ಸಾಮೂಹಿಕ ಆತ್ಮಹತ್ಯೆಗೆ ರಾಜ್ಯ ಬಿಜೆಪಿ ಸರಕಾರ ಸಜ್ಜು

ಆದರೆ ಎಲ್ಲವುದಕ್ಕೂ ಒಂದು ಕೊನೆಯಿರುತ್ತದೆ. ಅಂತಹ ಕೊನೆ ಇದೀಗ ಬಂದೇ ಬಿಟ್ಟಿದೆಯಾ? ಸದಾನಂದ ಗೌಡ ಬಣ ಹಾಗೂ ಯಡಿಯೂರಪ್ಪ ಬಣ ನಡುವಿನ ಮಸುಕಿನ ಗುದ್ದಾಟಗಳು ಕ್ರಮೇಣ ಮಸುಕಾಗುತ್ತಾ ಹಾದಿ ರಂಪ ಬೀದಿ ರಂಪದ ಮಟ್ಟಕ್ಕೆ ಬಂದು ನಿಂತಿದೆ. ಇಬ್ಬಣಗಳ ಯೋಧರು ಕತ್ತಿ ವರಸೆ ಮಾಡುತ್ತಿದ್ದು, ಯಾರ ತಲೆ ಉರುಳುವುದೋ ಅಥವಾ ಎಲ್ಲರ ತಲೆಗಳುರುಳಿ ವಿಧಾನಸಭೆಯ ಚುನಾವಣೆಗೆ ನಾಂದಿ ಹಾಡುತ್ತದೋ? ರಾಜ್ಯ ಬೆಕ್ಕಸ ಬೆರಗಾಗಿ ನೋಡುತ್ತಿದೆ.
ಭಾನುವಾರ ಮಧ್ಯಾಹ್ನದ ತನಕ ಕಮಲ ಪಾಳಯದಲ್ಲಿ ತಳಮಳ ಹುಟ್ಟಿಸುವ ಅನೇಕ ವಿದ್ಯಮಾನಗಳ ಕಿರು ಪರಿಚಯವನ್ನು ಈ ಕೆಳಗಿನ ಅಂಶಗಳು ನಿಮಗೆ ನೀಡುತ್ತವೆ. ಅಂದಹಾಗೆ, ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಣತಂತ್ರಗಳಲ್ಲಿ ಯಾಋ ಕೈಮೇಲಾಗುತ್ತದೋ ಕಾದು ನೋಡೋಣವಂತೆ.
* ರಾಜೀನಾಮೆ ಬಗ್ಗೆ ಸದಾನಂದರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
* ಮುಖ್ಯಮಂತ್ರಿ ಸದಾನಂದ ಗೌಡರು 9 ತಿಂಗಳಿಂದ ಶಾಸಕಾಂಗ ಪಕ್ಷದ ಸಭೆಯನ್ನೇ ಕರೆದಿಲ್ಲ. ಅವರು ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರಿಗೆ ಸಚಿವ, ಶಾಸಕರ ಮೇಲೆ ನಂಬಿಕೆ ಇಲ್ಲವಾಗಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಯಾರದೇ ಅಭಿಪ್ರಾಯ ಪಡೆಯದೆ ಸಚಿವರ ಬಗ್ಗೆ ವರಿಷ್ಠರಿಗೆ ದೂರು ನೀಡಿದ್ದಾರೆ - ಬಿಎಸ್ವೈ
* ರೇಸ್ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಬೀಡುಬಿಟ್ಟ ವಿ. ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಹಾಗೂ ಚಿಕ್ಕನಗೌಡ ಸುದೀರ್ಘ ಸಮಾಲೋಚನೆ.
* ಯಡಿಯೂರಪ್ಪ ಅವರ ಜೇಬಿನಲ್ಲಿ 8 ಸಚಿವರು ಹಾಗೂ 8 ಶಾಸಕರ ರಾಜೀನಾಮೆ ಪತ್ರಗಳು ಭದ್ರ.
* ವಿದೇಶ ಪ್ರವಾಸ ಮುಗಿಸಿ ಬಂದ ಈಶ್ವರಪ್ಪ ಅವರು ಸಚಿವ ಸುರೇಶ್ಕುಮಾರ್, ಆರೆಸ್ಸೆಸ್ ಮುಖಂಡ ಸಂತೋಷ್ ಜತೆಗೂಡಿ ಬಿಎಸ್ವೈ ಮನೆಗೆ ದೌಡು. ಅವರು ಬರುವ ಮುನ್ನವೇ ದೇವಸಂದ್ರದಲ್ಲಿ ವೀರಶೈವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಿಂದ ನಿರ್ಗಮಿಸಿದ ಯಡಿಯೂರಪ್ಪ.
* ಸರ್ವಾಧಿಕಾರ ಧೋರಣೆ, ಪ್ರತಿಷ್ಠೆಗೆ ಬಿಜೆಪಿ ಮನ್ನಣೆ ನೀಡುವುದಿಲ್ಲ. ಯಾವತ್ತಿದ್ದರೂ ನೈತಿಕತೆಗೆ ಮಾತ್ರ ಬಿಜೆಪಿಯಲ್ಲಿ ಮನ್ನಣೆ ಹಾಗೂ ಮರ್ಯಾದೆ. ಆದ್ದರಿಂದ ಬಿಜೆಪಿಯಲ್ಲಿದ್ದವರು ನಾನು, ನಾನು ಎನ್ನುವ ಧೋರಣೆಯನ್ನು ಬಿಡಬೇಕು - ಈಶ್ವರಪ್ಪ
* ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ರಹಸ್ಯ ಮಾತುಕತೆ
* ವರಿಷ್ಠರನ್ನು ಭೇಟಿ ಮಾಡಲು ಭಾನುವಾರ ಮಧ್ಯಾಹ್ನ ನವದೆಹಲಿಗೆ ತೆರಳಿದ ಮುಖ್ಯಮಂತ್ರಿ ಸದಾನಂದ ಗೌಡ. ಸಂಜೆ ವರಿಷ್ಠರೊಂದಿಗೆ ಮಾತುಕತೆ.
* ಬಿಜೆಪಿಯಲ್ಲಿ ಎರಡು ಬಣಗಳ ಮಧ್ಯೆ ಭಿನ್ನಮತ ಉಲ್ಭಣಿಸಿದೆ. ಲಿಂಗಾಯಿತ ಸಮುದಾಯದ ಮೇಲೆ ದಾಳಿ ನಡೆಯುತ್ತಿದೆ - ಬಿಜೆಪಿ ಹೈಕಮಾಂಡ್ ವಿರುದ್ಧ ಬೆಳಗಾವಿ ಸಂಸದ ಸುರೇಶ್ ಅಂಗಡಿ ನವದೆಹಲಿಯಲ್ಲಿ ಕಿಡಿಕಿಡಿ.
* ಯಡಿಯೂರಪ್ಪರೊಬ್ಬರೇ ಭ್ರಷ್ಟಾಚಾರ ಮಾಡಿಲ್ಲ. ಎಸ್.ಎಂ. ಕೃಷ್ಣ, ಎಚ್.ಡಿ. ದೇವೇಗೌಡರ ಕಾಲದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಆದರೆ, ಯಡಿಯೂರಪ್ಪ ಲಿಂಗಾಯಿತ ಸಮುದಾಯದ ವ್ಯಕ್ತಿ ಎಂಬ ಕಾರಣಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗಿದೆ - ಸುರೇಶ್ ಅಂಗಡಿ ಆರೋಪ.
* ರಾಜ್ಯ ಬಿಜೆಪಿಯಲ್ಲಿ ಉಲ್ಭಣಿಸಿರುವ ಬಿಕ್ಕಟ್ಟನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಬಿಜೆಪಿಯಲ್ಲಿ ಯಾರೂ ಕೂಡಾ ರಾಜೀನಾಮೆ ಕೊಟ್ಟಿಲ್ಲ - ಬಿಜೆಪಿ ವರಿಷ್ಠ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು
* ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆನಂದ್ ಅಸ್ನೋಟಿಕರ್ ಅವರು ಇಂದು ದೆಹಲಿಗೆ ತೆರಳಿ ಜಾರಕಿಹೊಳಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ, 20 ಶಾಸಕರು ಹಾಗೂ 5 ಪಕ್ಷೇತರ ಶಾಸಕರೊಂದಿಗೆ ಗೋವಾಗೆ ತೆರಳಿ, ಸಮಾಲೋಚನೆ ನಡೆಸುವುದಾಗಿ ಹೇಳಿಕೆ.
* ಒಟ್ಟಾರೆ, ಹರಿದು ಹಂಚಿಹೋಗಿರುವ ಶಾಸಕರು. ಬಿಜೆಪಿಯನ್ನು ಸುಡುತ್ತಿರುವ ವೈಮನಸ್ಸೆಂಬ ಬೆಂಕಿ. ಮೀಟಿಂಗ್ ಮೇಲೆ ಮೀಟಿಂಗ್. ಮಾತಿಗೆ ಮಾತು, ಏಟಿಗೆ ಎದಿರೇಟು. ಇದ್ದೂ ಸತ್ತಂತಿರುವ ಬಿಜೆಪಿ ಹೈಕಮಾಂಡ್.












Click it and Unblock the Notifications