ಶಿವಮೊಗ್ಗ ಆಪ್ತಮಿತ್ರರ ಕೋಳಿ ಜಗಳ ತಾರಕಕ್ಕೆ

ಗಮನಿಸಿ: ತಮ್ಮೆಲ್ಲ ದುಗುಡ-ದೂರು-ದುಮ್ಮಾನಗಳನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಿರುವ ಯಡಿಯೂರಪ್ಪ ಅವರು ಶನಿವಾರ 11.30ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಮಲ್ಲೇಶ್ವರಂನಲ್ಲಿರುವ ತಮ್ಮ ನೂತನ 'ಜನಸಂಪರ್ಕ' ಕಚೇರಿಯಲ್ಲಿ ನಡೆಸಲಿದ್ದಾರೆ. ಬಿಜೆಪಿ ಜತೆಗಿನ ತಮ್ಮ ಸಂಬಂಧಕ್ಕೆ ಯಡಿಯೂರಪ್ಪನವರು ತಾತ್ವಿಕ ಅಂತ್ಯ ಕರುಣಿಸುವ ಸಾಧ್ಯತೆಯಿದೆ.
ಆ ವೇಳೆ ತಮ್ಮ ಶಿವಮೊಗ್ಗದ ತಮ್ಮ ಆಪ್ತಮಿತ್ರ ಕೆಎಸ್ ಈಶ್ವರಪ್ಪ ಅವರನ್ನು ಯಡಿಯೂರಪ್ಪನವರು ಹಿಗ್ಗಾಮುಗ್ಗ ಜರಿದಿದ್ದರು. ಅದೆಲ್ಲ ಯಡಿಯೂರಪ್ಪ ನೀಡಿದ ಆಶೀರ್ವಾದ ಎಂದು ಈಶ್ವರಪ್ಪ ಮಹಾಪ್ರಸಾದವನ್ನು ಸ್ವೀಕರಿಸಿದ್ದರು. ಆದರೆ ಬಿಎಸ್ವೈ ಇನ್ನೂ ತಣ್ಣಗಾಗಿಲ್ಲ. ಮತ್ತೆ ಮತ್ತೆ ಕುದಿಯುತ್ತಲೇ ಇದ್ದಾರೆ.
ಈ ಬಾರಿ, ಬಿಜೆಪಿ ಪಕ್ಷವು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ನನ್ನ ಇಂದಿನ ಈ ದುಸ್ಥಿತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರು ಕಾರಣವೆಂದು ಯಡಿಯೂರಪ್ಪ ಗುಡುಗಿದ್ದಾರೆ.
ಜಾತಿ, ಉಪಜಾತಿಯನ್ನು ಪೋಷಿಸುವ ಮಠಾಧೀಶರನ್ನು ಧಿಕ್ಕರಿಸಬೇಕು ಎಂದು ಈಶ್ವರಪ್ಪ ಅವರು ಮೈಸೂರಿನಲ್ಲಿ ನಿನ್ನೆ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಗರಂ ಆಗಿರುವ ಯಡಿಯೂರಪ್ಪ ಅವರು ಈಶ್ವರಪ್ಪನವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹೇಳಿಕೆಯ ಮೂಲಕ ಈಶ್ವರಪ್ಪ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದಿದ್ದಾರೆ.
ತಮ್ಮನ್ನು ಇಂತಹ ದಯನೀಯ ಸ್ಥಿತಿಗೆ ತಳ್ಳಿದ ಪಕ್ಷದ ವಿರುದ್ಧ ತೀವ್ರವಾಗಿ ಅಸಮಾಧಾನ ಹೊಂದಿರುವ ಯಡಿಯೂರಪ್ಪ ಅವರು ಮುಂಬೈನಲ್ಲಿ ಇದೇ 25 ಹಾಗೂ 26 ರಂದು ನಡೆಯುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications