Get Updates
Get notified of breaking news, exclusive insights, and must-see stories!

ಜಗನ್ ಆಂಧ್ರ ಸಿಎಂ ಚಾನ್ಸ್ ಮಿಸ್ : ಆಜಾದ್

Gulam nabi Azad
ಹೈದರಾಬಾದ್, ಜೂ.4: ವೈಎಎಸ್ ಆರ್ ಪಕ್ಷದ ಅಧ್ಯಕ್ಷ, ಕಡಪ ಸಂಸದ ಜಗನ್ ಮೋಹನ್ ರೆಡ್ಡಿ ತನ್ನ ಭವಿಷ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವ ಸ್ಥಾನ ಆತನಿಗಾಗಿ ಕಾಯ್ದಿರಿಸಲಾಗಿತ್ತು. ಆದರೆ, ತಾಳ್ಮೆಗೆಟ್ಟ ಜಗನ್ ಆತುರ ನಿರ್ಧಾರದಿಂದ ಆತನ ಭವಿಷ್ಯ ಕತ್ತಲೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ನೆಲ್ಲೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಜಾದ್, ಜಗನ್ ಮೋಹನ್ ರೆಡ್ಡಿಗೆ ಅವರ್ ತಂದೆ ವೈಎಸ್ ರಾಜಶೇಖರ ರೆಡ್ಡಿಗಿದ್ದಂತೆ ತಾಳ್ಮೆ, ವ್ಯವಧಾನ ಇಲ್ಲ. ಎಲ್ಲವೂ ಆತುರಾತುರವಾಗಿ ಆಗಬೇಕು ಎಂದರೆ ಹೇಗೆ ಸಾಧ್ಯ. ಸಂಸತ್ತು, ಅಸೆಂಬ್ಲಿ ಹೇಗೆ ನಡೆಯುತ್ತದೆ ಎಂದು ತಿಳಿಯುವ ಮೊದಲೇ ಉನ್ನತ ಸ್ಥಾನವನ್ನು ಬಯಸುವುದು ಸರಿಯಲ್ಲ.

ವೈಎಸ್ ರಾಜಶೇಖರ ರೆಡ್ಡಿ ಅವರು ನಿಧನ ನಂತರ ಸಂಸದನಾಗಿ ಜಗನ್ ಮೋಹನ್ ರೆಡ್ಡಿ ಮಾಡಿದ್ದಾದರೂ ಏನು? ಮೂರು ತಿಂಗಳಿನಲ್ಲಿ ಮೂರು ಬಾರಿ ಮಾತ್ರ ಸಂಸತ್ತಿನ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಮುನ್ನವೇ ಸಿಎಂ ಪಟ್ಟ ಬಯಸಿದ್ದ ಜಗನ್ ಬಗ್ಗೆ ಕಾಂಗ್ರೆಸ್ ಹೇಗೆ ನಂಬಲು ಸಾಧ್ಯ ಎಂದು ಅಜಾದ್ ಪ್ರಶ್ನಿಸಿದ್ದಾರೆ.

ಜೂ.12 ರ ಅಸೆಂಬ್ಲಿ ಉಪ ಚುನಾವಣೆಗಾಗಿ ಪ್ರಚಾರಕ್ಕಿಳಿದಿರುವ ಕಾಂಗ್ರೆಸ್ ಪಕ್ಷಕ್ಕೆ ಜಗನ್ ಟಾರ್ಗೆಟ್ ಆಗಿದ್ದಾರೆ. ಸಿಎಂ ಕಿರಣ್ ಕುಮಾರ್ ರೆಡ್ಡಿ, ಎಪಿಸಿಸಿ ಅಧ್ಯಕ್ಷ ಬೋಟ್ಸಾ ಸತ್ಯನಾರಾಯಣ, ಸಂಸದ ಚಿರಂಜೀವಿ ಅವರ ಜೊತೆಗೂಡಿರುವ ಅಜಾದ್ ಅವರು ತಿರುಪತಿ, ನೆಲ್ಲೂರಿನಲ್ಲಿ ಪ್ರಚಾರ ನಡೆಸಿದ್ದಾರೆ.

"ತಂದೆಯ ಸ್ಥಾನ ಮಗನಿಗೆ ಬರುವುದು ರಾಜರ ಕಾಲದಲ್ಲೇ ಹೊರತೂ ಪ್ರಜಾಪ್ರಭುತ್ವದಲ್ಲಿ ಅಲ್ಲ. ಉನ್ನತ ಸ್ಥಾನ ಪಡೆಯಲು ಪ್ರತಿಭೆಯ ಜೊತೆಗೆ ಪರಿಶ್ರಮ, ಅನುಭವವೂ ಬೇಕು" ಎಂದು ಆಜಾದ್ ಅಭಿಪ್ರಾಯಪಟ್ಟಿದ್ದಾರೆ.

ಜಗನ್ ಆಸೆಗೆ ಆತನ ಕುಟುಂಬ ಬಲಿ: ಜಗನ್ ಮೋಹನ್ ರೆಡ್ಡಿ ಕುಟುಂಬದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ದ್ವೇಷವಿಲ್ಲ. ಭ್ರಷ್ಟಾಚಾರ ಆರೋಪದ ಮೇಲೆ ಸಿಬಿಐನಿಂದ ಬಂಧನವಾಗುತ್ತಿರುವವರಲ್ಲಿ ಜಗನ್ ಮೊದಲಿಗರಲ್ಲ.

ಜಾರ್ಖಂಡ್ ಮುಖ್ಯಮಂತ್ರಿ ಹಾಗೂ ಕ್ಯಾಬಿನೆಟ್ ಸಚಿವರು ಭ್ರಷ್ಟಾಚಾರದ ಆರೋಪ ಹೊತ್ತು ಮೂರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದಾರೆ.

2ಜಿ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ ರಾಜಾ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಮಗಳು ಕನ್ನಿಮೋಳಿ, ಸುರೇಶ್ ಕಲ್ಮಾಡಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ಕಾನೂನಿನ ಮುಂದೆ ತಲೆ ಬಾಗಿದ್ದಾರೆ.

ಇವರುಗಳಿಗೆ ಹೋಲಿಸಿದರೆ ಜಗನ್ ಇನ್ನೂ ಅನನುಭವಿ. ಜಗನ್ ಏನೂ ದೇವಲೋಕದಿಂದ ಉದುರಿದ್ದಾನೆಯೇ ಆತನನ್ನು ಬಂಧಿಸಬಾರದು ಎನ್ನಲಿಕ್ಕೆ? ಕಾನೂನು ಎಲ್ಲರಿಗೂ ಒಂದೇ. ಕಡಪ ಸಂಸದ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂದು ಗುಲಾಂ ನಬಿ ಹೇಳಿದ್ದಾರೆ.

ಎ ರಾಜಾ ಹಾಗೂ ಕನ್ನಿಮೋಳಿ ಬಂಧಿಸಿದಾಗ ಕಾಂಗ್ರೆಸ್ ಪಕ್ಷವನ್ನು ಡಿಎಂಕೆ ದೂರಲಿಲ್ಲ. ಆದರೆ, ಯುಪಿಎ ಸರ್ಕಾರ ಅದರಲ್ಲೂ ಕಾಂಗ್ರೆಸ್ ನಿಂದ ಉಪಕೃತಗೊಂಡ ವೈಎಸ್ ಆರ್ ಕುಟುಂಬ ವೃಥಾ ಆರೋಪ ಮಾಡುವುದು ಸರಿಯಲ್ಲ. ಸಿಬಿಐ ತನಿಖೆಗೆ, ಬಂಧನಕ್ಕೆ ಕಾಂಗ್ರೆಸ್ ಕಾರಣವಲ್ಲ.

ಅಪ್ಪನ ಮಾನ ಕಳೆದ ಮಗ: ರಾಜಶೇಖರ ರೆಡ್ಡಿಯನ್ನು ನಾನು ಯೂಥ್ ಕಾಂಗ್ರೆಸ್ ಮಟ್ಟದಿಂದಲೂ ಚೆನ್ನಾಗಿ ಬಲ್ಲೆ. ನಮ್ಮಿಬ್ಬರಲ್ಲಿ ಒಳ್ಳೆ ಗೆಳೆತನವಿತ್ತು. ರಾಜಶೇಖರ ರೆಡ್ಡಿಯಲ್ಲಿದ್ದ ದೂರದರ್ಶಿತ್ವ, ಜನತೆ ಸ್ಪಂದಿಸುತ್ತಿದ್ದ ರೀತಿ ಕೇಂದ್ರ ಸರ್ಕಾರಕ್ಕೂ ಮಾದರಿಯಾಗಿತ್ತು. ವಿಜಯಲಕ್ಷ್ಮಿ ಹಾಗೂ ಶರ್ಮಿಳಾ ರೆಡ್ಡಿ ನನಗೆ ತಂಗಿ ಹಾಗೂ ಮಗಳಿದ್ದಂತೆ.

ಆದರೆ, ಜಗನ್ ಮೋಹನ್ ರೆಡ್ಡಿಯ ಆಸೆಬುರುಕತನದಿಂದ ಇಂದು ವೈಎಸ್ ಆರ್ ಕುಟುಂಬಕ್ಕೆ ಈ ದುಃಸ್ಥಿತಿ ಒದಗಿ ಬಂದಿದೆ. ವೈಎಸ್ ರಾಜಶೇಖರ ರೆಡ್ಡಿ ಗಳಿಸಿದ್ದ ಜನಮನ್ನಣೆಯನ್ನು ದುರಪಯೋಗ ಪಡಿಸಿಕೊಳ್ಳಲಾಗಿದೆ. ಮಗನ ದುರಾಶೆಗೆ ಅಪ್ಪನ ಮಾನ ಹರಾಜಾಗಿದೆ.

ವೈಎಸ್ ರಾಜಶೇಖರ ರೆಡ್ಡಿ ಅವರ ಸಾವಿನ ದುಃಖವನ್ನು ಬಂಡವಾಳ ಮಾಡಿಕೊಂಡು ವಾಮಮಾರ್ಗದಲ್ಲೇ ಮುಂದುವರೆದರೆ ಜಗನ್ ಬಣಕ್ಕೆ ಅಪಾಯ ತಪ್ಪಿದ್ದಿಲ್ಲ ಎಂದು ಆಜಾದ್ ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+