ಬಿಇಎಂಎಲ್ ಮುಖ್ಯಸ್ಥ ವಿಆರ್ ಎಸ್ ನಟರಾಜನ್ ಅಮಾನತು
ಟಟ್ರಾ ಟ್ರೆಕ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಟರಾಜನ್ ಅವರ ಮೇಲೆ ಸಿಬಿಐ ಎಫ್ ಐಆರ್ ದಾಖಲಿಸಿದ ಮೇಲೆ ನಟರಾಜನ್ ಅವರ ಅಮಾನತಿಗೆ ಒತ್ತಡ ಹೆಚ್ಚಿತ್ತು. ಬೆಮೆಲ್ ಮುಖ್ಯಸ್ಥರನ್ನು ಅಮಾನತುಗೊಳಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸಿಬಿಐ ಕೋರಿತ್ತು. ಅದರಂತೆ ನಟರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ವಿಆರ್ ಎಸ್ ನಟರಾಜನ್ ಅವರ ಜಾಗದಲ್ಲಿ ಬೆಮೆಲ್ ನ ಹಿರಿಯ ನಿರ್ದೇಶಕ ಪಿ. ದ್ವಾರಕನಾಥ್ ಅವರನ್ನು ಸಿಎಂಡಿ ಆಗಿ ಸರ್ಕಾರ ನೇಮಕ ಮಾಡಿದೆ.
ಕಳಪೆ ಗುಣಮಟ್ಟದ ಟಟ್ರಾ ಟ್ರಕ್ಸ್ ಅನ್ನು ಸೇನೆಗೆ ಖರೀದಿಸುವ ಹಿನ್ನೆಲೆಯಲ್ಲಿ 14 ಕೋಟಿ ರು ಲಂಚದ ಆಮಿಷ ಒಡ್ಡಿದ್ದರು ಎಂದು ಜನರಲ್ ಸಿಂಗ್ ಅವರು ಅವ್ಯವಹಾರವನ್ನು ಬಯಲಿಗೆಳೆದಿದ್ದರು.
ನಟರಾಜನ್ ಪ್ರತಿಕ್ರಿಯೆ: ಜನರಲ್ ವಿಕೆ ಸಿಂಗ್ ಅವರು ಬೆಮೆಲ್ ನ ಟಟ್ರಾ ಟ್ರಕ್ಸ್ ಖರೀದಿ ಬಗ್ಗೆ ಮಾಡಿರುವ ಆರೋಪ ಎಲ್ಲವೂ ಸತ್ಯಕ್ಕೆ ದೂರ. ಲಂಚ ಆಮಿಷ ಹೇಳಿಕೆ ನೀಡಿರುವ ಜನರಲ್ ಸಿಂಗ್ ಅವರು ಕ್ಷಮಾಪಣೆ ಕೋರಬೇಕು. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುತ್ತೇನೆ ಎಂದು ಬೆಮೆಲ್ ನ ಮಾಜಿ ಮುಖ್ಯಸ್ಥೆ ವಿಆರ್ ಎಸ್ ನಟರಾಜನ್ ಸವಾಲೆಸೆದಿದ್ದಾರೆ.
ಕೇಸ್ ಇತಿಹಾಸ: ಟಟ್ರಾ ಟ್ರೆಕ್ ಖರೀದಿ 1.4 ಲಕ್ಷ ಅವ್ಯವಹಾರ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ (ಏ.19) ಬಿಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಸ್ಥ ವಿಆರ್ ಎಸ್ ನಟರಾಜನ್ ಅವರ ಮೇಲೆ ಎಫ್ ಐಆರ್ ದಾಖಲಿಸಿದರು.
ನಟರಾಜನ್ ಅವರ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು ಹಾಗೂ ಕೊಯಮತ್ತೂರು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವೆಕ್ಟ್ರಾ ಅಧ್ಯಕ್ಷ ರವೀಂದರ್ ರಿಷಿ ಹಾಗೂ ಬಿಇಎಂಎಲ್ ಮಾಜಿ ನಿರ್ದೇಶಕ(ರಕ್ಷಣಾ ಸರಬರಾಜು) ವಿ ಮೋಹನ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿತ್ತು.
ಸಿಬಿಐನ ನಾಲ್ಕು ಅಧಿಕಾರಿಗಳು ಇಂದಿರಾನಗರದ ನಟರಾಜನ್ ಅವರ ಮನೆಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿದೆ. ನಟರಾಜನ್ ಅವರನ್ನು ಒಂದು ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಅಗತ್ಯ ಬಿದ್ದರೆ ಬಂಧಿಸಿ ವಿಚಾರಣೆಗೆ ಒಳಪಡಿಸಬಹುದಾಗಿದೆ ಎಂದು ಸಿಬಿಐ ಮೂಲಗಳು ಹೇಳಿದೆ.