ಕುಶಾಲನಗರ: ನದಿಯ ಪಾಲಾದ ಮದುಮಗ
ವರ ಶಿವಣ್ಣ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿ. ಕುಶಾಲನಗರದಿಂದ ಸುಮಾರು 12 ಕಿ.ಮೀ. ದೂರದ ಕಣಿವೆ ಗ್ರಾಮದಲ್ಲಿ ಈ ಹೃದಯ ಕಲಕುವ ಘಟನೆ ನಡೆದಿದೆ. ಘಟನೆಯಲ್ಲಿ ಶಿವಣ್ಣ, ಆತನ ತಾಯಿ ನಿರ್ಮಲಾ (45), ಸೋದರ ಸಂಬಂಧಿ ನೀಲಾ (35) ಹಾಗೂ ನೀಲಾ ಅವರ ಮಗಳು ಪ್ರೀತಿ (8) ಮೃತಪಟ್ಟಿದ್ದಾರೆ.
ಕೊಪ್ಪದ ಶಿವಣ್ಣ ವಿವಾಹವು ಬೆಟ್ಟಂಗಳದ ಬಾಣವಾರ ನಿವಾಸಿ ಲಕ್ಷ್ಮೀ ಎಂಬವರೊಂದಿಗೆ ಕಣಿವೆಯ ರಾಮಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿತ್ತು. ಅದಕ್ಕಾಗಿ ವರನ ಕಡೆಯವರು ನಿನ್ನೆ ಸಂಜೆ ಕಲ್ಯಾಣ ಮಂಟಪಕ್ಕೆ ಆಗಮಿಸಿ ಅಲ್ಲಿ ತಂಗಿದ್ದರು. ನಿನ್ನೆ ರಾತ್ರಿ ವಿವಾಹ ಪೂರ್ವ ವಿಧಿ-ವಿಧಾನಗಳನ್ನು ಪೂರೈಸಿದ್ದರು.
ಇಂದು ಬೆಳಗ್ಗೆ (ಮೇ 18) ವರ ಶಿವಣ್ಣನ ಸೋದರ ಸಂಬಂಧಿಯೊಬ್ಬರ ಮಗಳು ಪ್ರೀತಿ, ಪಕ್ಕದಲ್ಲೇ ಹರಿಯುವ ಕಾವೇರಿ ನದಿಯ ಆಚೆ ದಡಕ್ಕೆ ತೂಗು ಸೇತುವೆಯ ಮೂಲಕ ಹೋಗಿದ್ದು, ಅಲ್ಲಿ ನದಿಗಿಳಿದು ಕೈಕಾಲುಗಳನ್ನು ತೊಳೆಯುತ್ತಿದ್ದಳು ಎನ್ನಲಾಗಿದೆ.
ಈ ಸಂದರ್ಭ ಬಂಡೆಕಲ್ಲಿನ ಮೇಲೆ ಕುಳಿತಿದ್ದ ಬಾಲಕಿ ಜಾರಿ ನದಿಗೆ ಬಿದ್ದಿದ್ದು, ನದಿಯಲ್ಲಿ ಮುಳುಗಿದಳೆನ್ನಲಾಗಿದೆ. ಇದನ್ನು ಕಂಡ ಆಕೆಯ ತಾಯಿ (ನೀಲಾ) ಕೂಡಾ ನದಿಗೆ ಹಾರಿದ್ದು, ಆಕೆಯೂ ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಿಸಲು ವರನ ತಾಯಿ ನಿರ್ಮಲಾ ಧಾವಿಸಿದ್ದು, ಅಷ್ಟರಲ್ಲಿ ವರ ಕೂಡಾ ಇವರ ರಕ್ಷಣೆಗಾಗಿ ನದಿಗೆ ಹಾರಿದ್ದಾರೆ. ಆದರೆ, ಇವೆರಲ್ಲರೂ ನದಿ ನೀರಿನಲ್ಲಿ ಮುಳುಗಿದ್ದಾರೆ.
ನಾಲ್ವರ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಕುಶಾಲನಗರ ಎಸ್ಐ ಚಿಕ್ಕಯ್ಯ, ಸೋಮವಾರಪೇಟೆ ತಹಶೀಲ್ದಾರ್ ಭಾಸ್ಕರ್ ಹಾಗೂ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.