ಜನಾರ್ದನ ರೆಡ್ಡಿಗೆ ಸಿಬಿಐ ಕಾಟ ಏಕೆ ಗೊತ್ತೇ !?

ವಿಷಯವೇನೆಂದರೆ ಬಳ್ಳಾರಿ ಅಕ್ರಮ ಗಣಿಗಾರಿಕೆಯ ಕಾರಸ್ಥಾನವಾಗಿದ್ದ ಈ 'ಕುಟೀರ'ಕ್ಕೆ ವಾಸ್ತುದೋಷ ಇತ್ತಂತೆ. ಪಾಪ ರೆಡ್ಡಿ ಅದನ್ನು ಗಮನಿಸದೆ, ಆ ಮನೆಯಲ್ಲೇ ಎಲ್ಲವನ್ನೂ ಮಾಡಿಕೊಂಡಿದ್ದರು. ಕೊನೆಗೆ ತಮ್ಮ ಬಂಧನವನ್ನೂ. ಆದರೆ ಏನ್ಮಾಡೋಣ ಅವರು ತಡವಾಗಿ ಎಚ್ಚೆತ್ತುಕೊಂಡಿದ್ದಾರೆ.
ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಎಂಬಂತೆ ಆ ಮನೆಯಲ್ಲಿದ್ದುದ್ದನ್ನೆಲ್ಲಾ, ಹೌದು ಮನೆಯ ಯಜಮಾನನ ಸಹಿತ ಮನೆಯ ಮಾನ ಮರ್ಯಾದೆಯನ್ನೂ, ಕೊಳ್ಳೆ ಹೊಡೆದು ಇನ್ನೇನು ಬಟಾಬಯಲಿನಲ್ಲಿ ನಿಲ್ಲಿಸಬೇಕು ಎಂದು ಸಿಬಿಐ ಲಕ್ಷ್ಮಿನಾರಾಯಣ ಸಿದ್ಧತೆ ಮಾಡಿಕೊಂಡಿರುವಾಗ ಯಾರೋ ಬಂದು ರೆಡ್ಡಿ ಬ್ರದರ್ಸ್ ಗೆ 'ನಿಮ್ಮ ಮನೆಯ ವಾಸ್ತು ಸರೀಯಿಲ್ಲಾ. ಅದ್ಕೆ ಹಿಂಗೆಲ್ಲ ಆಯ್ತಿದೆ' ಎಂದು ಹೇಳಿದ್ದಾರೆ.
ಸರಿ ತಡವೇಕೆ. ಸೆ. 5ರಿಂದ ತಾಯಿಯನ್ನು ಕಳೆದುಕೊಂಡ ಕರುವಿನಿಂತಾಗಿರುವ 'ಕೆಎಂಎಫ್ ಸೋಮಶೇಖರ' ತಮ್ಮಡು ಮನೆಯಲ್ಲಿ ಇಲ್ಲದಿರುವಾಗ ಕುಟೀರಕ್ಕೆ ಗಡಪಾರಿ ಇಟ್ಟೇ ಬಿಟ್ಟಿದ್ದಾರೆ. ಇನ್ನು ಮತ್ತೊಬ್ಬ ಸೋದರ ಕರುಣಾಕರ ರೆಡ್ಡಿಗಾರು ಸೋದರನಿಗೆ ಒಳ್ಳೇದು ಆಗುವ ಹಾಗಿದ್ದರೆ ಆತನೇ ಕಟ್ಟಿಸಿಕೊಟ್ಟ ಮನೆ ನಮಗೇಕೆ ಎಂದು ತಮ್ಮ ಮನೆಯನ್ನೂ ಧ್ವಂಸ ಮಾಡಲು ಆಜ್ಞಾಪಿಸಿದ್ದಾರೆ ಎನ್ನಲಾಗಿದೆ.
ಚಂದಮಾಮ ಪುಸ್ತಕದಲ್ಲಿನ ಕಥೆಗಳಲ್ಲಿ ಬರುವಂತೆ ಸಕಲೈಶ್ವರ್ಯ ಭೋಗ ನಡೆಸಿದ್ದ ರೆಡ್ಡಿಗಳಿಗೆ ಈ ಮನೆ ಐಗೋಳು ಬಂದಿಲ್ಲ. ಬದಲಿಗೆ ಗೋಳು ತಂದಿಟ್ಟಿದೆ. ಹೀಗಾಗಿ ಈಶಾನ್ಯ ದಿಕ್ಕಿನಲ್ಲಿರುವ ಈ ಕುಟೀರವನ್ನು ರೆಡ್ಡಿ ಬ್ರದರ್ಸ್ ಜ್ಯೋತಿಷಿಗಳ ಸಲಹೆಯಂತೆ ಹುಣ್ಣಿಮೆಯ ದಿನವಾದ ಮಂಗಳವಾರ ನಾಲ್ಕಾರು ಗೋಡೆಗಳನ್ನು ಕೆಡವಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಕುಟೀರವನ್ನೇ ಧ್ವಂಸ ಮಾಡಿದರೂ ಅಚ್ಚರಿಯಿಲ್ಲ. ಏಕೆಂದರೆ ರೆಡ್ಡಿ ಸಂಕಷ್ಟ ಅಷ್ಟಿದೆ.
ಕುಟೀರದ ಅಕ್ಕಪಕ್ಕದ ಕ್ಯಾಂಟೀನ್ ಸೇರಿದಂತೆ ಚಿಕ್ಕಪುಟ್ಟ ಕಟ್ಟಡ, ಗಿಡಮರಗಳನ್ನೂ ತೆಗೆದುಹಾಕಲಾಗಿದೆ. 'ಕುಟೀರ' ಬಳಿ ತೆರಳಿದ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಮೊದಲು ಎರಡನೇ ದ್ವಾರದಲ್ಲಿ ಒಪ್ಪಿಗೆ ಪಡೆದು 'ಕುಟೀರ' ಪ್ರವೇಶಿಸಲಾಗುತ್ತಿತ್ತು. ಈಗ ದೂರದ ನಾಲ್ಕನೇ ಗೇಟಿನಲ್ಲಿಯೇ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿಗೂ ಗಡಪಾರಿ?: ಈ ಮಧ್ಯೆ ಕುಟೀರದಿಂದ ಒಂದೊಂದೇ ಜೈಲುಗಳಿಗೆ ಶಿಫ್ಟ್ ಆಗುತ್ತಿರುವ ರೆಡ್ಡಿಗೆ ಜಾಮೀನು ಎಂಬುದು ಪೆಡಂಭೂತವಾಗಿ ಕಾಡುತ್ತಿದೆ. ಆದರೆ ಇದಕ್ಕೆ ಜೈಲಿನ ವಾಸ್ತುದೋಷ ಕಾರಣವಾ? ಎಂಬುದು ಇನ್ನೂ ಖಚಿತಪಟ್ಟಿಲ್ಲ. ಆದರೆ ವಾಸ್ತುದೋಷ ಇದೆಯೆಂದು ರೆಡ್ಡಿ ಪರಪ್ಪನ ಅಗ್ರಹಾರ ಜೈಲಿಗೆ ಗಡಪಾರಿಯಿಟ್ಟರೆ ಮೆಚ್ಚನಾ ಕೃಷ್ಣ ಪರಮಾತ್ಮನು!












Click it and Unblock the Notifications