ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ಲಂಚ: ಮಧ್ಯವರ್ತಿಯನ್ನೇ ಯಾಮಾರಿಸಿದ ರೆಡ್ಡಿ

By Srinath
|
Google Oneindia Kannada News

bailgate-kmf-reddy-betrayed-middleman-acb-fir
ಹೈದರಾಬಾದ್, ಜೂನ್ 13: ಲಂಚ ತಿನ್ನಿಸಿ ಜಾಮೀನು ದಕ್ಕಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದ ಜನಾರ್ದನ ರೆಡ್ಡಿಗಾರು ಕಡೆಯವರು ಜಾಮೀನು ವ್ಯವಹಾರದಲ್ಲಿ ಮಧ್ಯವರ್ತಿ ರೌಡಿ ಶೀಟರ್ ಯಾದಗಿರಿಗೆ 'ಸುಪಾರಿ ದುಡ್ಡು' ಕೊಡದೆ ಯಾಮಾರಿಸಿರುವ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ.

ತೆಲುಗು ಸಿನಿಮಾಗೆ ಹೇಳಿ ಮಾಡಿಸಿದಂತಿರುವ ಲಂಚ ತಿನ್ನಿಸಿ ಜಾಮೀನು ದಕ್ಕಿಸಿಕೊಳ್ಳುವ ದುಸ್ಸಾಹಸದ ಕಥೆ ಕುತೂಹಲಕಾರಿಯಾಗಿದೆ. ಮೋಸ, ಕೃತ್ರಿಮ, ದಗಾ ವಂಚನೆ, ಕುತೂಹಲಕಾರಿ ತಿರುವುಗಳು, ಕಥಾ(ಖಳ)ನಾಯಕನದೇ ರೋಚಕ ಪಾತ್ರ ಈ ಕಥೆಯಲ್ಲಿದೆ. ಯಾವುದಾದರೂ ನಿರ್ಮಾಪಕ/ನಿರ್ದೇಶಕ ಈ ಕಥೆಯನ್ನು ಆಧಾರವಾಗಿಟ್ಟುಕೊಂಡು ಪಕ್ಕಾ commercial ಸಿನಿಮಾ ಮಾಡಿದರೆ ಅದು ಸೂಪರ್ ಡೂಪರ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಕರಣದ ಸಂಬಂಧ ಆಂಧ್ರ ಹೈಕೋರ್ಟ್ ಜಡ್ಜ್ ಪಟ್ಟಾಭಿ ರಾಮರಾವ್ ವಿರುದ್ಧ ರಾಜ್ಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಈಗಾಗಲೇ ತನಿಖೆ ನಡೆಸುತ್ತಿದೆ. ಈ ಮಧ್ಯೆ, ಸಿಬಿಐ ಲಕ್ಷಿನಾರಾಯಣ ಕಡೆಯಿಂದ ಒಂದಷ್ಟು ಮಹತ್ವದ ಸಂಗತಿಗಳು ಹೊರಬಿದ್ದಿವೆ.

ತಮ್ಮುಡು ಜನಾರ್ದನ ರೆಡ್ಡಿಗಾರಿಯನ್ನು ಹೇಗಾದರೂ ಮಾಡಿ ಜೈಲಿನಿಂದ ಹೊರತರಬೇಕು ಎಂದು ಒದ್ದಾಡುತ್ತಿದ್ದ ಶಾಸಕ ಗಾಲಿ ಸೋಮಶೇಖರ ರೆಡ್ಡಿ ರೌಡಿ ಶೀಟರ್/ರಿಯಲ್ ಎಸ್ಟೇಟ್ ಏಜೆಂಟ್ ಪಿ. ಯಾದಗಿರಿಯನ್ನು ಮಧ್ಯವರ್ತಿಯನ್ನಾಗಿ ಗುರುತಿಸಿ, ಮಹತ್ತರವಾದ ಕೆಲಸವನ್ನು ಮಾಡಿಕೊಟ್ಟರೆ ಆತನಿಗೆ ಇಂತಿಷ್ಟು ಹಣ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಆ ಮೊತ್ತ ಅವರ ಕೈಸೇರಲಿಲ್ಲ.

ಸಿಬಿಐ ಲಕ್ಷಿನಾರಾಯಣ ಹೆಗಲಿಗೆ ಹೆಗಲು ಕೊಡುವ ಮತ್ತೊಬ್ಬ ಖಡಕ್ ಆಫೀಸರ್ ಕೆಎಂ ಖಾನ್ ಅವರ ದೂರಿನನ್ವಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ದಾಖಲಿಸಿಕೊಂಡಿರುವ FIRನಲ್ಲಿ ಇನ್ನೂ ಸಾಕಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಜಡ್ಜ್ ಪಟ್ಟಾಭಿ ಅವರ ಪುತ್ರ ಟಿ. ರವಿ 'ಅಪ್ಪ ಜಾಮೀನು ಕರುಣಿಸುವ ಪ್ರಕರಣದ ಸಂಬಂಧ' ಹಣ ಎಣಿಸಿಕೊಳ್ಳಲು ಬ್ಯಾಂಕಿಗೆ ಹೋದಾಗ ಅಲ್ಲಿನ ಲಾಕರುಗಳಲ್ಲಿ ಹಣವೇ ಇರಲಿಲ್ಲ. ತಕ್ಷಣ ಅಪ್ಪನಿಗೆ ಫೋನ್ ಮಾಡಿದ ಸುಪತ್ರ 'ತಂದೇ, ನಾವು ಮೋಸ ಹೋದೆವು. ನಮ್ಮ ಖಾತೆಗಳಲ್ಲಿ/ ಲಾಕರುಗಳಲ್ಲಿ ಹಣವನ್ನೇ ಹಾಕಿಲ್ಲ' ಎಂದೂ ಬೊಂಬಡಾ ಹೊಡೆದಿದ್ದಾನೆ. ಆ ಲಾಕರುಗಳ ಕೀಲಿಯನ್ನು ನಿವೃತ್ತ ಜಡ್ಜ್ ಚಲಪತಿಯು ಪಟ್ಟಾಭಿ ಪುತ್ರ ರವಿಗೆ ಕೈಬದಲಾಯಿಸಿದ್ದರು.

ಆ ವೇಳೆಗಾಗಲೇ ಲಾಕರುಗಳಲ್ಲಿ ನಗದನ್ನು ಸಿಬಿಐ ವಶಕ್ಕೆ ತೆಗೆದುಕೊಂಡಾಗಿತ್ತು. FIR ಪ್ರಕಾರ ಕೆಎಂಎಫ್ ಸೋಮಶೇಖರ ರೆಡ್ಡಿ arranage ಮಾಡಿದ್ದ ಹಣವನ್ನು ರೌಡಿ ಶೀಟರ್ ಯಾದಗಿರಿ ಸಾಗಣೆ ಮಾಡಿದ್ದ. ಮೇ 27ರಂದು ಸಿಬಿಐ ಕಚೇರಿಯಲ್ಲಿ ವಿಚಾರಣೆಯ ವೇಳೆ ಜನಾರ್ದನ ರೆಡ್ಡಿ ಪರ ವಕೀಲರ ಕಚೇರಿಯಲ್ಲಿ ಕೆಎಂಎಫ್ ಸೋಮಶೇಖರ ರೆಡ್ಡಿಯನ್ನು ಸಂಧಿಸಿದ್ದಾಗಿ ಖುದ್ದು ಯಾದಗಿರಿ ಬಾಯ್ಬಿಟ್ಟಿದ್ದಾನೆ.

ಕೆಎಂಎಫ್ ಸೋಮಶೇಖರ ರೆಡ್ಡಿ ಮತ್ತು ಅದಾಗತಾನೇ ನಿವೃತ್ತರಾಗಿದ್ದ ಹೈಕೋರ್ಟ್ ಜಡ್ಜ್ ಚಲಪತಿಗೆ ಮೇ 11 ರಂದು ಕೆಎಂಎಫ್ ಸೋಮಶೇಖರ ರೆಡ್ಡಿ ದೊಡ್ಡ ಮೊತ್ತದ ಹಣವನ್ನು ಪಾವತಿಸಿದ್ದರು. ಗಮನಿಸಿ, ಜಡ್ಜ್ ಪಟ್ಟಾಭಿಯು ರೆಡ್ಡಿಗೆ ಜಾಮೀನು ಕರುಣಿಸಿದ ದಿನದಂದು (ಮೇ 11) ಹೋಟೆಲ್ ದಾಸಪಲ್ಲಾದಲ್ಲಿ ಐದಾರು ಬ್ಯಾಗುಗಳಲ್ಲಿ ಈ ಹಣ ನೀಡಲಾಗಿದೆ. ನಿವೃತ್ತ ಜಡ್ಜ್ ಚಲಪತಿಯು ಯಾದಗಿರಿಗೆ ತಕ್ಷಣವೇ 9.5 ಲಕ್ಷ ರುಪಾಯಿ ಪಾವತಿಸಿದ್ದಾರೆ.

ಉಳಿದಿದ್ದೆಲ್ಲಿ ಅಂತ ಯಾದಗಿರಿಯು ನಿವೃತ್ತ ಜಡ್ಜ್ ಚಲಪತಿಯನ್ನು ಕೇಳಿದರೆ 'ಇಲ್ಲಾ! ಕೆಎಂಎಫ್ ಸೋಮಶೇಖರ ರೆಡ್ಡಿ ಹೇಳಿದಷ್ಟು ಹಣ ಪಾವತಿಸಿಲ್ಲ' ಎಂದು ಜಾರಿಕೊಂಡಿದ್ದಾರೆ. ಬೇಕಾದರೆ ನೇರವಾಗಿ ಕೆಎಂಎಫ್ ಸೋಮಶೇಖರ ರೆಡ್ಡಿಯನ್ನು ಕೇಳು ಎಂದೂ ಸಲಹೆ ನೀಡಿದ್ದಾರೆ. ಅದರಂತೆ ಯಾದಗಿರಿ, ಕೆಎಂಎಫ್ ಸೋಮಶೇಖರ ರೆಡ್ಡಿಯನ್ನು ಭೇಟಿ ಮಾಡಿ ಎಲ್ಲಿ ಉಳಿದ ದುಡ್ಡು ಅಂತ ದಬಾಯಿಸಿ ಕೇಳಿದಾಗ ತಡಬಡಾಯಿಸಿದ ಕೆಎಂಎಫ್ ಸೋಮಶೇಖರ ರೆಡ್ಡಿಗಾರು 'ಕೆಲ್ಸ ಪೂರ್ತಿಯಾಗಲಿ. ಜಾಮೀನು ಸಿಗುತ್ತಿದ್ದಂತೆ ಬಾಕಿ ಚುಕ್ತಾ ಮಾಡ್ತೀನಿ' ಎಂದಿದ್ದಾರೆ.

ಈ ಮಧ್ಯೆ, ಮತ್ತೊಬ್ಬ ಜಡ್ಜ್ ಶರ್ಮಾ ಅವರ ಮೇಲೂ ಪ್ರಭಾವ ಬೀರಲು ಕೆಎಂಎಫ್ ಸೋಮಶೇಖರ ರೆಡ್ಡಿ ಮತ್ತೊಂದಿಷ್ಟು ಹಣ ಖರ್ಚು ಮಾಡಿರಬಹುದು' ಎಂದು ನಿವೃತ್ತ ಜಡ್ಜ್ ಚಲಪತಿಯು ತನಗೆ ಮಾಹಿತಿ ನೀಡಿದರು ಎಂದು ಯಾದಗಿರಿ ಸಿಬಿಐ ಮುಂದೆ ಹೇಳಿದ್ದಾನೆ.

ಸನ್ಮಾನ್ಯ ಗೋ ಸಂರಕ್ಷಕ, ಕೆಎಂಎಫ್ ಯಜಮಾನ ಸೋಮಶೇಖರ ರೆಡ್ಡಿಗಾರು ಜಾಮೀನು ಪಡೆಯಲು ಜಡ್ಜಿಗೇ ದುಡ್ ಕೊಡುವ ಬಗ್ಗೆ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳುವುದಾದರೆ ... 'ಜಡ್ಜಿಗೇ ಲಂಚವಾ? ನೋ ಛಾನ್ಸ್: 'ಯಾರ್ರೀ ನಿಮಗೆ ಹೇಳೀದ್ದು. ಹೋಗಿ ಹೋಗಿ ನ್ಯಾಯಾಧೀಶರಿಗೇ ಲಂಚ ಕೊಡೋದಾ? ಏನು ನಮ್ಮ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಧೀಶರು ಅಷ್ಟೊಂದು ಇಳಿಜಾರಿದ್ದಾರೆ ಅಂದ್ಕೊಂಡ್ರಾ? ಏನ್ರೀ ಸುಮ್ ಸುಮ್ನೆ ಆರೋಪ ಮಾಡೋ ಮೊದಲು ಸ್ವಲ್ಪ ಯೋಚಿಸಿ ಮಾತನಾಡಿ' ಎಂದಿದ್ದರು.

English summary
According to ACB FIR the Rowdysheeter-cum-realtor P. Yadagiri, who brokered the Reddy Bailgate deal, was not paid the promised amount by MLA Gali Somasekhara Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X