ಸಂಸದೆ ಜೆ ಶಾಂತಾ ಸದಸ್ಯತ್ವ ಅಸಿಂಧು : ಹೈಕೋರ್ಟ್

ನ್ಯಾ ಶೈಲೇಂದ್ರ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಆದೇಶ ಈ ಮಹತ್ವದ ಆದೇಶ ನೀಡಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರ, ಬಳ್ಳಾರಿ ಗಾಲಿ ರೆಡ್ಡಿ ಕುಟುಂಬ, ಬಳ್ಳಾರಿ ಪಕ್ಷೇತರ ಶಾಸಕ ಶ್ರೀರಾಮುಲು ಅವರಿಗೆ ತೀವ್ರ ಮುಜುಗರ ಉಂಟು ಮಾಡಿದೆ.
ಆದರೆ, ನಂದೀಶ್ ರೆಡ್ಡಿ ಪ್ರಕರಣದಲ್ಲಿ ಆರು ತಿಂಗಳೊಳಗೆ ಮರು ಚುನಾವಣೆ ನಡೆಸುವಂತೆ ಸೂಚಿಸಿದ್ದ ನ್ಯಾಯಪೀಠ, ಈ ಪ್ರಕರಣದಲ್ಲಿ ಮರು ಮತಎಣಿಕೆಗೆ ಆದೇಶಿಸಿದೆ. 4 ವಾರಗಳ ಒಳಗೆ ಮರು ಮತ ಎಣಿಕೆ ಯಾಗಬೇಕಿದೆ. ಇವತ್ತಿನಿಂದ(ಜೂ.11) ಶಾಂತಾ ಅವರು ಸಂಸತ್ತಿಗೆ ಕಾಲಿಡುವಂತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಲಾಗಿದೆ.
ಬಳ್ಳಾರಿಯಲ್ಲಿ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿಸುಳ್ಳು ಜಾತಿ ನಮೂದು ಹಾಗೂ ಚುನಾವಣೆ ಅಕ್ರಮ ನಡೆಸಿ ಶ್ರೀಮತಿ ಜೆ. ಶಾಂತಾ ಅವರು ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಚಂದ್ರೇಗೌಡ ಎಂಬುವವರು ತಕರಾರು ಅರ್ಜಿ ಸಲ್ಲಿಸಿದ್ದರು.
ಬಳ್ಳಾರಿಯ ದೇವಿನಗರ ಕ್ಲಬ್ ರಸ್ತೆ, 2ನೇ ಅಡ್ಡರಸ್ತೆಯ ನಿವಾಸಿಯಾದ ಶ್ರೀಮತಿ ಜೆ ಶಾಂತಾ ನಾಗರಾಜು 2009 ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶಾಂತಾ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿರುವುದಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅಭ್ಯರ್ಥಿ ಅರ್ಜಿಯಲ್ಲಿ ನಮೂದಿಸಿದ್ದರು.
ಆದರೆ, ಅವರು ಬೋವಿ ಜಾತಿಗೆ ಸೇರಿದ್ದಾರೆ. ಹಾಗಾಗಿ ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಎಂದು ಚಂದ್ರಗೌಡ ಅವರ ಪರ ವಕೀಲ ಕಾಂತರಾಜ್ ಅವರು ವಾದಿಸಿದ್ದರು.
ಮರು ಎಣಿಕೆ ಸಾಧ್ಯತೆ ಹೇಗೆ?: 2009ರಲ್ಲಿ ಚುನಾವಣೆ ನಡೆದಿರುವುದರಿಂದ ಅಂದು ಅಕ್ರಮ ಮತ ಎಣಿಕೆ ನಡೆದಿದೆ ಎಂದು ಸಾಬೀತು ಮಾಡಿದರು. ಅದೇ ಮತ ಎಣಿಕೆ ಯಂತ್ರಗಳನ್ನು ಬಳಸಿ ಮರು ಎಣಿಕೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರಿಸಿದ ವಕೀಲ ಕಾಂತರಾಜ್..
ಮತ ಎಣಿಕೆಯಲ್ಲಿ ವೋಟಿಂಗ್ ಮೆಷಿನ್ ಬದಲಾಯಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರು ವರ್ಷದ ಮೊದಲೇ ನಾವು ಮತ ಎಣಿಕೆ ಯಂತ್ರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಕೋರ್ಟ್ ಗೆ ಮನವಿ ಸಲ್ಲಿಸಿ ಆದೇಶ ಪಡೆದಿದ್ದೆವು. ಹಾಗಾಗಿ, ಅದೇ ಮತ ಎಣಿಕೆ ಯಂತ್ರಗಳ ಮೂಲಕ ಮರು ಎಣಿಕೆ ಸಾಧ್ಯ ಎಂದು ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ.
ಹನುಮಂತಪ್ಪ ಸಂತಸ: ಜೆ ಶಾಂತಾ ಅವರು ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಹನುಮಂತಪ್ಪ ವಿರುದ್ಧ ಕೆಲ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮೂರು ವರ್ಷಗಳಿಂದ ಬಹುತೇಕ ರಾಜಕೀಯ ಸಹವಾಸ ಸಾಕು ಎಂಬಂತೆ ಇದ್ದ ಎನ್ ವೈ ಹನುಮಂತಪ್ಪ ಅವರು ಕೋರ್ಟ್ ಆದೇಶ ಹೊರಬಿದ್ದಂತೆ ಸಂತಸ ವ್ಯಕ್ತಪಡಿಸಿದ್ದಾರೆ.
ಹಣಕ್ಕೋಸ್ಕರ ನಾವು ನನ್ನನ್ನು ಮಾರಿಕೊಂಡಿದ್ದೆ. ಗಾಲಿ ರೆಡ್ಡಿ ಅವರ ಪ್ರಭಾವಕ್ಕೆ ಬಿದ್ದು ಸೋತಿದ್ದೆ ಎಂದು ಸುಳ್ಳು ವರದಿ ಹಬ್ಬಿದ ಮೇಲೆ ಮನನೊಂದು ರಾಜಕೀಯದಿಂದ ಕೆಲಕಾಲ ದೂರ ಉಳಿದೆ ಎಂದು ಹನುಮಂತಪ್ಪ ಪ್ರತಿಕ್ರಿಯಿಸಿದ್ದಾರೆ.
15ನೇ ಸುತ್ತಿನ ತನಕ ಲೀಡ್ ನಲ್ಲಿದ್ದೆ 2 ನಿಮಿಷದಲ್ಲಿ 2 ಸುತ್ತಿನ ಎಣಿಕೆ ಮುಗಿಸಿಬಿಟ್ಟರು. 1,120 ಮತಗಳ ಅಂತರದಿಂದ ಸೋಲು ಕಾಣಬೇಕಾಯಿತು. ಕೊನೆ ಸುತ್ತಿನ ಎಣಿಕೆಯಲ್ಲಿ ವ್ಯತ್ಯಯವಾಗಿದೆ. ಗಾಲಿ ರೆಡ್ಡಿ ಕುಟುಂಬ ಅಧಿಕಾರಿಗಳನ್ನು ಗುಲಾಮರಾಗಿ ನೋಡಿಕೊಂಡರು. ಸಂಸದ ಸ್ಥಾನ ಸಿಕ್ಕರೆ ಜನತೆಯ ಆಶೀರ್ವಾದ ಎಂದು ತಿಳಿದು ಲೋಕಸಭೆಗೆ ಹೋಗುತ್ತೇನೆ ಎಂದು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು.












Click it and Unblock the Notifications