ವಾಲೀಬಾಲ್ ಆಟಗಾರ್ತಿಯ ಮೇಲೆ ಆಸಿಡ್ ದಾಳಿ
ಪ್ರಾಕ್ಟೀಸ್ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ 18 ವರ್ಷದ ರೀತು ಸಾಯ್ನಿ ಮೇಲೆ ಈ ಆಸಿಡ್ ದಾಳಿ ನಡೆದಿದೆ. ಬೈಕಿನ ಮೇಲೆ ಬಂದ ಇಬ್ಬರು ಯುವಕರು ಈ ಕುಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೀತು ಅವರನ್ನು ನಗರದ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮುಖ ಮತ್ತು ಎದೆಯ ಭಾಗಕ್ಕೆ ಸುಟ್ಟ ಗಾಯಗಳು ಆಗಿವೆ.
ನಗರದ ಪ್ರೇಮನಗರ್ ವೃತ್ತದಲ್ಲಿ ಈ ಘಟನೆ ನಡೆದಿದೆ. ರೋಹ್ಟಕ್, ನವದೆಹಲಿಯಿಂದ 70 ಕಿಮೀ ದೂರದಲ್ಲಿದ್ದು, ಹರ್ಯಾನಾ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಅವರ ಸ್ವಕ್ಷೇತ್ರವಾಗಿದೆ.
'ದಾಳಿ ಯಾಕಾಯಿತು, ಹೇಗಾಯಿತು ಎಂಬುದರ ಬಗ್ಗೆ ನಮಗೆ ಯಾವುದೇ ಸುಳಿವಿಲ್ಲ. ಎಂದಿನಂತೆ ವಾಲೀಬಾಲ್ ಆಟ ಆಡಿಕೊಂಡು ಮನೆಗೆ ವಾಪಸಾಗುತ್ತಿದ್ದಾಗ ಆ ದುಷ್ಕರ್ಮಿಗಳು ತಮ್ಮ ಕೈಯಲ್ಲಿದ್ದ ಬಾಟಲಿಯಿಂದ ಆಸಿಡ್ ಎರಚಿದ್ದಾರೆ' ಎಂದು ರಾಜ್ಯಮಟ್ಟದ ವಾಲೀಬಾಲ್ ಆಟಗಾರ್ತಿ ರೀಟಾ ಅವರ ಅಣ್ಣ ಲಲಿತ್ ಸಾಯ್ನಿ ಹೇಳಿದ್ದಾರೆ.
ಘಟನೆಯ ನಂತರ ಪೊಲೀಸ್ ಉನ್ನತಾಧಿಕಾರಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ರೀತು ಆಘಾತದಿಂದ ಇನ್ನೂ ಹೊರಬಂದಿಲ್ಲ. ಆಕೆ ಚೇತಿರಿಸಿಕೊಂಡ ಬಳಿಕ ಘಟನೆಯ ಬಗ್ಗೆ ಸ್ಪಷ್ಟಚಿತ್ರಣ ಸಿಗಬಹುದು ಎಂದು ಪೊಲೀಸರು ಆಶಿಸಿದ್ದಾರೆ.
ಕಳೆದ ವರ್ಷವೂ ಹೀಗೇ ಟ್ಯೂಷನ್ ಮುಗಿಸಿಕೊಂಡು ವಾಪಸಾಗುತ್ತಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ್ದರು. ಇದುವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ.