ಜಗನ್ ಕೇಸ್ : ಬಿಸಿಸಿಐ ಶ್ರೀನಿವಾಸನ್ ಗೆ ಸಿಬಿಐ ಸಮನ್ಸ್
ಜಗನ್ ಮೋಹನ್ ರೆಡ್ಡಿ ಅವರ ಒಡೆತನದ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಉದ್ಯಮಿಗಳ ಮೇಲೆ ಸಿಬಿಐ ಕಣ್ಣಿರಿಸಿದೆ. ಶ್ರೀನಿವಾಸನ್ ಅವರು ಜಗನ್ ಅವರ ಸಿಮೆಂಟ್ ಕಂಪನಿಯಲ್ಲಿ ತೊಡಗಿಸಿರುವ ಬಂಡವಾಳದ ಬಗ್ಗೆ ಸಿಬಿಐ ಪ್ರಶ್ನಿಸಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಟಿ ಸಚಿವ ಪೊನ್ನಲಾ ಲಕ್ಷ್ಮಯ್ಯ ಅವರನ್ನು ಸಿಬಿಐ ಪ್ರಶ್ನಿಸಿದೆ. ವೈಎಸ್ ರಾಜಶೇಖರ ರೆಡ್ಡಿ ಅವರ ಅಧಿಕಾರವಿದ್ದ ಕಾಲದಲ್ಲಿ 2004-2009 ಸರ್ಕಾರಿ ಆದೇಶ ಹೊರಡಿಸಿದ ತಪ್ಪಿಗೆ ಲಕ್ಷ್ಮಯ್ಯ ಅವರು ಸಿಬಿಐ ಬಲೆಗೆ ಬಿದ್ದಿದ್ದಾರೆ. ರಾಜಶೇಖರ್ ರೆಡ್ಡಿ ಕಾಲದಲ್ಲಿ ನೀರಾವರಿ ಸಚಿವರಾಗಿದ್ದ ಲಕ್ಷ್ಮಯ್ಯ ಅವರು ಸಿಮೆಂಟ್ ಕಂಪನಿಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡಿದ ಆರೋಪ ಹೊತ್ತಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅಲ್ಲದೆ ಜಗನ್ ಅವರ ಆರ್ಥಿಕ ಸಲಹೆಗಾರ ವಿ ವಿಜಯ್ ಸಾಯಿ ರೆಡ್ಡಿ, ಮಾಜಿ ಆಂಧ್ರ ಸಚಿವ ಮೋಪಿದೇವಿ ವೆಂಕಟರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಹಾಗೂ ಸರ್ಕಾರಿ ಅಧಿಕಾರಿ ಕೆವಿ ಬ್ರಹ್ಮಾನಂದ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ನಡುವೆ ಜಗನ್ ಮೋಹನ್ ರೆಡ್ಡಿ ಅವರ ನ್ಯಾಯಾಂಗ ಬಂಧನ ಅವಧಿ ಜೂ.11ರ ತನಕ ಇರುವುದರಿಂದ ಜಗನ್ ಚಂಚಲಗುಡ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಐದು ದಿನಗಳ ಕಾಲ ಸಿಬಿಐ ವಶದಲ್ಲಿದ್ದ ಜಗನ್ ಅವರಿಗೆ ಗುರುವಾರ ಮುಕ್ತಿ ಸಿಕ್ಕಿತ್ತು. ಆದರೆ, ಇನ್ನೂ ಮೂರು ದಿನಗಳ ಕಾಲ ವಿಚಾರಣೆಗೆ ಜಗನ್ ಅವರನ್ನು ಒದಗಿಸುವಂತೆ ಸಿಬಿಐ ತಂಡ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.