USನಿಂದಲೇ ಬೆಂಗಳೂರಿನಲ್ಲಿ ಕಳ್ಳರನ್ನೋಡಿಸಿದ ಟೆಕ್ಕಿ
ಏನಾಯಿತೆಂದರೆ ಕೇರಳ ಮೂಲದ ಸುರೇಶ್ ಚಿತ್ತೂರ್ ವಿಪ್ರೋ ಟೆಕ್ನಾಲಜೀಸ್ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್. ಈತನ ಮನೆಯಿರುವುದು ಹುಳಿಮಾವುನಲ್ಲಿರುವ ರಾಯಲ್ ರೆಸಿಡೆನ್ಸಿ ಲೇಔಟಿನಲ್ಲಿ. ಇತ್ತೀಚೆಗೆ ಸುರೇಶನನ್ನು ವಿಪ್ರೋ ಕಂಪನಿ ಕೆಲಸದ ನಿಮಿತ್ತ 10 ದಿನಗಳ ಕಾಲ ಅಮೆರಿಕಕ್ಕೆ ಕಳಿಸಿತ್ತು. ಅದೇ ವೇಳೆ ಮನೆಯಲ್ಲಿ ಹೆಂಡತಿಯೊಬ್ಬಳೇ ಇರುವುದು ಬೇಡವೆಂದು ಆಕೆಯನ್ನು ಕೇರಳದಲ್ಲಿರುವ ತವರೂರಿಗೆ ಕಳಿಸಿದರು. ಹೋಗುವಾಗ ಮನೆಗೆ ಬೀಗ ಹಾಕಿಕೊಂಡು ಹೊರಟರು.
ಸುರೇಶ್ ಇನ್ನೇನು ಅಮೆರಿಕದಲ್ಲಿ ಹೆಜ್ಜೆ ಊರಬೇಕು. ಅಷ್ಟರಲ್ಲಿ ಅವರ ಮೊಬೈಲಿನಲ್ಲಿ ಸಂದೇಶವೊಂದು ಮೊಳಗಿತು. ಅದು ಬೆಂಗಳೂರಿನ ಹುಳಿಮಾವುನಲ್ಲಿರುವ ತನ್ನ ಮನೆಯ ಭದ್ತೆ ಕುರಿತಾದ ಸಂದೇಶವಾಗಿತ್ತು. ಬೆಚ್ಚಬಿದ್ದ ಸುರೇಶ್ ಮೊಬೈಲ್ ತೆರೆದು ನೋಡಿದರೆ ಆಘಾತಕರ ಸಂದೇಶ ಅಲ್ಲಿತ್ತು.
ಅದು ಬೆಳಗಿನ ಜಾವ 4 ಗಂಟೆ ಸಮಯ. ಮನೆಗೆ ಕಳ್ಳರು ನುಗ್ಗಿದ್ದಾರೆ ಎಂಬ ಸಂದೇಶ ಮೊಬೈಲಿನಿಂದ ಹೊರಬಿದ್ದಿದ್ದೇ ತಡ ಸುರೇಶ್ ಮೊದಲು ಮಾಡಿದ ಕೆಲಸವೆಂದರೆ ತನ್ನ ನೆರೆಮನೆಯವರನ್ನು ಎಚ್ಚರಗೊಳಿಸಿದ್ದು. ನೆರೆಮನೆಯಾತ ಮಂಜೇಗೌಡರು ಹೇಳಿಕೇಳಿ ಪೊಲೀಸ್ ಆಯುಕ್ತರಕಚೇರಿಯಲ್ಲಿ ವಿಶೇಷ ಘಟಕದಲ್ಲಿ ಹೆಡ್ ಕಾನ್ಸಟೇಬಲ್.
ತಡ ಮಾಡದೆ ಮಂಜೇಗೌಡರು ಪಕ್ಕದ ಮನೆಯತ್ತ ಇಣುಕಿ ನೋಡಿದರು. ತಕ್ಷಣ ಅವರ ಅರಿವಿಗೆ ಬಂದ ಸಂಗತಿಯೆಂದರೆ ಕಳ್ಳನೊಬ್ಬ ಪಕ್ಕದ ಮನೆಯ ಹೊರಗೆ ನಿಂತು ಹೊಂಚು ಹಾಕುತ್ತಿರುವುದು ವೇದ್ಯವಾಯಿತು. ಏನೋ ಗ್ರಹಚಾರ ಕೆಟ್ಟಿದೆ ಎಂದು ಪಕ್ಕದ ಮನೆಯವರನ್ನು ಎಬ್ಬಿಸಲು ಯತ್ನಿಸಿದರು. ಆದರೆ ಅವರು ಮನೆಯಲ್ಲೇ ತಣ್ಣಗೆ ಕುಳಿತು, ಊಹೂ ನಾವು ನಿಮ್ಮ ಸಹಾಯಕ್ಕೆ ಬರೋಲ್ಲ, ಭಯ ಆಗ್ತಿದೆ ಎಂದು ಕೈ ಎತ್ತಿದರು.
ಸರಿ ಇನ್ನೇನ್ಮಾಡೋದು. ಮಂಜೇಗೌಡರು ತಮ್ಮ ಮಗನಿಗೆ ಎನೇನು ಮಾಡಬೇಕು ಎಂದು ಸೂಚನೆಗಳನ್ನು ಕೊಡುತ್ತಾ ಹೋದರು. ಈ ಮಧ್ಯೆ ಅವರ ರೈಫಲ್ ಅನ್ನು ಕೈಗೆತ್ತಿಕೊಂಡರು. ಅದಕ್ಕಷ್ಟು ಗುಂಡುಗಳನ್ನು ತುಂಬಿಕೊಂಡು ಸುರೇಶನ ಮನೆಯತ್ತ ನುಗ್ಗಿದರು. ಅದಾಗಲೇ ಕಳ್ಳರ ಗ್ಯಾಂಗು ಹಿತ್ತಲಿನ ಬಾಗಿಲನ್ನು ಮುರಿದು ಸುರೇಶನ ಮನೆಯಲ್ಲಿ ಅಡಗಿರುವುದು ಗೊತ್ತಾಯಿತು.
ಈ ಮಧ್ಯೆ ಮನೆಯ ಹೊರಗೆ ಕಾವಲು ಕಾಯುತ್ತಿದ್ದ ಕಳ್ಳನೊಬ್ಬ ಮಂಜೇಗೌಡರತ್ತ ಕಲ್ಲು ಬೀಸಲಾರಂಭಿಸಿದ. ಆಗ ಮಂಜೇಗೌಡರು ಕಳ್ಳರತ್ತ ಗುಂಡು ಹಾರಿಸಿದರು. ಸುರೇಶನ ಮನೆಯೊಳಗಿದ್ದ ಕಳ್ಳರೂ ಹೊರಬಂದು ಮಂಜೇಗೌಡ ಮತ್ತು ಅವರ ಪುತ್ರ ಪ್ರದೀಪನತ್ತ ಕಲ್ಲು ತೂರುತ್ತಾ, ಕತ್ತಲಲ್ಲಿ ಪರಾರಿಯಾದರು. ಇಷ್ಟಾದರೂ ಮಕ್ಕದ ಮನೆಯವರು ಹೊರಕ್ಕೆ ಬಂದು ಗೌಡರ ನೆರವಿಗೆ ಧಾವಿಸಲಿಲ್ಲ.
ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನನ್ನ ರೈಫಲನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗೆ ಕಳಿಸಿದ್ದಾರೆ. ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.