ಕಾಂಡೋಮ್ ಬಳಸಿ ಎಂದ ಮಾತ್ರಕ್ಕೆ ಡೈವೋರ್ಸ್ ಇಲ್ಲ
ಪತ್ನಿ ತಾನು ಗರ್ಭವತಿಯಾಗುವುದು ಬೇಡವೆಂದ ಮಾತ್ರಕ್ಕೆ ಅದು ಕೌಟುಂಬಿಕ ಕ್ರೌರ್ಯ ಆಗದು. ಆ ನೆಲೆಯಲ್ಲಿ ಪತಿ ಆಕೆಯಿಂದ ವಿಚ್ಛೇದನ ಪಡೆಯುವುದು ಸರ್ವಥಾ ಸಾಧುವಲ್ಲ. ಹಾಗಾಗಿ ದಂಪತಿಯನ್ನು ಬೇರ್ಪಡಿಸುವುದಕ್ಕೆ ಕಾನೂನು ಸಮ್ಮತಿ ನೀಡುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟ ನೀಡಿದೆ.
ಪ್ರದೀಪ್ ಬಾಪಟ್ (30) ಎಂಬ ವ್ಯಕ್ತಿಯು ತನ್ನ ಪತ್ನಿ ಪ್ರೇರಣಾ (26) ಜತೆ ಮದುವೆಯಾದ ಹೊಸದರಲ್ಲಿ ಮಧುಚಂದ್ರಕ್ಕೆ ತೆರಳಿದ್ದರು. ಆದರೆ ಹನಿಮೂನಿನಲ್ಲಿ ಸಂಭೋಗದ ವೇಳೆ ಕಾಂಡೋಮ್ ಬಳಸುವಂತೆ ಪ್ರೇರಣಾ ತನ್ನ ಗಂಡನಿಗೆ ತಾಕೀತು ಮಾಡಿದ್ದರು. ಇದರಿಂದ ಕೆರಳಿದ ಪ್ರದೀಪ್ ಮತ್ತಷ್ಟು ಪಿಳ್ಳೆನವಗಳನ್ನು ಸೃಷ್ಟಿಸಿ, ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿದ್ದರು.
ಆದರೆ, ಮದುವೆಯಾದ ಆರಂಭದಲ್ಲೇ ತನ್ನ ಗಂಡನ ಆರ್ಥಿಕ ಪರಿಸ್ಥಿತಿ ಸದೃಢವಾಗಿಲ್ಲ ಎಂಬುದು ಪ್ರೇರಣಾಗೆ ಮನದಟ್ಟಾಗಿತ್ತು. ಮಗುವಿಗೆ ಉತ್ತಮ ಭವಿಷ್ಯ ಕಲ್ಪಿಸುವ ದೂರದೃಷ್ಟಿಯಿಂದ ತಾನು ಗರ್ಭವತಿಯಾಗಲು ನಿರಾಕರಿಸಿದ್ದಳು ಎಂದು ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ತಿಳಿಸಿದರು. 2007ರ ಫೆಬ್ರವರಿಯಲ್ಲಿ ಮದುವೆಯಾದ ಪ್ರೇರಣಾ, ಅದೇ ವರ್ಷ ಜೂನಿನಲ್ಲಿ ತವರು ಮನೆಗೆ ವಾಪಸಾಗಿದ್ದರು.
ಈ ಮಧ್ಯೆ, ಕೋರ್ಟಿನಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದಾಗ ಪ್ರದೀಪನ ವಕೀಲರಿಂದ 'ಹಾಗಾದರೆ ದಂಪತಿ ಹನಿಮೂನಿಗೆ ಹೋಗುವುದಾದರೂ ಏಕೆ?' ಎಂಬ ವಾದ ತೂರಿ ಬಂತು. ಅದಕ್ಕೆ ಇಡೀ ಕೋರ್ಟ್ ಹಾಲಿನಲ್ಲಿ ನಗೆಬುಗ್ಗೆ ಅಲೆಅಲೆಯಾಗಿ ತೇಲಿಬಂತು.
'ಗಂಡನ ಆರ್ಥಿಕ ಪರಿಸ್ಥಿತಿ ಸದೃಢವಾಗಿಲ್ಲ ಎನ್ನುವ ಹಾಗಿದ್ದರೆ ಮೊದಲೇ ಅದನ್ನೆಲ್ಲ ವಿಚಾರಿಸಿ, ತಿಳಿದುಕೊಳ್ಳದೆ ಮದುವೆ ಏಕಾದಿರಿ' ಎಂದು ನ್ಯಾಯಾಧೀಶರಾದ ಪಿಜಿ ಮಜುಂದಾರ್ ಮತ್ತು ಅನೂಪ್ ಮೊಹ್ತಾ ಅವರು ಪ್ರೇರಣಾ ಬಗ್ಗೆ ಗರಂ ಆದರು. ಅದಕ್ಕೆ ದೊರೆತ ಉತ್ತರ ಕರುಣಾಜನಕವಾಗಿತ್ತು. ಸ್ವಾಮಿ, ಆಕೆಯ ಮನೆಯ ದೊಡ್ಡ ಹೆಣ್ಣು ಮಗಳು. ಆಕೆಯ ಮದುವೆಯಾಗದ ಹೊರತು ಆಕೆಯ ತಂಗಿಗೆ ಮದುವೆಯಾಗದು. ಆದ್ದರಿಂದ ಅನಿವಾರ್ಯವಾಗಿ ಮದುವೆಗೆ ಒಪ್ಪಿದ್ದರು ಎಂದು ವಕೀಲರು ಕೋರ್ಟ್ ಗಮನ ಸೆಳೆದರು.
ಈ ತೀರ್ಪು ಬೇರೆಯವರಿಗೂ ಪಾಠವಾಗಲಿ. ಮದುವೆಗೆ ಮುನ್ನ ಸಾಕಷ್ಟು ಪೂರ್ವಾಪರ ವಿಚಾರಿಸಿ, ಮನನ ಮಾಡಿಕೊಂಡು ಮದುವೆಗೆ ಅಣಿಯಾಗಿ ಎಂದು ನ್ಯಾಯಾಧೀಶರಾದ ಮಜುಂದಾರ್ ಕಿವಿಮಾತು ಹೇಳಿದರು.