'ಅಕ್ರಮ ಆಸ್ತಿ ವೀರ' ಜಗನ್ ಗೆ ಕೋರ್ಟ್ ಬುಲಾವ್
ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಜರುಗುತ್ತಿದ್ದು, ತನ್ನಿಮಿತ್ತ ಮೇ 28 ರಂದು ಕೋರ್ಟ್ ಹಾಜರಾಗಿ ಎಂದು ಸಿವಿಐ ಪ್ರಧಾನ ವಿಶೇಷ ಜಡ್ಜ್ ಎ ಪುಲ್ಲಯ್ಯ ಅವರು ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸುಪುತ್ರ ಜಗನ್ ಹಾಗೂ ಇತರೆ 12 ಮಂದಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಮಾರ್ಚ್ 31ರಂದು ಸಿಬಿಐ ದಾಖಲಿಸಿದ ಮೊದಲ ಆರೋಪಪಟ್ಟಿಯ ಅನುಸಾರ ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ. ಈ ಮಧ್ಯೆ, ಜಗನ್ ರನ್ನು A1 ಎಂದು ಗುರುತಿಸಿ ಸಿಬಿಐ ಮೂರನೇ ಆರೋಪಪಟ್ಟಿಯನ್ನೂ ದಾಖಲಿಸಿದೆ.
ಒಂದು ವಾರದ ಹಿಂದೆಯೇ ಸಮನ್ಸ್ ಜಾರಿಯಾಗಬೇಕಿತ್ತಾದರೂ ನಿನ್ನೆ ಸೋಮವಾರ ಸ್ವಯಂ ಕೇಸ್ ಕೈಗೆತ್ತಿಕೊಂಡ ಜಡ್ಜ್ ಪುಲ್ಲಯ್ಯ ಅವರು ಜಗನ್ ಗೆ ಸಮನ್ಸ್ ನೀಡಿ, ರಜೆ ಮೇಲೆ ಹೋದ ಕಾರಣ ಜಗನ್ ಗೆ 20 ದಿನಗಳ ಕಾಲಾವಕಾಶ ನೀಡಿದ್ದಾರೆ. ಜಗನ್ ಆಡಿಟರ್ ವಿಜಯ್ ಸಾಯಿರೆಡ್ಡಿ, ಐಎಎಸ್ ಅಧಿಕಾರಿ ಬಿಪಿ ಆಚಾರ್ಯ, ಹೆಟಿತೊ ಡೈರೆಕ್ಟರ್ ಎಂ ಶ್ರೀನಿವಾಸ ರೆಡ್ಡಿ, ಅರಬಿಂದೋ ಸಂಸ್ಥೆಯ ನಿತ್ಯಾನಂದ ರೆಡ್ಡಿ ಸೇರಿದಂತೆ ಒಟ್ಟು 13 ಮಂದಿಗೆ ಸಮನ್ಸ್ ಜಾರಿಯಾಗಿದೆ.
ಅಂದಿನ ಬೆಲೆಯಲ್ಲಿ ಸುಮಾರು 18 ಕೋಟಿ ರುಪಾಯಿ ಮೌಲ್ಯದ 75 ಎಕರೆ ಜಮೀನನ್ನು ಸುಮಾರು 5 ಕೋಟಿ ರು. ಗೆ ವಿಶೇಷ ವಿತ್ತ ವಲಯಕ್ಕೆಂದು ಐಎಎಸ್ ಅಧಿಕಾರಿ ಬಿಪಿ ಆಚಾರ್ಯ 'ಮಧ್ಯಸ್ಥಿಕೆಯಲ್ಲಿ' ಜಗನ್ ಕಂಪನಿಗೆ ಪರೋಕ್ಷವಾಗಿ ಸಂದಾಯವಾಗಿದೆ ಎಂಬುದು ಮೊದಲ ಆರೋಪಪಟ್ಟಿಯಲ್ಲಿನ ದೂರು.