ಡಿಕೆಶಿ ಕಾಂಗ್ರೆಸ್ಸಿಗೆ ಅಂಟಿದ ಕ್ಯಾನ್ಸರ್ : ತೇಜಸ್ವಿನಿ ರಮೇಶ್

ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗವಾಗಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ಕೇಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 'ಫೈರ್ ಬ್ರಾಂಡ್' ತೇಜಸ್ವಿನಿ ರಮೇಶ್ ಅವರಿಗೆ ಪತ್ರ ನೀಡಿದೆ. ತೇಜಸ್ವಿನಿ ಅವರಿಗೆ ಪತ್ರ ರವಾನಿಸಲಾಗಿದ್ದು, ಶೋಕಾಸ್ ನೋಟೀಸ್ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಮ್ಮ ಕೈಗಿನ್ನೂ ಶೋಕಾಸ್ ನೋಟೀಸ್ ಬಂದಿಲ್ಲ. ಬಂದ ಮೇಲೆ ಕೆಪಿಸಿಸಿಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ. ಯಡಿಯೂರಪ್ಪನವರನ್ನು ಹೊಗಳಿದ ಡಿಕೆಶಿಗೆ ಏಕೆ ನೋಟೀಸ್ ಇಲ್ಲ ಎಂದು ಪ್ರತಿಪ್ರಶ್ನೆ ಕೇಳಿದ್ದಾರೆ. ಒಂದಾನೊಂದು ಕಾಲದಲ್ಲಿ ಗಾಡ್ ಫಾದರ್ ಆಗಿದ್ದ ಡಿಕೆ ಶಿವಕುಮಾರ್ ವಿರುದ್ಧ ತಮ್ಮ ಮಾತಿನ ಗರಗಸವನ್ನು ಹಿರಿದಿದ್ದಾರೆ.
ನನಗಿಂತ ಮೊದಲು ಡಿಕೆ ಶಿವಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮಾತಿನ ಲಹರಿ ಹರಿಸಿರುವ ತೇಜಸ್ವಿನಿ ರಮೇಶ್, ಕಾಂಗ್ರೆಸ್ ಪಕ್ಷಕ್ಕೆ ಎಲ್ಲರಿಗಿಂತ ಹೆಚ್ಚಾಗಿ ಡಿಕೆ ಶಿವಕುಮಾರ್ ಅವರಿಂದಲೇ ಹಾನಿಯಾಗಿದೆ. ನನಗಿಂತ ಮೊದಲು ಅವರನ್ನು ಪಕ್ಷದಿಂದ ಕಿತ್ತುಹಾಕಬೇಕು ಎಂದು ವಾದಿಸಿದ್ದಾರೆ.
ಹುಚ್ಚು ನಾಯಿ : ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಕೆಶಿ ಅವರನ್ನು ಹುಚ್ಚು ನಾಯಿ, ಬಚ್ಚಲಲ್ಲಿ ಬಿದ್ದಿರುವ ಕೆಟ್ಟ ಹುಳು, ಕಾಂಗ್ರೆಸ್ಸಿಗೆ ಅಂಟಿದ ಕ್ಯಾನ್ಸರ್ ಎಂದೆಲ್ಲ ತೇಜ್ವಸ್ವಿನಿ ಜರಿದಿದ್ದಾರೆ. ಡಿಕೆಶಿ ಅವರು ಜಾತಿ ಹೆಸರು ಹೇಳಿ ಕಾಂಗ್ರೆಸ್ ಬೊಕ್ಕಸವನ್ನು ಬರಿದುಮಾಡುತ್ತಿದ್ದಾರೆ. ಹೆಂಗಸರ ಸೀರೆಯ ಸೆರಗಿಗೆ ಕೈಹಾಕಲೂ ಇಂಥವರು ಹೇಸುವುದಿಲ್ಲ ಎಂದು ವಾಚಾಮಗೋಚರವಾಗಿ ಬೈದಿದ್ದಾರೆ.
ನಾನೇನಿದ್ದರೂ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತೆ. ಕಾಂಗ್ರೆಸ್ಸಿನ ಒಳಿತಿಗಾಗಿ ದುಡಿಯುತ್ತಿದ್ದೇನೆ. ಆದರೆ, ಡಿಕೆಶಿ ಅಂಥವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಅಂಥವರನ್ನು ಮೊದಲು ಒದ್ದು ಓಡಿಸಬೇಕು ಎಂದು ಕಿಡಿ ಕಾರಿದ್ದಾರೆ. ಅವರೇ ನನ್ನನ್ನು ರಾಜಕಾರಣಕ್ಕೆ ತಂದಿದ್ದು ನಿಜವಾದರೂ, ರಾಜಕೀಯವಾಗಿ ನನ್ನನ್ನು ಸಂಪೂರ್ಣ ನಿರ್ಮಾಮ ಮಾಡಲು ಯತ್ನಿಸುತ್ತಿರುವ ಡಿಕೆಶಿಗೆ ನನ್ನ ಧಿಕ್ಕಾರ ಎಂದು ಕೆಂಡ ಉಗುಳಿದ್ದಾರೆ.
ಕನಕಪುರ ಎಂಎಲ್ಎ ಡಿಕೆ ಶಿವಕುಮಾರ್ ಮತ್ತು 2004ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಜೆಡಿಎಸ್ನ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸೋತಿದ್ದ ತೇಜಸ್ವಿನಿ ರಮೇಶ್ ಅವರ ನಡುವಿನ ಹಾವು ಮುಂಗುಸಿ ಜಗಳ ಹೊಸದೇನಲ್ಲ. 2009ರಲ್ಲಿ ಕೂಡ ಡಿಕೆಶಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ತೇಜಸ್ವಿನಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಆಗ್ರಹವಿತ್ತು.












Click it and Unblock the Notifications