ಜೂ 12 ರಿಂದ 14 ರ ತನಕ ಕಾವೇರಿ ನೀರು ಇಲ್ಲ

ಕಾವೇರಿ ನೀರು ಪೂರೈಕೆ ಕೇಂದ್ರದ 1,2,3 ಹಾಗೂ ನಾಲ್ಕನೇ ಹಂತದಲ್ಲಿ ತುರ್ತು ದುರಸ್ತಿ ಕಾಮಗಾರಿ ನಡೆಯಲಿದೆ. ಹೀಗಾಗಿ ಜೂನ್ 12ರಿಂದ 14ರ ವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸಮಸ್ಯೆ ಏನು?: ಜುಲೈ ಅಂತ್ಯಕ್ಕೆ ಎರಡನೇ ಘಟ್ಟದಿಂದ ಪ್ರತಿನಿತ್ಯ 500 ದಶಲಕ್ಷ ಲೀಟರ್ ನಗರಕ್ಕೆ ಹರಿದು ಬರಲಿದೆ.
ಈ ಕಾಮಗಾರಿ ಮುಗಿಸಲು ಅಗತ್ಯವಿರುವ ವಿದ್ಯುತ್ ಪೂರೈಕೆ, ಸಂಪರ್ಕ ಕಲ್ಪಿಸಬೇಕಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ಇಲಾಖೆ(KPTC) ಹೇಳಿದೆ. ಕೆಲವು ಘಟಕಗಳಲ್ಲಿ ಟ್ಯಾಂಕ್ ಸ್ವಚ್ಛತೆ, ಪಂಪ್ ಹೌಸ್ ನಿರ್ವಹಣೆ, ವಾಲ್ವ್ ರಿಪೇರಿ ಮುಂತಾದ ಕಾರ್ಯಗಳನ್ನು ಈ ಮೂರು ದಿನಗಳಲ್ಲಿ ಪೂರ್ತಿ ಮಡಬೇಕಿದೆ ಎಂದು ಜಲಮಂಡಳಿ ತಿಳಿಸಿದೆ.
ವೇಳಾಪಟ್ಟಿ ನೋಟ್ ಮಾಡಿಕೊಳ್ಳಿ: ಕಾವೇರಿ ನೀರು ಪೂರೈಕೆಯ ಒಂದನೇ ಹಾಗೂ ಎರಡನೇ ಹಂತ ಜೂನ್ 12ರಂದು ಬೆಳಿಗ್ಗೆ 10ಕ್ಕೆ ಬಂದ್ ಆಗಿ ಅದೇ ದಿನ ಸಂಜೆ 4ಕ್ಕೆ ಸಹಜ ಸ್ಥಿತಿಗೆ ಮರಳಲಿದೆ. ನಂತರ ಬೆಂಗಳೂರು ದಕ್ಷಿಣ, ಕೇಂದ್ರ ಹಾಗೂ ಪಶ್ಚಿಮದ ಭಾಗದಲ್ಲಿ ನೀರು ಪೂರೈಕೆ ಸಹಜ ಸ್ಥಿತಿಗೆ ಬರಲಿದೆ.
* ಕಾವೇರಿ ನೀರು ಪೂರೈಕೆಯ ಮೂರನೇ ಹಂತ ಜೂನ್ 12ರಂದು ಬೆಳಿಗ್ಗೆ 10ಕ್ಕೆ ಸ್ಥಗಿತಗೊಂಡು ಸಂಜೆ 6ಕ್ಕೆ ಮತ್ತೆ ಕಾರ್ಯಾರಂಭ ಮಾಡಲಿದೆ.
ಬಳಿಕ ನಗರದ ಕೇಂದ್ರ, ದಕ್ಷಿಣ ಭಾಗ, ಉತ್ತರ ಹಾಗೂ ಪೂರ್ವ ಭಾಗಗಳಲ್ಲಿ ನೀರು ಪೂರೈಕೆ ಸಹಜ ಸ್ಥಿತಿಗೆ ಬರಲಿದೆ.
* ನಾಲ್ಕನೇ ಹಂತ ಜೂನ್ 12ರಂದು ಬೆಳಿಗ್ಗೆ 10ಕ್ಕೆ ಸ್ಥಗಿತಗೊಂಡು ಮರುದಿನ ಸಂಜೆ 4ಕ್ಕೆ ಮತ್ತೆ ಕಾರ್ಯಾರಂಭ ಮಾಡಲಿದೆ.
ನಗರದ ದಕ್ಷಿಣ, ಪಶ್ಚಿಮ ಹಾಗೂ ಪೂರ್ವ ಭಾಗಗಳಲ್ಲಿ ನೀರಿನ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ.
'ಖಾಸಗಿ ಟ್ಯಾಂಕರ್ ಗಳಿಗೆ ಮೊರೆ ಹೋಗಬೇಡಿ. 400 ರು.ಗೂ ಅಧಿಕ ದುಡ್ಡು ನೀಡಿ ಒಂದು ಟ್ಯಾಂಕ್ ನೀರು ತುಂಬಿಸಿಕೊಳ್ಳುವ ಬದಲು ನಿಗದಿತ ಸಮಯದಲ್ಲಿ ಜಲಮಂಡಳಿ ಪೂರೈಸುವ ಕಾವೇರಿ ನೀರನ್ನು ಬಳಸಿಕೊಳ್ಳಿ' ಎಂದು 90 ಲಕ್ಷ ಜನರಿಗೆ BWSSB ಮಂಡಳಿ ಅಧಿಕಾರಿ ಟಿ ವೆಂಕಟರಾಜು ಕಿವಿಮಾತು ಹೇಳಿದ್ದಾರೆ.
ಜಲಮಂಡಳಿ ಭಗಿರಥ ಯತ್ನ: ಪ್ರಸ್ತುತ ಜಲಮಂಡಳಿಯು ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯಿಂದ ಕಾವೇರಿ ನದಿ ನೀರನ್ನು ಪಂಪ್ ಮಾಡಿ ನಗರದ ಜನತೆಗೆ ಪೂರೈಕೆ ಮಾಡುತ್ತಿದೆ. BWSSB ಒಟ್ಟಾರೆ 900 ದಶಲಕ್ಷ ನೀರು ಒದಗಿಸುವ ಸಾಮರ್ಥ್ಯ ಹೊಂದಿದೆ.
ಕಾವೇರಿ ನೀರು ಸರಬರಾಜು ಯೋಜನೆ(CWSS) 4ನೇ ಹಂತ ಎರಡನೇ ಘಟ್ಟ ಮಾರ್ಚ್ 2012ರ ವೇಳೆಗೆ ಮುಕ್ತಾಯವಾಗಬೇಕಿತ್ತು. ಬಿಬಿಎಂಪಿಯ ಹೊಸ ಬಡಾವಣೆಗಳಿಗೆ ಈ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ.
ಸುಮಾರು 3383.70 ಕೋಟಿ ವೆಚ್ಚದ ಈ ಯೋಜನೆಗೆ ಜಪಾನ್ ದೇಶದ ನೆರವು ಸಿಕ್ಕಿದೆ. ಸುಮಾರು 500 ಮಿಲಿಯನ್ ಲೀಟರ್ ನೀರನ್ನು ಪ್ರತಿದಿನ ಬೆಂಗಳೂರಿಗೆ ಹರಿಸಲಾಗುವುದು. ಸುಮಾರು 172 ಕಿ.ಮೀ ಪೈಪ್ ಲೇನ್ ಕಾರ್ಯ ಬಹುತೇಕ ಮುಗಿದಿದೆ.












Click it and Unblock the Notifications