ಬೆಲೆ ಇಳಿಸಿ ಇಲ್ಲವೇ ಬೆಂಬಲ ವಾಪಸ್ : ಕರುಣಾ
ಈ ನಡುವೆ ಚೆನ್ನೈನಲ್ಲಿ ಪೆಟ್ರೋಲ್ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಘೋಷಿಸಿದ ಬೆನ್ನಲ್ಲೇ ಕರುಣಾನಿಧಿ ಹೇಳಿಕೆ ಕುತೂಹಲ ಕೆರಳಿಸಿದೆ.
ಕಳೆದ ಮೂರು ದಿನಗಳಿಂದ ಚೆನ್ನೈನಲ್ಲಿ ಜನತೆ ಸರಿಯಾದ ಪೆಟ್ರೋಲ್ ಪೂರೈಕೆ ಇಲ್ಲದೆ ತತ್ತರಿಸಿದ್ದಾರೆ.ಡಿಎಂಕೆ ಹಾಗೂ ಎಐಎಡಿಎಂಕೆ ಕಿತ್ತಾಟದಿಂದ ಪೆಟ್ರೋಲ್ ಬೆಲೆ ಗಣನೀಯವಾಗಿ ಕೆಳಗಿಳಿದರೂ ಅಚ್ಚರಿಪಡಬೇಕಾಗಿಲ್ಲ.
ಕರುಣಾನಿಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ, ನಿಜವಾಗಲೂ ಡಿಎಂಕೆ ಪಕ್ಷ ಜನಪರ ಕಾಳಜಿ ಹೊಂದಿದ್ದರೆ ಯುಪಿಎಗೆ ನೀಡಿದ ಬೆಂಬಲ ಹಿಂಪಡೆಯಲಿ ಎಂದು ಸವಾಲು ಹಾಕಿದೆ.
ಈ ಹಿಂದೆ ವಿಪಿ ಸಿಂಗ್ ಕಾಲದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದ ಡಿಎಂಕೆ, ಜನಪರ ನೀತಿಯನ್ನು ಮಾತ್ರ ಬೆಂಬಲಿಸುತ್ತಾ ಬಂದಿದೆ. ಯುಪಿಎ ಸರ್ಕಾರದ ಜನವಿರೋಧಿ ನೀತಿಗಳನ್ನು ಸಹಿಸಲು ಸಾಧ್ಯವಾಗದಿದ್ದಾಗ, ತಕ್ಷಣವೇ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಕರುಣಾನಿಧಿ ಹೇಳಿದ್ದಾರೆ.
ಇಂಧನ ದರ ಏರಿಕೆ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಕೂತು ಸಮಸ್ಯೆಯನ್ನು ಪರಿಹರಿಸಿದರೂ ಸರಿಯೇ ಅಥವಾ ಯುಪಿಎ ಸರ್ಕಾರ ಬೆಲೆ ಇಳಿಕೆ ಮಾಡಿದರೂ ಸರಿಯೇ ಶ್ರೀಸಾಮಾನ್ಯನ ಮೇಲಿರುವ ಹೊರೆಯನ್ನು ತಗ್ಗಿಸುವುದು ಸರ್ಕಾರದ ಕರ್ತವ್ಯ ಎಂದು ಕರುಣಾನಿಧಿ ಹೇಳಿದ್ದಾರೆ.
ಕರುಣಾನಿಧಿ ಅವರ ಹೇಳಿಕೆಗೆ ಯುಪಿಎ ಸರ್ಕಾರದ ವಕ್ತಾರರಿಂದ ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಜಯಲಲಿತಾ ಸರ್ಕಾರ ಕೂಡಾ ಬೆಲೆ ಇಳಿಕೆ ಬಗ್ಗೆ ಇನ್ನೂ ಚರ್ಚಿಸಿಲ್ಲ.
ಈ ಮಧ್ಯೆ ಮೇ.31ರಂದು ಎನ್ ಡಿಎ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ನೀಡುವ ಬಗ್ಗೆ ಡಿಎಂಕೆ ಪಕ್ಷ ಇನ್ನೂ ತನ್ನ ನಿರ್ಧಾರ ತಿಳಿಸಿಲ್ಲ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 77.53 ರು ಇದೆ. ಕೇರಳ, ದೆಹಲಿ, ಉತ್ತರಾಖಂಡ್ ರಾಜ್ಯಗಳಲ್ಲಿ ವ್ಯಾಟ್ ಹಿಂಪಡೆದು, ಪೆಟ್ರೋಲ್ ಬೆಲೆ ತಗ್ಗಿಸಿದ ಮಾದರಿಯಲ್ಲಿ ತಮಿಳುನಾಡಿನಲ್ಲೂ ಪೆಟ್ರೋಲ್ ಬೆಲೆ ಇಳಿಕೆಗೆ ಜನತೆ ಆಗ್ರಹಿಸಿದೆ.
ಪೆಟ್ರೋಲ್ ಬೆಲೆ ಇಳಿಕೆಯಲ್ಲಿ ಮಿಕ್ಕ ರಾಜ್ಯಗಳಿಗೆ ಹೋಲಿಸಿದರೆ ಗೋವಾ ರಾಜ್ಯ ಎಲ್ಲರಿಗಿಂತ ಮುಂದಿದೆ. ಗೋವಾ ಸರ್ಕಾರ ಪ್ರತಿ ಲೀಟರ್ ಗೆ 11 ರು ಇಳಿಸಿ, ಹಣದುಬ್ಬರದ ಹೊಡೆತದಿಂದ ತನ್ನ ಪ್ರಜೆಗಳನ್ನು ರಕ್ಷಿಸಿದೆ.