ಟಿವಿ ಜ್ಯೋತಿಷಿ ನಿರ್ಮಲ್ ಬಾಬಾ ಬಂಧನ ಯಾವಾಗ?

ನಿರ್ಮಲ್ ಬಾಬಾ ಭಕ್ತ ರಾಕೇಶ್ ಕುಮಾರ್ ಸಿಂಗ್ ಎಪ್ರಿಲ್ 21ರಂದು ಫೋರ್ಬ್ಸ್ಗಂಜ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿದ್ದರು. ಇದರಿಂದ ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನೀಡುತ್ತಾ ಜನರನ್ನು ಮನರಂಜಿಸುತ್ತಿದ್ದ ಸ್ವಘೋಷಿತ ದೇವ ಮಾನವ ನಿರ್ಮಲ್ ಬಾಬಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ನಿರ್ಮಲ್ ಬಾಬಾ ಬಂಧನಾದೇಶವನ್ನು ಜಾರಿಗೊಳಿಸುವುದಕ್ಕಾಗಿ ದೆಹಲಿಗೆ ತೆರಳಿದ್ದ ಡಿಎಸ್ಪಿ ವಿಕಾಸ್ ಕುಮಾರ್ ನೇತೃತ್ವದ ನಾಲ್ವರು ಸಬ್ ಇನ್ಸ್ಪೆಕ್ಟರ್ಗಳು ಮತ್ತು ಇಬ್ಬರು ಕಾನ್ಸ್ಟೆಬಲ್ ಗಳ ತಂಡವು ಬರಿಗೈಯಲ್ಲಿ ವಾಪಸಾಗಿದೆ. ಬಂಧನದ ಭೀತಿಯಿಂದ ನಿರ್ಮಲ್ ಬಾಬಾ ಔರೈಯಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇನ್ನೂ ಇತ್ಯರ್ಥವಾಗಿಲ್ಲ.
ಧರ್ಮದ ಹೆಸರಿನಲ್ಲಿ ನಿರ್ಮಲ್ ಬಾಬಾ ತನಗೆ ವಂಚನೆ ಎಸಗಿದ್ದಾರೆ ಎಂದು ದೂರುದಾರ ರಾಕೇಶ್ ಕುಮಾರ್ ಸಿಂಗ್ ಆಪಾದಿಸಿದ್ದನು. ಭಾರತೀಯ ದಂಡ ಸಂಹಿತೆಯ ಕಲಂ 417, 419, 420 ಮತ್ತು 508 ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸ್ವತ: ತಾನು ದೇವಮಾನವ ಎಂದು ಹೇಳಿಕೊಳ್ಳುವ ಬಾಬಾ ವಿವಿಧ ವಿದ್ಯುನ್ಮಾನ ಮಾಧ್ಯಮಗಳಲ್ಲಿ, ತನ್ನ ಪವಾಡ ಶಕ್ತಿಯಿಂದ ತಾನು ಜನರ ಸಮಸ್ಯೆಗಳನ್ನು ನಿವಾರಿಸುವುದಾಗಿ ಜಾಹೀರಾತು ನೀಡಿದ್ದರು.
ಆ ಹಿನ್ನೆಲೆಯಲ್ಲಿ ದೆಹಲಿ ಮೂಲದ ಇನ್ನೊಬ್ಬರು ನಿರ್ಮಲ್ ಬಾಬಾ ವಿರುದ್ಧ ಇನ್ನೂ ಒಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೆಹಲಿ ಹೈಕೋರ್ಟ್, ದೆಹಲಿ ಹಾಗೂ ಕೇಂದ್ರ ಸರಕಾರಗಳಿಗೆ ಕಳೆದ ಬುಧವಾರ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯೆಗಳನ್ನು ದಾಖಲಿಸುವಂತೆ ನಿರ್ದೇಶಿಸಿದೆ. ನಿರ್ಮಲ್ ಬಾಬಾ ಹಾಗೂ ಆತನ ಪತ್ನಿಯ ವಿರುದ್ಧವೂ ಹೀಗೇ ಇನ್ನೂ ಅನೇಕಾನೇಕ ದೂರುಗಳು ದಾಖಲಾಗಿವೆ.
ಕಳೆದ ವಾರ ಉತ್ತರ ಪ್ರದೇಶದ ನ್ಯಾಯಾಲಯವೊಂದರ ನಿರ್ದೇಶನದ ಮೇರೆಗೆ ನಿರ್ಮಲ್ ಬಾಬಾ ವಿರುದ್ಧ ಲಕ್ನೊ ಪೊಲೀಸರು ಕೂಡ ವಂಚನೆ ಪ್ರಕರಣದ ಎಫ್ಐಆರ್ ದಾಖಲಿಸಿದ್ದಾರೆ. ತಾನ್ಯ ಠಾಕೂರ್ ಮತ್ತು ಆದಿತ್ಯ ಠಾಕೂರ್ ಎಂಬುವರು ದಾಖಲಿಸಿದ್ದ ದೂರಿನ ಆಧಾರದಲ್ಲಿ ಸ್ಥಳೀಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಗೋಮತಿ ನಗರ್ ಪೊಲೀಸ್ ಠಾಣೆಯಲ್ಲಿ ಈ ಎಫ್ಐಆರ್ ದಾಖಲಾಗಿದೆ.












Click it and Unblock the Notifications