ಯಡಿಯೂರಪ್ಪಗೆ ಸಿಕ್ಕಿದ್ದು 20 ಕೋಟಿ ಲಂಚ

ಈ ಪ್ರಕರಣದಲ್ಲಿ ಯಡಿಯೂರಪ್ಪ ಸಲ್ಲಿಸಿರುವ ಜಾಮೀನು ಅರ್ಜಿ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದ್ದು, ಜೂ.13ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಜಿಂದಾಲ್ ಸ್ಟೀಲ್ ವರ್ಕ್ಸ್ ಲಿಮಿಟೆಡ್ ನಿಂದ ದಾಖಲೆ ಇಲ್ಲದಂತೆ ಬಿಎಸ್ ಯಡಿಯೂರಪ್ಪ ಅವರ ಶಿಕ್ಷಣ ಟ್ರಸ್ಟ್ ಗೆ ಹಣರವಾನೆ ಮಾಡಲಾಗಿತ್ತು. ಯಡಿಯೂರಪ್ಪ ಅವರ ಜಾಮೀನು ಅರ್ಜಿ ವಿಚಾರಣೆ ನಡೆದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಟ್ರಸ್ಟ್ ಪಡೆದ ಒಟ್ಟು ಹಣದ ಬಗ್ಗೆ ಪ್ರಶ್ನೆ ಬಂದಾಗ ಸಿಬಿಐ ವಿಶೇಷ ಕೌನ್ಸಿಲರ್ ಅಶೋಕ್ ಬಾನ್ ಅವರು ವ್ಯವಹಾರದ ವಿವರ ನೀಡಿದ್ದಾರೆ.
ಯಡಿಯೂರಪ್ಪ ಅವರ ಡೈರಿಯಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಯಡಿಯೂರಪ್ಪ ಅವರ ಮಕ್ಕಳು ನಡೆಸುವ ಪ್ರೇರಣಾ ಎಜುಕೇಷನ್ ಹಾಗೂ ಸೋಷಿಯಲ್ ಟ್ರಸ್ಟ್ ಗೆ 20 ಕೋಟಿ ರು ನೀಡಲಾಗಿದೆ. ನಂತರ ಹಣವನ್ನು ವಿವೇಕಾನಂದ ಟ್ರಸ್ಟ್ ಗೆ ವರ್ಗಾಯಿಸಲಾಗಿದೆ. ಯಡಿಯೂರಪ್ಪ ಅವರು ಈ ಟ್ರಸ್ಟ್ ನ ಪ್ರಮುಖ ಟ್ರಸ್ಟಿಯಾಗಿರುವುದು ಗಮನಾರ್ಹ ಸಂಗತಿ.
ಭ್ರಷ್ಟಾಚಾರ, ಸಂಚು, ವಂಚನೆ, 1991ರ ಭೂ ಕಾಯಿದೆ ಉಲ್ಲಂಘನೆ ಮುಂತಾದ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರ ಮಕ್ಕಳು, ಅಳಿಯಂದಿಯರುಗಳ ಮೇಲೆ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಸಿಬಿಐ ತನ್ನ ಮನವಿ ಸಲ್ಲಿಸಿದೆ.
ಮೇ.16ರಂದು ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ತಂಡಕ್ಕೆ ಇನ್ನೂ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯತೆ ಇದೆ ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಪ್ರೇರಣಾ ಟ್ರಸ್ಟ್ ಗೆ ಕೋಟಿಗಟ್ಟಲೆ ಹಣ ನೀಡಿ ಗಣಿ ಗುತ್ತಿಗೆ ಪಡೆದ ಜಿಂದಾಲ್ ಸ್ಟೀಲ್ಸ್, ಅದಾನಿ ಸಮೂಹ ಹಾಗೂ ಸೌತ್ ವೆಸ್ಟ್ ಮೈನಿಂಗ್ ಕಂಪನಿ ಮೇಲೂ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications