬಾಬು ನಾಯ್ಡು ಆಸ್ತಿ ವಿವರ ಯಾವಾಗಲೂ ಗುಪ್ತವಾಗೇ ಉಳಿದಿದೆ. ಚುನಾವಣೆ ಸಂದರ್ಭದಲ್ಲಿ ಆಯೋಗಕ್ಕೆ ತಪ್ಪು ಮಾಹಿತಿ ನೀಡುತ್ತಾ ಬಂದಿದ್ದಾರೆ. ಆದರೆ, ಚಂದ್ರಬಾಬು ನಾಯ್ಡುಗೆ ವಿದೇಶಗಳಲ್ಲಿನ ಅನೇಕ ಬ್ಯಾಂಕ್ ಗಳಲ್ಲಿ ಅಧಿಕೃತ ಖಾತೆಗಳಿದೆ. ಬ್ಯಾಂಕ್ ಗಲ್ಲಿನ ಅವರ ಒಟ್ಟು ಮೊತ್ತವೇ 15,000 ಕೋಟಿ ರು ದಾಟುತ್ತದೆ' ಎಂದು ಕೃಷ್ಣ ಮೋಹನ್ ಆರೋಪಿಸಿದ್ದಾರೆ. ಬಹುಮಾನ ಗೆದ್ದ ಕೃಷ್ಣ ಕತೆ ಇಲ್ಲಿದೆ...
ಆಗ ಆಂಧ್ರದಲ್ಲಿ ತೆಲುಗುದೇಶಂ ಪಾರ್ಟಿ ಅಧಿಕಾರದಲ್ಲಿದ್ದ ಕಾಲ, ವಿಜಯವಾಡ ಮೂಲದ ಕೊಲ್ಲಾ ವೆಂಕಟ ಕೃಷ್ಣ ಮೋಹನ್ ಅವರಿಗೆ 19.8 ಮಿಲಿಯನ್ ಡಾಲರ್ ಮೊತ್ತದ ಯುರೋ ಲಾಟರಿ ಹೊಡೆದ ಸುದ್ದಿ ಹಬ್ಬಿತ್ತು.
ಚಂದ್ರಬಾಬು ನಾಯ್ಡು ತಡವಾಡದೆ ಕೃಷ್ಣಮೋಹನ್ ಜೊತೆ ಒಂದು ಚಹಾಕೂಟ ಏರ್ಪಾಟು ಮಾಡಿ, ಬ್ರದರ್ ನಮ್ಮ ಪಕ್ಷಕ್ಕೆ ಸೇರಿಬಿಡಿ ಎಂದುಬಿಟ್ಟರು. ಈ ರೀತಿ ಪ್ರಭಾವಿ ವ್ಯಕ್ತಿಗಳು, ಹಣವಂತರನ್ನು ಸೆಳೆಯುವುದನ್ನು ಎನ್ ಟಿಆರ್ ಅವರಿಂದ ನಾಯ್ಡುಗಾರು ಚೆನ್ನಾಗಿ ಕಲಿತಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ, ತೆಲುಗುದೇಶಂ ಪಾರ್ಟಿ ಅಧ್ಯಕ್ಷ ನರಾ ಚಂದ್ರಬಾಬು ನಾಯ್ಡು ಅವರು ಸುಮಾರು 300 ಜನ ಬೆಂಬಲಿಗರೊಂದಿಗೆ ಟಿಡಿಪಿ ಸದಸ್ಯತ್ವ ಅಭಿಯಾನದ ಹೆಸರಿನಲ್ಲಿ ಕೃಷ್ಣಮೋಹನ್ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಂಡರು.
ಪಕ್ಷದ ಸೇರಿದ ತಕ್ಷಣ ಎಲ್ಲರೂ ನೀಡುವ ಕಾಮನ್ ಹೇಳಿಕೆಗಳನ್ನು ಕೃಷ್ಣಮೋಹನ್ ಕೂಡಾ ನೀಡಿದ್ದರು. ಟಿಡಿಪಿ ಅಭಿವೃದ್ಧಿ ಕಾರ್ಯ ಮೆಚ್ಚುಗೆಯಾಯ್ತು. ನನ್ನ ಬಳಿ ಇರುವ ಹಣದಿಂದ ಸಾರ್ವಜನಿಕರು ಖುಷಿಪಡಲಿ. ಇದಕ್ಕೆ ನನಗೆ ಚಂದ್ರಬಾಬು ನಾಯ್ಡು ಅವರು ಸೂಕ್ತ ವೇದಿಕೆ ಒದಗಿಸುತ್ತಾರೆ ಎಂಬ ಭರವಸೆ ಇದೆ ಎಂದು ಕೃಷ್ಣ ಹೇಳಿದ್ದರು.
ಅನೇಕ ರಾಜಕೀಯ ಪಕ್ಷಗಳು ನನ್ನ ಹಿಂದೆ ಬಿದ್ದಿದ್ದವು, ಆದರೆ, ನಾನು ಟಿಡಿಪಿಯನ್ನು ಆಯ್ಕೆ ಮಾಡಲು ಚಂದ್ರಬಾಬು ನಾಯ್ಡು ಅವರ ನಾಯಕತ್ವವೇ ಕಾರಣ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ಹೊರಲು ಸಿದ್ದ ಎಂದಿದ್ದರು.
ವಿಜಯವಾಡದಲ್ಲಿ ಹೆಸರಾಂತ ಗುತ್ತಿಗೆದಾರ ಕುಟುಂಬಕ್ಕೆ ಸೇರಿದ ಕೃಷ್ಣಮೋಹನ್ ಅವರು ಯುರೋ ಟಿಕೆಟ್ ಗೆದ್ದಾಗ ಇನ್ನೂ 43 ವರ್ಷ ವಯಸ್ಸು. ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕನೆಕ್ಷನ್ ವಿಮಾನಕ್ಕಾಗಿ ಕಾದಿದ್ದಾಗ ಯುರೋ ಲಾಟರಿ ಟಿಕೆಟ್ ಕಣ್ಣಿಗೆ ಬಿದ್ದಿದೆ.
ಲಾಟರಿ ಗೆಲ್ಲುವ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದಿದ್ದ ಕೃಷ್ಣಗೆ ಸುಮಾರು 20 ಮಿಲಿಯನ್ ಡಾಲರ್ ಕೈ ಸೇರಿದ ಮೇಲೆ ರಾಜಕೀಯ ಪಕ್ಷಗಳು ಬೆಲ್ಲಕ್ಕೆ ಇರುವೆ ಮುತ್ತುವಂತೆ ಬೆನ್ನು ಬಿದ್ದಿದ್ದವು.
ನೆದರ್ಲೆಂಡ್, ಜರ್ಮನ್ ಹಾಗೂ ಬ್ರಿಟಿಷ್ ಸರ್ಕಾರದ ಪ್ರಾಯೋಜಕತ್ವದಲಿ ನಡೆಯುವ ಯುರೋ ಲಾಟರಿ, ಪ್ರತಿಷ್ಠಿತ ಲಾಟರಿಯಾಗಿ ಜನಪ್ರಿಯತೆ ಗಳಿಸಿದೆ.
ಇದಲ್ಲದೆ ಲಾಟರಿ ಗೆದ್ದ ವೀರ ಕೃಷ್ಣಗೆ ಬ್ರಿಟನ್, ಮಾರಿಷಸ್ ಹಾಗು ಮಾಟೆನೆಗ್ರೋ ದೇಶಗಳಲ್ಲಿ ನೆಲೆಸಿ ಪೌರತ್ವ ಪಡೆಯುವಂತೆ ಆಫರ್ ನೀಡಲಾಗಿತ್ತು. ಬಂಡವಾಳ ಹೂಡಿಕೆ ಆಕರ್ಷಣೆ ಇದರ ಉದ್ದೇಶವಾಗಿತ್ತು.
ಆದರೆ,ನನಗೆ ನನ್ನ ಮೂಲ ಊರನ್ನು ಬಿಟ್ಟೂ ಬೇರೆ ಕಡೆ ಉಳಿಯುವ ಮನಸ್ಸಾಗಲಿಲ್ಲ. ಹಾಗಾಗಿ ವಿಜಯವಾಡಕ್ಕೆ ಮರಳಿ ಬಂದೆ ಎಂದು ಕೃಷ್ಣ ಹೇಳಿದ್ದಾರೆ.
ಇದಲ್ಲದೆ, ಕೃಷ್ಣ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿತ್ತು. ಪೊಲೀಸ್ ರಕ್ಷಣೆ ಪಡೆದು ಎಲ್ಲೆಡೆ ಓಡಾಡುವಂತಾಯಿತು.
ದುಡ್ಡು ಇದ್ದರೆ ನೆಮ್ಮದಿ ಇರೋಲ್ಲ: ಸುಮಾದು ದಿನಗಳ ಕಾಲ ಮಾನಸಿಕ ಹಿಂಸೆ ಅನುಭವಿಸಿದೆ. ಲಾಟರಿ ಮೊತ್ತ ಗೆದ್ದ ಖುಷಿಯನ್ನು ಅನುಭವಿಸುವ ಮೊದಲೇ ಭಯ, ಹೆದರಿಕೆ, ಜನರ ವಿಚಿತ್ರ ವರ್ತನೆಗಳು ಬೇಸರ ತರಿಸಿತು. ಖಾಸಗಿ ಬದುಕು ಎಂಬುದೇ ಇಲ್ಲದ್ದಂತಾಯಿತು. ಎನ್ ಜಿಒ ಗಳಿಗೆ, ಸರ್ಕಾರಿ ಯೋಜನೆಗಳಿಗೆ ಹಣ ತೊಡಗಿಸುವ ಆಫರ್ ಗಳು ಪ್ರತಿದಿನ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತಿತ್ತು.
ಬಹುಮಾನದ ಮೊತ್ತದಲ್ಲಿ 1 ಮಿಲಿಯನ್ ಹಣವನ್ನು ವಿಜಯವಾಡದ ಅನಾಥಾಲಯಕ್ಕೆ ದಾನ ಮಾಡಿದೆ. 150,000 ರು ಪೊಲೀಸ್ ಕಲ್ಯಾಣ ನಿಧಿಗೆ ನೀಡಿದೆ. ಪೊಲೀಸರು ನನಗೆ ನೀಡಿದ ರಕ್ಷಣೆಯ ಋಣ ನನ್ನ ಮೇಲಿತ್ತು.
ಬಹುಮಾನಗಳ ಮೇಲೆ ಸರ್ಕಾರ ವಿಧಿಸುವ ಭಾರಿ ತೆರಿಗೆಯನ್ನು ಕಡಿತಗೊಳಿಸಿದರೆ, ದಾನ ಧರ್ಮ ಮಾಡಲು ಸಹಕಾರಿಯಾಗುತ್ತದೆ ಎಂದು ಕೃಷ್ಣ ಅವರು ತಮ್ಮ ಲಾಟರಿ ಕತೆ ಮುಗಿಸಿದರು.
ಈಗ ತೆಲುಗುದೇಶಂ ಪಾರ್ಟಿಯಿಂದ ಹೊರಬಂದಿದ್ದು, ಚಂದ್ರಬಾಬು ನಾಯ್ಡು ಅವರ ಆಸ್ತಿ ಮೊತ್ತ 15,000 ಕೋಟಿ ದಾಟುತ್ತದೆ ಎಂದು ಜಗನ್ ಮೋಹನ್ ರೆಡ್ಡಿ ಒಡೆತನದ ಮಾಧ್ಯಮಗಳಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿ ಸಂಚಲನ ಸೃಷ್ಟಿಸಿದ್ದಾರೆ.












Click it and Unblock the Notifications