ಬರ ಇದ್ರೂ ಹೊರಟೇ ಬಿಟ್ರಪ್ಪ ಈಶ್ವರಪ್ಪ ವಿದೇಶಕ್ಕೆ
ಅದೂ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರಾಗಿ ಸನ್ಮಾನ್ಯ ಕೆ ಎಸ್ ಈಶ್ವರಪ್ಪ ಅವರು ಇಂದು ಸೋಮವಾರ ನೇಪಾಳ, ಮಲೇಷ್ಯಾಕ್ಕೆ ಹೊರಟರು. ಅದೂ ಸಂಸಾರಸಮೇತ...ಹೀಗೆ ನಾಲ್ಕು ದಿನ ಕಾಲ...'ದೇಶಾಂತರ' ಹೊರಟಿದ್ದಾರೆ.
ವಿದೇಶ ಪ್ರವಾಸದ ಅವಸರದಲ್ಲಿದ್ದ ಈಶ್ವರಪ್ಪ, ತಮ್ಮ ಕುಲಬಾಂಧವರು ಭಾನುವಾರ ದಾವಣಗೆರೆಯಲ್ಲಿ ಆಯೋಜಿಸಿದ್ದ ಸಮಾವೇಶಕ್ಕೂ ಚಕ್ಕರ್ ಹೊಡೆದಿದ್ದಾರೆ. ಅತ್ತ ಸಿದ್ದರಾಮಯ್ಯನವರು 'ಈಶ್ವರಪ್ಪ ಬರಬೇಕಿತ್ತು. ಏನು ರಾಜಕಾರ್ಯವೋ ಅವರಿಗೆ' ಎಂದು ಈಶ್ವರಪ್ಪನವರ ವಿದೇಶ ಪ್ರವಾಸ ಗುಟ್ಟು ತಿಳಿಯದೆ ಮುಗ್ಧರಾಗಿ ಹೇಳಿದ್ದಾರೆ.
ಇತ್ತೀಚೆಗೆ ಬರದ ಮಧ್ಯೆ ವಿದೇಶಕ್ಕೆ ತೆರಳಿದ ಇದೇ (ಬೇ)ಜವಾಬ್ದಾರಿಯುತ ಗಣ್ಯರು ಏನೆಲ್ಲ ಪಡಿಪಾಟಲು ಬಿದ್ದರು ಎಂಬುದು ಜಗತ್ತಿಗೇ ಗೊತ್ತಿದೆ. ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಸಂಪುಟ ವಿಸ್ತರಣೆ ಎಂಬ ಬೃಹನ್ನಾಟಕ ಸದ್ಯದಲ್ಲೇ ನೆರವೇರಬೇಕಿದೆ. ಆದರೂ ನಮ್ಮ ಈಶ್ವರಪ್ಪ ಹೊರಟರಪ್ಪ ವಿದೇಶಕ್ಕೆ...
ಇನ್ನು, ಸರಕಾರಕ್ಕೆ ಪಕ್ಷದ ವತಿಯಿಂದ ಕಾಲಕಾಲಕ್ಕೆ ಸಲಹೆ ಮಾರ್ಗದರ್ಶನ ನೀಡಬೇಕಾದ ಗುರುತರ ಜವಾಬ್ದಾರಿ ಹೊತ್ತ ಸನ್ಮಾನ್ಯ ರಾಜ್ಯಾಧ್ಯಕ್ಷರು ವಿದೇಶ ಪ್ರವಾಸಕ್ಕೆ ಹೊರಟಿದ್ದು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆಯೇ ಎಂಬುದು ತಿಳಿದುಬಂದಿಲ್ಲ.